ಗೋಕರ್ಣ: ‘ಗೋಕರ್ಣಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕಾಶಿಯಷ್ಟೇ ಹಳೆಯದಾದ ಗೋಕರ್ಣವು ಮೂಲಸತ್ವದ ಆಧಾರದೊಂದಿಗೆ ಅರಳಿ ನಿಲ್ಲಬೇಕು’ ಎಂದು ಸಂಸದ ಅನಂತಕುಮಾರ ಹೆಗಡೆ ನುಡಿದರು.
ಶನಿವಾರ ನಾನ್ ರೆಸಿಡೆಂಟ್ ಗೋಕರ್ಣಿಯನ್ ಎಂಬ ಸಂಸ್ಥೆಯ ಅಧಿಕೃತ ವೆಬ್ ಸೈಟ್ ಅನ್ನು ಅನಾವರಣಗೊಳಿಸಿ ಮಾತನಾಡಿದರು.
‘ಗೋಕರ್ಣ ವೇದ, ಸಂಸ್ಕೃತ, ಅಧ್ಯಾತ್ಮಕ್ಕೆ ಹೆಸರುವಾಸಿಯಾಗಿದೆ. ಆದರೆ ಇಲ್ಲಿಗೆ ಪ್ರವಾಸಿಗರು ಕೇವಲ ಬೀಚ್ ವೀಕ್ಷಣೆಗೆ ಬರುತ್ತಾರೆ.
ಅನಿವಾಸಿ ಗೋಕರ್ಣದವರನ್ನು ಒಟ್ಟುಗೂಡಿಸುವ ಸಂಸ್ಥೆಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಗೋಕರ್ಣವು ಮೂಲ ಸಂಸ್ಕೃತಿಗೆ ಧಕ್ಕೆ ಬಾರದಂತೆ ಅಭಿವೃದ್ಧಿಯಾಗಬೇಕು. ಅದಕ್ಕೆ ನಾನು ಕಟಿಬದ್ಧ ಎಂದರು.
ಹಿರಿಯ ಪತ್ರಕರ್ತ ವಿಶ್ವನಾಥ ಗೋಕರ್ಣ ಮಾತನಾಡಿ, ಗೋಕರ್ಣದ ಅನೇಕ ಜನ ದೇಶ ವಿದೇಶದಲ್ಲಿ ಪಸರಿಸಿದ್ದಾರೆ. ಇಲ್ಲಿಯ ಆಚಾರ, ವಿಚಾರ, ಹಳೆಯ ಪದ್ಧತಿ ಉಳಿಸುವ ಉದ್ದೇಶದಿಂದ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇದು ಪ್ರಾರಂಭ ಮಾತ್ರ. ಎಲ್ಲರ ಸಹಕಾರದೊಂದಿಗೆ ಸಮಗ್ರ ಗೋಕರ್ಣದ ಅಭಿವೃದ್ಧಿ ಬಗ್ಗೆ ಚಿಂತಿಸಲಾಗುವುದು’ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತೆರಿಗೆ ಸಲಹೆಗಾರ ಕುಮಟಾದ ಜಿ.ಎಸ್.ಕಾಮತ್ ಮಾತನಾಡಿ ‘ಸಂಸ್ಥೆಯ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ’ ಎಂದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಹಾಲಕ್ಷ್ಮೀ ಬಡ್ತಿ, ಸುರೇಶ ಗಿರಿಯನ್ ಇದ್ದರು. ವೇದಘೋಷದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಗಂಗಾಧರ ಭಟ್ ನಿರೂಪಿಸಿದರು. ಅಮಿತ್ ನಾಡಕರ್ಣಿ ವಂದಿಸಿದರು.