ಭೋಪಾಲ್: ಸುಮಾರು 54 ಪ್ರಯಾಣಿಕರಿದ್ದ ಬಷ್ಟೊಂದು ಮಂಗಳವಾರ ಬೆಳಗ್ಗೆ ಸಿಧಿ ಜಿಲ್ಲೆಯ ಪಟ್ನಾ ಗ್ರಾಮದ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಬನಸಾಗರ ನಾಲೆಗೆ ಉರುಳಿಬಿದ್ದಿದ್ದು,39 ಶವಗಳನ್ನು ನೀರಿನಿಂದ ಹೊರಕ್ಕೆ ತೆಗೆಯಲಾಗಿದೆ. ಇನ್ನೂ ಹಲವು ಪ್ರಯಾಣಿಕರು ನಾಪತ್ತೆಯಾಗಿದ್ದು, ಅವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಮೃತರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಬಸ್ ಸಿಧಿಯಿಂದ ಸತ್ನಾಗೆ ಸಾಗುತ್ತಿದ್ದಾಗ ಬೆಳಗ್ಗೆ 8:30ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಏಳು ಪ್ರಯಾಣಿಕರು ಈಜಿ ಪಾರಾಗಿದ್ದಾರೆ ಎಂದು ರೇವಾ ವಲಯದ ಐಜಿಪಿ ಉಮೇಶ್ ಜೋಗಾ ತಿಳಿಸಿದರು.
ಪ್ರತ್ಯಕ್ಷದರ್ಶಿಗಳು ತಿಳಿಸಿರುವಂತೆ ಬಸ್ 30 ಅಡಿ ಆಳದ ನಾಲೆಯಲ್ಲಿ ಸಂಪೂರ್ಣವಾಗಿ ಮುಳುಗಿತ್ತು. ರಕ್ಷಣಾ ಕಾರ್ಯಾಚರಣೆಗೆ ಅನುಕೂಲವಾಗುವಂತೆ ನೀರಿನ ಮಟ್ಟವನ್ನು ತಗ್ಗಿಸಲು ಬನಸಾಗರ ನಾಲೆಯಿಂದ ಸಿಹಾವಾಲ್ ನಾಲೆಗೆ ನೀರನ್ನು ಬಿಡುಗಡೆಗೊಳಿಸಿದ ಬಳಿಕವೇ ಘಟನಾ ಸ್ಥಳದಿಂದ ಸುಮಾರು ದೂರಕ್ಕೆ ಕೊಚ್ಚಿಕೊಂಡು ಹೋಗಿದ್ದ ಬಸ್ ಗೋಚರವಾಗಿತ್ತು. ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆಯ ಸಿಬ್ಬಂದಿ ಮತ್ತು ಮುಳುಗು ತಜ್ಞರು ರಕ್ಷಣಾ ಕಾರ್ಯಾಚರಣೆ ನಡೆಸಿ 39 ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ರಾಜ್ಯದ ಸಚಿವರಾದ ತುಳಸಿರಾಮ ಸಿಲಾವತ್ ಮತ್ತು ರಾಮಖೇಲಾವನ ಪಟೇಲ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು.
ದುರಂತದ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮೃತರ ಕುಟುಂಬಗಳಿಗೆ ತಲಾ ಐದು ಲ.ರೂ.ಪರಿಹಾರವನ್ನು ಪ್ರಕಟಿಸಿದ್ದಾರೆ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ಎರಡು ಲ.ರೂ.ಮತ್ತು ಗಾಯಾಳುಗಳಿಗೆ ತಲಾ 50,000 ರೂ.ಗಳ ಪರಿಹಾರವನ್ನು ಪ್ರಧಾನಿ ಕಚೇರಿಯು ಘೋಷಿಸಿದೆ.