ಹೊಸದಿಲ್ಲಿ: ನಾಗಾಲ್ಯಾಂಡ್ನ ಮೊನ್ ಜಿಲ್ಲೆಯಲ್ಲಿ ಭದ್ರತಾ ಪಡೆ ನಾಗರಿಕರ ಹತ್ಯೆ ನಡೆಸಿರುವುದನ್ನು ಬಿಜೆಪಿಯ ನಾಗಾಲ್ಯಾಂಡ್ ಘಟಕ “ಹತ್ಯಾಕಾಂಡ' ಎಂದು ಕರೆದಿದೆ. ಅಲ್ಲದೆ, ಇದು “ಯುದ್ಧಾಪರಾಧ' ಹಾಗೂ “ನರಮೇಧ'ಕ್ಕೆ ಸಮಾನವಾಗಿದೆ ಎಂದು ಹೇಳಿದೆ. ಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್ಎಸ್ ಪಿಎ)ಯನ್ನು ರದುಗೊಳಿಸುವಂತೆ ಬಿಜೆಪಿ ಆಗ್ರಹಿಸಿದೆ.
theprint'ನೊಂದಿಗೆ ಸೋಮವಾರ ಮಾತನಾಡಿದ ನಾಗಾಲ್ಯಾಂಡ್ನ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಹಾಯಕ ಸಚಿವ ತೇಮ್ಜೆನ್ ಇಮ್ಹಾ ಎಲೋಂಗ್, 14 ನಾಗರಿಕರ ಹತ್ಯಾಕಾಂಡಕ್ಕೆ ಯಾವುದೇ ಸಮರ್ಥನೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
“ಅಮಾಯಕ ಜನರು ಕೆಲಸ ಮುಗಿಸಿ ಹಿಂದಿರುಗುತ್ತಿದ್ದರು. ಅವರಲ್ಲಿ ಯಾವುದೇ ಆಯುಧಗಳು ಇರಲಿಲ್ಲ. ಗುಂಡು ಹಾರಿಸುವ ಮುನ್ನ ಸೇನೆ ಸೂಕ್ತ ಬೇಹುಗಾರಿಕೆ ಮಾಹಿತಿ ಸಂಗ್ರಹಿಸಿರಲಿಲ್ಲ. ಇದು ಶಾಂತಿ ಕಾಲದ ಯುದ್ಧಾಪರಾಧ ಹಾಗೂ ನರಮೇಧಕ್ಕೆ ಸಮಾನವಾಗಿದೆ' ಎಂದು ಎಲೋಂಗ್ ಹೇಳಿದರು.
“ಎಎಫ್ಎಸ್ಪಿಎಯ ಕಾರಣಕ್ಕೆ ರಾಜ್ಯದಲ್ಲಿ ಅಮಾಯಕ ಜನರು ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಜನರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ತಿಂಗಳ ಹಿಂದೆ ಮಣಿಪುರದಲ್ಲಿ ನಡೆದ ಹೊಂಚು ದಾಳಿಯಲ್ಲಿ ಟಿಝಿಟ್ ಪ್ರದೇಶದ ನಮ್ಮ ಕೊನ್ಯಾಕ್ ನಾಗ ಜನರು ಹುತಾತ್ಮರಾದರು' ಎಂದು ಎಲೋಂಗ್ ಹೇಳಿದರು.