ಕಾರವಾರ : ನಾಳೆಯಿಂದ ಗೋವಾ ರಾಜ್ಯ ಪ್ರವೇಶಿಸುವ ಎಲ್ಲಾ ಮಾರ್ಗಗಳು ಮುಕ್ತವಾಗಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭರವಸೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಹೊರಡಿಸಿದ್ದು, ಗೋವಾದಲ್ಲಿ ಜಾರಿಗೆ ತರಲಾಗುತ್ತದೆ. ಲಾಕ್ ಡೌನ್ ಮತ್ತು ಸಾಂಕ್ರಾಮಿಕ ರೋಗದ ನಿಯಂತ್ರಣದ ಎಲ್ಲಾ ನಿಯಮಗಳನ್ನು ಗೋವಾ ಸರ್ಕಾರ ಇಲ್ಲಿಯವರೆಗೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಗೋವಾಕ್ಕೆ ಬರುವ ಅನ್ಯ ರಾಜ್ಯಗಳ ಜನರನ್ನ ನಾವು ತಡೆದಿಲ್ಲ. ಆದರೆ ಕೊರೋನಾದ ಭಯ ಮತ್ತು ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಹೇರಿದ್ದ ಕಾರಣ ಗಡಿಗಳನ್ನು ಮುಚ್ಚಲಾಗಿತ್ತು. ಈಗ ಕೇಂದ್ರ ಸರ್ಕಾರವು ನಿಷೇಧವನ್ನು ತೆಗೆದು ಹಾಕಿದ್ದು, ಕಳೆದ ಕೆಲವು ದಿನಗಳಿಂದ ಗೋವಾದಲ್ಲಿ ಸಿಲುಕಿಕೊಂಡವರು ತಮ್ಮ ತವರಿಗೆ ಮರಳಲು, ಕೆಲಸಕ್ಕಾಗಿ ಗೋವಾಕ್ಕೆ ಬಂದವರಿಗೆ ಮರಳಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
‘ಅನ್ ಲಾಕ್- 3’ಗಾಗಿ ಕೇಂದ್ರ ಮಾರ್ಗಸೂಚಿಗಳ ಅಡಿಯಲ್ಲಿ ಅಂತರ್ ರಾಜ್ಯ ಅಥವಾ ರಾಜ್ಯದೊಳಗಿನ ಯಾವುದೇ ಜನರು ಅಥವಾ ಸರಕುಗಳ ಪ್ರಯಾಣಕ್ಕೆ ನಿರ್ಬಂಧಗಳಿಲ್ಲ. ಕೂಡಲೇ ಈ ನಿರ್ಬಂಧ ಸಡಿಲಗೊಳಿಸಿ. ವ್ಯಕ್ತಿಗಳು ಅಥವಾ ಸರಕುಗಳ ಚಲನೆಗೆ ಪ್ರತ್ಯೇಕ ಅನುಮತಿ ಅಥವಾ ಇ-ಪರ್ಮಿಟ್ ಅಗತ್ಯವಿಲ್ಲ ಎಂದು ಹೇಳಿದ್ದ ಕೇಂದ್ರ ಗೃಹ ಸಚಿವಾಲಯ, ಅಂತರ್ ರಾಜ್ಯ ಪ್ರಯಾಣ ನಿರ್ಬಂಧ ಕುರಿತಂತೆ ಗೋವಾ ರಾಜ್ಯ ಸರ್ಕಾರದ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿತ್ತು.
ಗೋವಾ ಸರ್ಕಾರ ಕಾರವಾರದಿಂದ ಪ್ರವೇಶಿಸುವ ನಾಗರಿಕರಿಗೆ 2000ರೂ. ಹಣ ಪಡೆಯುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು. ಕೋವಿಡ್ ನೆಗೆಟಿವ್ ವರದಿ ಇದ್ದರೆ ಮಾತ್ರ ರಾಜ್ಯ ಪ್ರವೇಶಿಸಬೇಕೆಂಬ ಗೋವಾದ ಮಾರ್ಗಸೂಚಿ ವಿರೋಧಿಸಿ ಗಡಿ ಮಾಜಾಳಿಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ಎಚ್ಚರಿಸಿತ್ತು ಸೆಪ್ಟೆಂಬರ್ 1ರಿಂದ ಗಡಿಯನ್ನು ಮುಕ್ತವಾಗಿ ತೆರೆಯದಿದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದರು.
ಈ ಮುಂಚೆಯೇ ಕಾರವಾರ ಶಾಸಕಿ ರೂಪಾಲಿ ನಾಯ್ಕ ಗೋವಾ ಸಿಎಂ ಪ್ರಮೋದ್ ಸಾವಂತ ಬಳಿ ಮಾತನಾಡಿ,
ಸೆಪ್ಟೆಂಬರ್ 1 ರಿಂದ ಕರ್ನಾಟಕದ ಜನತೆಗೆ ಗೋವಾ ಪ್ರವೇಶಕ್ಕೆ ಇರುವ ನಿಯಮಾವಳಿಗಳನ್ನು ಸಡಿಲಿಸಬೇಕೆಂದು ಒತ್ತಾಯಿಸಿದ್ದರು. ಗಡಿಯಲ್ಲಿ ಮುಕ್ತ ಪ್ರವೇಶ ಇಲ್ಲದಿರುವುದರಿಂದ ಕರ್ನಾಟಕದ ಜನತೆಗೆ ಭಾರೀ ಸಮಸ್ಯೆ ಆಗುತ್ತಿರುವ ಬಗ್ಗೆ ಶಾಸಕಿ ಮನವರಿಕೆ ಮಾಡಿಕೊಟ್ಟಿದ್ದರಿಂದ ಇದೀಗ ಗೋವಾ ಪ್ರವೇಶ ಮುಕ್ತವಾಗಲಿದೆ. ಕಾರವಾರ ಮತ್ತು ಗೋವಾದೊಂದಿಗೆ ನಿಕಟ ಸಂಬಂಧ ಹೊಂದಿದವರಿಗೆ ಇನ್ಮುಂದೆ ಅನುಕೂಲವಾಗಲಿದೆ.