ಭಟ್ಕಳದ ಪ್ರತಿಮನೆಯಲ್ಲೋ ಮೊಳಗಿದ ಅಲ್ಲಾಹು ಅಕ್ಬರ್ ಮಂತ್ರಘೋಷ
ಭಟ್ಕಳ: ಕೋವಿಡ್ -19 ಜಗತ್ತಿನಾದ್ಯಂತ ಸಂಕಷ್ಟವನ್ನು ಸೃಷ್ಟಿಸಿದ್ದು ಎಲ್ಲ ರೀತಿಯ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿದೆ.
ಭಾನುವಾರ ಭಟ್ಕಳ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಈದುಲ್ ಫೀತ್ರ್ ಹಬ್ಬವನ್ನು ಅತ್ಯಂತ ಸರಳವಾಗಿ ಯಾವುದೇ ಸಡಗರ ಸಂಭ್ರಮಗಳಿಲ್ಲದೆ ಆಚರಿಸಲಾಯಿತು. ಈದ್ಗಾ ಮತ್ತು ಮಸೀದಿಗಳಲ್ಲಿ ನಿರ್ವಹಿಸಲ್ಪಡುವ ಈದ್ ವಿಶೇಷ ಪ್ರಾರ್ಥನೆಗೆ ಈ ಬಾರಿ ಅವಕಾಶವಿಲ್ಲದ ಕಾರಣ ಭಟ್ಕಳದ ಮುಸ್ಲಿಮರು ತಮ್ಮ ತಮ್ಮ ಮನೆಗಳಲ್ಲೇ ಈದ್ ಪ್ರಾರ್ಥನೆ ಸಲ್ಲಿಸಿ ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್(ದೇವನು ಮಹಾನನು) ಎಂಬ ಮಂತ್ರಘೋಷವನ್ನು ಮೊಳಗಿಸಿದರು.
ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಪ್ರತಿಯೊಂದು ಮನೆಯಲ್ಲೋ ತಮ್ಮ ಕುಟುಂಬದ ಸದಸ್ಯರೊಡನೆ ನಮಾಝ್ ನಿರ್ವಹಿಸುವುದರ ಮೂಲಕ ಕೊರೋನಾ ಸಂಕಷ್ಟದಿಂದ ಜಗತ್ತನ್ನು ಪಾರು ಮಾಡುವಂತೆ ಸೃಸ್ಟಿಕರ್ತನಲ್ಲಿ ಮೊರೆಯಿಟ್ಟು ಕಣ್ಣೀರು ಹಾಕಿದರು.
ಇಂದು ಸಂಪೂರ್ಣ ಲಾಕ್ಡೌನ್ ಪಾಲನೆ ಮಾಡುವೊದರೊಂದಿಗೆ ಭಟ್ಕಳದ ಪೊಲೀಸ್ ಅಧಿಕಾರಿಗಳು ತುಂಬಾ ಕಟ್ಟುನಿಟ್ಟಿನ ಕ್ರಮವನ್ನು ಜರಗಿಸಿದ್ದರು. ಯಾರನ್ನೂ ಕೂಡ ಹೊರಗಡೆ ಕಾಲಿಡದಂತೆ ನೋಡಿಕೊಂಡಿದ್ದು ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಜನರ ಅನಗತ್ಯ ಓಡಾಟಕ್ಕೆ ನಿರ್ಬಂಧ ವಿಧಿಸಿದರು.
ಈದ್ ದಿನ ಪ್ರತಿಯೊಬ್ಬರು ತಮ್ಮ ಇತರ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಒಂದು ಮೊಹಲ್ಲಾದಿಂದ ಇನ್ನೊಂದು ಮೊಹಲ್ಲಾಕ್ಕೆ ಹೋಗುವ ವಾಡಿಕೆಯಿದ್ದು ಇಂದು ಮಾತ್ರ ಇದಕ್ಕೆ ಯಾವುದೇ ಅವಕಾಶ ನೀಡಲಿಲ್ಲ ಎಂದು ಹೇಳಲಾಗುತ್ತಿದೆ. ರಮಝಾನ್ ತಿಂಗಳ ಪೂರ್ತಿ ಇಲ್ಲಿ ಯಾವುದೇ ರೀತಿಯ ಸಾಮೂಹಿಕ ಪ್ರಾರ್ಥನೆಗಳು ನಡೆಯದೆ ಮಸೀದಿಗಳಿಗೆ ಬೀಗ ಬಿದ್ದಿತ್ತು. ಇಂದು ಇಲ್ಲಿನ ಬಂದರ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ 10ಸಾವಿರಕ್ಕೂ ಹೆಚ್ಚು ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ ಲಾಕ್ಡೌನ್ ನಿಂದಾಗಿ ಈದ್ಗಾ ಮೈದಾನ ಜನರಿಲ್ಲದೆ ಬಿಕೋ ಎನ್ನುತ್ತಿತ್ತು.
ವಿವಿಧ ಗಣ್ಯರಿಂದ ಈದ್ ಶುಭಾಶಯ: ಭಟ್ಕಳದಲ್ಲಿ ಮನೆಯಲ್ಲಿ ಈದ್ ಆಚರಿಸಿಕೊಂಡಿರುವ ಇಲ್ಲಿನ ಎರಡೂ ಜಮಾಅತ್ನ ಮುಖ್ಯ ಖಾಝಿಗಳಾದ ಮೌಲಾನ ಮುಹಮ್ಮದ್ ಇಕ್ಬಾಲ್ ಮುಲ್ಲಾ ನದ್ವಿ, ಮೌಲಾನ ಕ್ವಾಜಾಮುಹಿದ್ದೀನ್ ಅಕ್ರಮಿ ಮದನಿ ನದ್ವಿ, ಜಾಮಿಯಾ ಇಸ್ಲಾಮಿಯಾ ಪ್ರಾಂಶುಪಾಲ ಮೌಲಾನ ಮಕ್ಬೂಲ್ ಕೋಬಟ್ಟೆ, ಅಲಿಮಿಯಾ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮೌಲಾನ ಇಲ್ಯಾಸ್ ನದ್ವಿ, ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಝಮ್ಮಿಲ್ ಖಾಝೀಯಾ, ತಂಝೀಮ್ ಸಂಸ್ಥೆಯ ಮುಖಂಡರಾದ ಇನಾಯತುಲ್ಲಾ ಶಾಬಂದ್ರಿ, ಎಸ್.ಎಂ.ಸೈಯ್ಯದ್ ಪರ್ವೇಝ್, ಅಬ್ದುಲ್ ರಕೀಬ್ ಎಂ.ಜೆ, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಇಂಜಿನೀಯರ್ ನಝೀರ್ ಆಹ್ಮದ್ ಖಾಝಿ, ರಾಬ್ತಾ ಮಿಲ್ಲತ್ ಉ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿಮುಹಮ್ಮದ್ ತಲ್ಹಾ ಸಿದ್ದಿಬಾಪಾ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಟ್ಕಳದ ಸಮಸ್ತ ಹಿಂದೂ ಮುಸ್ಲಿಮ್ ಬಾಂಧವರಿಗೆ ಈದ್ ಶುಭಾಶಯಗಳನ್ನು ಕೋರಿದ್ದಾರೆ.