ಮಂಗಳೂರು : ಕಡಲ ತಡಿ ಮಂಗಳೂರಿನಲ್ಲಿ ಮತ್ತೆ ರಕ್ತದ ಕೋಡಿ ಹರಿದಿದೆ. ಇಲ್ಲಿನ ಬೊಕ್ಕಪಟ್ಟಣದ ನಿವಾಸಿ ರೌಡಿ ಶೀಟರ್ ಇಂದ್ರಜಿತ್ (45) ಎಂಬಾತನನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.
ಕುದ್ರೋಳಿ ಸಮೀಪದ ಕರ್ನಲ್ ಗಾರ್ಡನ್ ಬಳಿ ನವೆಂಬರ್ 26ರ ಗುರುವಾರ ನಸುಕಿನ ವೇಳೆ ಈ ಘಟನೆ ನಡೆದಿದೆ. ಮುಂಜಾನೆ ಇಂದ್ರಜಿತ್ ಅವರನ್ನು ಹತ್ಯೆ ಮಾಡಲಾಗಿದ್ದು, ನಿನ್ನೆ ಇಂದ್ರಜಿತ್ ಮೆಹಂದಿ ಸಮಾರಂಭವೊಂದರಲ್ಲಿ ಭಾಗಿಯಾಗಿದ್ದ. ಅಲ್ಲಿ ಯಾವುದೋ ವಿಚಾರಕ್ಕೆ ಜಗಳವಾಗಿತ್ತು ಎನ್ನಲಾಗಿದೆ. ಮಾರಕ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು ಬಳಿಕ ಮೃತ ದೇಹವನ್ನು ಗಾರ್ಡನ್ ಬಳಿ ಎಸೆಯಲಾಗಿದೆ.
ಬರ್ಕೆ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕರಾವಳಿಯಲ್ಲಿ ಹಲವು ತಿಂಗಳುಗಳಿಂದ ಒಬ್ಬರ ಹಿಂದೆ ಮತ್ತೊಬ್ಬರಂತೆ ರೌಡಿಶೀಟರ್ ಗಳ ಹತ್ಯೆ ಗಳು ನಡೆಯುತ್ತಿರುವುದು ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.