ಹೊಸದಿಲ್ಲಿ: ನಾಗಾಲ್ಯಾಂಡ್ ಗೋಲಿಬಾರ್ ಪ್ರಕರಣದ ಕುರಿತಂತೆ ಸೋಮವಾರ ವಿಷಾದ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಘಟನೆಯ ಬಗೆಗಿನ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಒಂದು ತಿಂಗಳೊಳಗೆ ಪೂರ್ಣಗೊಳಿಸಲಿದೆ. ಅಲ್ಲದೆ, ಬಂಡುಕೋರರ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಂದರ್ಭ ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲ ಸಂಸ್ಥೆಗಳು ಖಾತರಿ ನೀಡಬೇಕು ಎಂದಿದ್ದಾರೆ.
ಲೋಕಸಭೆಗೆ ನೀಡಿದ ಹೇಳಿಕೆಯಲ್ಲಿ ಅವರು, ಸರಕಾರ ಪರಿಸ್ಥಿತಿಯನ್ನು ನಿಕಟವಾಗಿ ಪರಿಶೀಲಿಸುತ್ತಿದೆ ಹಾಗೂ ಈ ಪ್ರದೇಶದಲ್ಲಿ ಶಾಂತಿ ಕಾಪಾಡಲು ಅಗತ್ಯವಿರುವ ಎಲ್ಲ ಕ್ರಮ ಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.
ನಾಗಾಲ್ಯಾಂಡ್ನ ಮೊನ್ ಜಿಲ್ಲೆಯಲ್ಲಿ ನಡೆದ ದುರದೃಷ್ಟಕರ ಘಟನೆಗೆ ಭಾರತ ಸರಕಾರ ವಿಷಾದ ವ್ಯಕ್ತಪಡಿಸುತ್ತದೆ ಹಾಗೂ ಮೃತ ಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತದೆ. ---ಅಮಿತ್ ಶಾ, ಕೇಂದ್ರ ಗೃಹ ಸಚಿವ |
ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಾಡಳಿತ ಘಟನೆ ನಡೆದ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.
ಡಿಸೆಂಬರ್ 4ರಂದು ಹಾಗೂ ತರುವಾಯ ನಡೆದ ಘಟನೆಯಲ್ಲಿ ತಪ್ಪು ಗ್ರಹಿಕೆಯಿಂದ ಹತ್ಯೆಯಾದ ವ್ಯಕ್ತಿಗಳ ಕುಟುಂಬಗಳಿಗೆ ಸಂತಾಪವನ್ನು ಅಮಿತ್ ಶಾ ವ್ಯಕ್ತಪಡಿಸಿದರು. ಘಟನೆಯ ಬಗ್ಗೆ ವಿವರಿಸಿದ ಶಾ, ನಾಗಾಲ್ಯಾಂಡ್ನ ಮೊನ್ ನಲ್ಲಿ ಬಂಡುಕೋರರ ಚಲನವಲನದ ಬಗ್ಗೆ ಸೇನೆ ಮಾಹಿತಿ ಸ್ವೀಕರಿಸಿತ್ತು. ಆನಂತರ 21 ಪ್ಯಾರಾ ಕಮಾಂಡೊ' ಘಟಕ ಹೊಂಚು ದಾಳಿ ನಡೆಸಿತು ಎಂದರು.
ವಾಹನ ನಿಲ್ಲಿಸುವಂತೆ ಭದ್ರತಾ ಪಡೆ ಸೂಚಿಸಿತ್ತು. ಆದರೆ, ವಾಹನ ನಿಲ್ಲದೆ ಮುಂದುವರಿಯಿತು. ಈ ಹಿನ್ನೆಲೆಯಲ್ಲಿ ವಾಹನದಲ್ಲಿ ಉಗ್ರರು ಇರುವ ಬಗ್ಗೆ ಶಂಕಿಸಿ ಭದ್ರತಾ ಪಡೆ ಯೋಧರು ಗುಂಡು ಹಾರಿಸಿದರು ಎಂದು ಅವರು ಹೇಳಿದರು.ಭದ್ರತಾ ಪಡೆಗಳು ಹಾರಿಸಿದ ಗುಂಡಿಗೆ ವಾಹನದಲ್ಲಿದ್ದ 8 ಮಂದಿಯಲ್ಲಿ 6 ಮಂದಿ ಸಾವನ್ನಪ್ಪಿದರು. ಆದರೆ, ಆನಂತರ ತಪ್ಪಾಗಿ ಗ್ರಹಿಸಿ ಗುಂಡು ಹಾರಿಸಿರುವುದು ಭದ್ರತಾ ಪಡೆಯ ಅರಿವಿಗೆ ಬಂತು ಎಂದು ಅಮಿತ್ ಶಾ ಹೇಳಿದ್ದಾರೆ.