ಮೂಡಿಗೆರೆ: ಪಟ್ಟಣದ ಪ್ರಥಮ ದರ್ಜೆ ಕಾಲೇಜಿನ ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿನಿ ಧನ್ಯಾ (20) ಆತ್ಮಹತ್ಯಗೆ ಕಾರಣಕರ್ತ ಎನ್ನಲಾದ ಆರೋಪಿಯನ್ನು ಮೂಡಿಗೆರೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಿಜೆಪಿಯ ಎಂ.ವಿ. ಅನಿಲ್ ಎಂದು ಗುರುತಿಸಲಾಗಿದೆ.
ಈತ ಮೂಡಿಗೆರೆ ನಗರ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷನಾಗಿದ್ದಾನೆ. ಈತ ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ಸಿ.ಟಿ.ರವಿಯೊಂದಿಗೆ ಗುರುತಿಸಿಕೊಂಡಿರುವ ಪ್ರಭಾವಿ ವ್ಯಕ್ತಿಯಾಗಿದ್ದಾನೆ.
ದ.ಕ. ಜಿಲ್ಲೆಯ ಬೆಳ್ತಂಗಡಿ ಭಾಗದ ಸಂತೋಷ್ ಎಂಬ ಯುವಕನೋರ್ವ ವಾಟ್ಸ್ಆ್ಯಪ್ ನಲ್ಲಿ ಚಾಟ್ ಮಾಡಿ ಅನ್ಯಮತೀಯ ಯುವಕನೊಂದಿಗೆ ಗೆಳೆತನ ಬೆಳೆಸದಂತೆ ಧಮಕಿ ಹಾಕಿದ್ದನಲ್ಲದೇ ವಾಟ್ಸ್ಆ್ಯಪ್ ಸ್ಕ್ರೀನ್ಶಾಟ್ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವಂತೆ ಮಾಡಿದ್ದ. ಅದನ್ನು ಮೂಡಿಗೆರೆಯ ಬಿಜೆಪಿ ಯುವ ಮೋರ್ಚಾ ಮತ್ತು ಸಂಘಪರಿವಾರದ ಕಾರ್ಯಕರ್ತರ ಗಮನಕ್ಕೂ ತಂದಿದ್ದ. ಇದನ್ನು ಗಮನಿಸಿದ್ದ ಅನಿಲ್ ಮತ್ತು ತಂಡ ಕಾಲೇಜು ವಿದ್ಯಾರ್ಥಿನಿ ಧನ್ಯಾಳ ಮನೆಗೆ ತೆರಳಿ ಆಕೆಯ ತಂದೆ, ತಾಯಿ ಎದುರು ಧಮಕಿ ಹಾಕಿದ್ದರು.
ಇದರಿಂದ ಧನ್ಯಾ ಮನನೊಂದಿದ್ದರು ಎಂದು ಹೇಳಲಾಗಿದೆ. ಹಾಗೂ ಕಾಲೇಜು ಸಹಿತ ವಿವಿಧ ಕಡೆಗಳಲ್ಲಿ ತನ್ನ ಬಗ್ಗೆ ಜನರು ಈ ಕುರಿತು ಮಾತನಾಡುತ್ತಿರು ವುದನ್ನು ಅರಿತು ಅವಮಾನಿತಗೊಂಡಿದ್ದ ಧನ್ಯಾ ಮನೆಯಲ್ಲಿ ಪೋಷಕರು ಇಲ್ಲದ ಸಮಯ ನೋಡಿಕೊಂಡು ನೇಣು ಬಿಗಿದುಕೊಂಡು ಜ. 6ರಂದು ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮೂಡಿಗೆರೆ ಛತ್ರ ಮೈದಾನ ಬಡಾವಣೆಯ ಯಾದವ ಮತ್ತು ಸರಸ್ವತಿ ದಂಪತಿಯ ಏಕೈಕ ಪುತ್ರಿ ಧನ್ಯಾ ಅನ್ಯಮತೀಯ ಯುವಕನೊಂದಿಗೆ ಗೆಳೆತನ ಬೆಳೆಸಿದ್ದಾಳೆಂದು ಆರೋಪಿಸಿ ಆಕೆಯನ್ನು ಬಿಜೆಪಿ ಯುವಮೋರ್ಚಾ ನಗರಾಧ್ಯಕ್ಷ ಅನಿಲ್ ಮತ್ತಿತರ ಬಿಜೆಪಿ ಮತ್ತು ಸಂಘಪರಿವಾರದ ಪದಾಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದರು.
ಧನ್ಯಾ ಆತ್ಮಹತ್ಯೆ ಬಳಿಕ ಆರಂಭದಲ್ಲಿ ಪ್ರಕರಣವನ್ನು ಮುಚ್ಚಿ ಹಾಕುವ ವ್ಯವಸ್ಥಿತ ಪಿತೂರಿಗಳು ನಡೆದಿದ್ದವು. ಮೊದಲ ಸಲ ಬರೆದ ಪ್ರಾಥಮಿಕ ವರದಿಯಲ್ಲಿ ಧನ್ಯಾಳ ತಂದೆ ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತೇಪೆ ಹಾಕಲಾಗಿತ್ತು ಎಂದು ಆರೋಪಿಸಲಾಗಿತ್ತು. ಆದರೆ ಸಂಜೆ ನಂತರ ಪೊಲೀಸರು ಮರು ಎಫ್ ಐ ಆರ್ ದಾಖಲಿಸಿ, ನಾಲ್ವರು ಆರೋಪಿಗಳನ್ನು ಗುರುತಿಸಿದ್ದರು.
ಆರಂಭದಲ್ಲಿ ಪ್ರಭಾವಿಗಳ ಒತ್ತಡಗಳಿಗೆ ಮಣಿದ ಪೊಲೀಸರ ನಡೆಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅನೇಕರು ತೀವ್ರವಾಗಿ ಟೀಕಿಸಿದ್ದರು. ವಾಟ್ಸ್ಆ್ಯಪ್ ನಲ್ಲಿ ಸಾಕ್ಷ್ಯಾಧಾರಗಳಿದ್ದರೂ ಪೊಲೀಸರು ಪ್ರಾಥಮಿಕ ವರದಿಯನ್ನು ಆರೋಪಿಗಳ ರಕ್ಷಣೆ ಮಾದರಿಯಲ್ಲಿ ಬರೆದಿರುವ ಆರೋಪಗಳು ಕೇಳಿ ಬಂದಿತ್ತು. ಕೊನೆಗೂ ಎಚ್ಚೆತ್ತ ಪೊಲೀಸರು ನಾಲ್ವರ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ ಆರೋಪಿಗಳಲ್ಲಿ ಓರ್ವನಾದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನನ್ನು ಬಂಧಿಸಿದ್ದಾರೆ.
ಆರೋಪಿಗಳಲ್ಲಿ ಮೂವರು ತಲೆಮರೆಸಿಕೊಂಡಿದ್ದಾರೆ. ತಲೆಮರೆಸಿಕೊಂಡ ಆರೋಪಿಗಳಿಗಾಗಿ ವ್ಯಾಪಕ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಮೂಡಿಗೆರೆಯ ಧನ್ಯಾ ಅವರ ಮನೆಗೆ ಪೊಲೀಸರು ತೆರಳಿ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಯುವಕರ ತಂಡವೊಂದು ಮನೆಗೆ ತೆರಳಿ ಧನ್ಯಾರಿಗೆ ಬೆದರಿಕೆ ಹಾಕಿರುವ ಮತ್ತು "ನಿಮ್ಮ ಮಗಳು ಮುಸ್ಲಿಂ ಹುಡುಗನ ಜೊತೆ ತಿರುಗಾಡುತ್ತಿದ್ದಾಳೆ. ಲವ್ ಜಿಹಾದ್ಗೆ ಬಲಿಯಾಗಿದ್ದಾಳೆ" ಎಂದು ಯುವಕರು ಹೇಳಿರುವ ಬಗ್ಗೆ ಮಾಹಿತಿ ದೊರಕಿದೆ. ಧನ್ಯಾ ಡೆತ್ನೋಟ್ನಲ್ಲಿ ಕೂಡ ಇದನ್ನು ಬರೆದಿಟ್ಟಿದ್ದಾಳೆ. ನಾನು ಹೇಗೆ ಸಮಾಜದಲ್ಲಿ ಬದುಕಲಿ ಎಂದು ಪ್ರಶ್ನಿಸಿದ್ದಾಳೆ. ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ ಮೆಸೇಜ್ನಲ್ಲಿ ಹಲವರು ಕಮೆಂಟ್ ಮಾಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಎಸ್ಪಿ ಅಣ್ಣಾಮಲೈ ತಿಳಿಸಿದ್ದಾರೆ.
sp_annamalai_video : https://youtu.be/hBP0EZ8zaDQ
ಕೃಪೆ: vbnewsonline