ಭಟ್ಕಳದಲ್ಲಿ ಘನತ್ಯಾಜ್ಯ ವಿಲೇವಾರಿ ವೀಕ್ಷಿಸಿದ ಆಲಮಿತ್ರ
ಭಟ್ಕಳ: ಸುಪ್ರೀಮ್ ಕೋರ್ಟ ನಿಯೋಜಿತ ಪರಿಸರ ರಕ್ಷಣಾ ನೀತಿ ಸಮಿತಿಯ ಸದಸ್ಯೆ, ನ್ಯಾಯವಾದಿ ಆಲಮಿತ್ರ ಪಾಟೀಲ್, ಗುರುವಾರ ಭಟ್ಕಳಕ್ಕೆ ಆಗಮಿಸಿ ಇಲ್ಲಿನ ಘನ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ತ್ಯಾಜ್ಯ ವಿಲೇವಾರಿಯ ಸಂಬಂಧ ಕಳೆದ 2 ದಶಕಗಳ ಸುಧಾರಣೆಯನ್ನು ಪರಿಶೀಲಿಸಿದ ಅವರು, ಭಟ್ಕಳದಲ್ಲಿ ಬಟ್ಟೆ ಬರೆಗಳು ತ್ಯಾಜ್ಯಗಳಾಗಿ ಬರುವುದನ್ನು ತಪ್ಪಿಸಲು ಇಲ್ಲಿನ ಜನರು `ಕಪಡಾ ಬ್ಯಾಂಕ್' ಮೊರೆ ಹೋಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಳೆಯ ಬಟ್ಟೆ ಬರೆಗಳನ್ನು ಬಡವರಿಗೆ ನೀಡುವುದರಿಂದ ಬಡವರಿಗೆ ಸೇವೆಯನ್ನು ಸಲ್ಲಿಸುವುದರ ಜೊತೆಗೆ ತ್ಯಾಜ್ಯಕ್ಕೂ ಕಡಿವಾಣ ಬಿದ್ದಿರುವುದನ್ನು ಬೇರೆ ನಗರಗಳಲ್ಲಿಯೂ ಅಳವಡಿಸಿಕೊಳ್ಳುವಂತೆ ಸಲಹೆ ನೀಡುವುದಾಗಿ ತಿಳಿಸಿದರು. ಸಂಜೆ ಇಲ್ಲಿನ ಸಾಗರ್ರೋಡ್ ತ್ಯಾಜ್ಯವಿಲೇವಾರಿ ಘಟಕಕ್ಕೂ ಭೇಟಿ ನೀಡಿ ಅಲ್ಲಿನ ಸುಧಾರಣಾ ಕ್ರಮಗಳನ್ನು ವೀಕ್ಷಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಹಲವು ದಶಕಗಳಿಂದ ಸಮರ್ಪಕ ತ್ಯಾಜ್ಯವಿಲೇವಾರಿಯ ಸಂಬಂಧ ಜಾಗೃತಿ ಮೂಡಿಸಲು ದೇಶಾದ್ಯಂತ ಓಡಾಡಿಕೊಂಡಿದ್ದೇನೆ. 1996ರಲ್ಲಿ ಸುಪ್ರೀಮ್ ಕೋರ್ಟ ಮೆಟ್ಟಿಲನ್ನೂ ಏರಿ ಕ್ರಮಕ್ಕಾಗಿ ಆಗ್ರಹಿಸಿದ್ದೇನೆ. ನನ್ನ ಹೋರಾಟ ಮುಂದುವರೆಯುತ್ತದ ಎಂದು ತಿಳಿಸಿದರು. ಭಟ್ಕಳ ಪುರಸಭಾ ಮುಖ್ಯಾಧಿಕಾರಿ ದೇವರಾಜ, ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ವೇಣುಗೋಪಾಲ ಶಾಸ್ತ್ರೀ ಮೊದಲಾದವರು ಉಪಸ್ಥಿತರಿದ್ದರು.