ಹೊಸದಿಲ್ಲಿ: ಮೊರಟೋರಿಯಂ ಅವಧಿ ವಿಸ್ತರಣೆ ಸಾಧ್ಯವಿಲ್ಲ: ಸುಪ್ರೀಂ, ಕೇಂದ್ರ, ಆರ್ಬಿಐನ ನೀತಿ-ನಿರ್ಧಾರಗಳಲ್ಲಿ ಮಧ್ಯಪ್ರವೇಶ ಇಲ್ಲ
ಹೊಸದಿಲ್ಲಿ: ಸಾಲಗಳ ಮೊರಟೋರಿಯಂ ಅವಧಿ 6 ತಿಂಗಳು ವಿಸ್ತರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ.
ಕಳೆದ ವರ್ಷ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನೀಡಿರುವ ಆರು ತಿಂಗಳ(2020ರ ಮಾರ್ಚ್ 1ರಿಂದ ಆಗಸ್ಟ್ 31)ವರೆಗಿನ ಸಾಲಗಳ ಮೊರ ಟೋರಿಯಂ ಅವಧಿಯನ್ನು ವಿಸ್ತರಿಸಲು (ಸಾಲದ ಕಂತು ಪಾವತಿ ಅವಧಿ ಮುಂದೂಡಿಕೆ) ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಕೇಂದ್ರ ಸರಕಾರ ಹಾಗೂ ಆರ್ಬಿಐಯ ನೀತಿ ನಿರ್ಧಾರದಲ್ಲಿ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದೆ.
ಬ್ಯಾಂಕ್ಗಳು ಖಾತೆದಾರರಿಗೆ ಹಾಗೂ ಪಿಂಚಣಿದಾರರಿಗೆ ಬಡ್ಡಿ ವತಿಸಬೇಕಾಗಿರುವುದರಿಂದ
ಮೊರಟೋರಿಯಂ ಅವಧಿಯಲ್ಲಿ ಸಂಪೂರ್ಣ ಬಡ್ಡಿ ಮನ್ನಾ ಮಾಡಲು ಕೂಡ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮೊರಟೋರಿಯಂ ಅವಧಿಯಲ್ಲಿ ಬ್ಯಾಂಕ್ಗಳು ಯಾವುದೇ ಸಾಲಗಾರರಿಗೆ ಚಕ್ರ ಬಡ್ಡಿ ವಿಧಿಸಬಾರದು. ಒಂದು ವೇಳೆ ಚಕ್ರಬಡ್ಡಿ ವಿಧಿಸಿದ್ದರೆ, ಅದನ್ನು ಮರು ಪಾವತಿಸಬೇಕು ಎಂದು ಅದು ಹೇಳಿದೆ.
ಸಾಲಗಳ ಮೊರಟೋರಿಯಂ ಅವಧಿ ವಿಸ್ತರಣೆ ಹಾಗೂ ಇತರ ಪರಿಹಾರಗಳನ್ನು ವಿಸ್ತರಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಗಳ ಗುಚ್ಚದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ, ದುರುದ್ದೇಶಪೂರಿತ ಹಾಗೂ ನಿರಂಕುಶದ ಪರಿಶೀಲನೆ ನಡೆಸಲು ಸಾಧ್ಯವಿಲ್ಲ ಎಂದು ಹೊರತಾಗಿ ಕೇಂದ್ರ ಸರಕಾರದ ಆರ್ಥಿಕ ನೀತಿ ನಿರ್ಧಾರಗಳನ್ನು ನ್ಯಾಯಾಂಗ ಹೇಳಿತು.
ವಿಸ್ತರಣೆ ಸಾಧ್ಯವಿಲ್ಲ
ಮಾರ್ಚ್ 27ರಂದು ಆರ್ಬಿಐ, ಮಾರ್ಚ್ 1 ಹಾಗೂ ಮೇ 31ರ ನಡುವಿನ ಸಾಲದ ಕಂತುಗಳ ಮೇಲೆ ಮೊರಟೋರಿಯಂ ಘೋಷಿಸಿತ್ತು. ಆನಂತರ ಅದನ್ನು 2020 ಆಗಸ್ಟ್ 31ರ ವರೆಗೆ ಒಟ್ಟು ಮೂರು ತಿಂಗಳು ವಿಸ್ತರಿಸಿತ್ತು. ಬಡ್ಡಿ ಮನ್ನಾ ಮಾಡಿದರೆ, ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ 6 ಲಕ್ಷ ಕೋಟಿ ರೂಪಾಯಿ ನಷ್ಟವಾಗಲಿದೆ ಹಾಗೂ ಇಡೀ ಬ್ಯಾಂಕಿಂಗ್ ವ್ಯವಸ್ಥೆ ಕುಸಿದು ಬೀಳಲಿದೆ ಎಂದು ಈ ಹಿಂದೆ ಕೇಂದ್ರ ಸರಕಾರ ಆತಂಕ ವ್ಯಕ್ತಪಡಿಸಿತ್ತು.