ಭಟ್ಕಳ: ಸೋಮವಾರವಷ್ಟೇ ಕಾರು ಅಪಘಾತಕ್ಕೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಹಾಗೂ ಕಾರಿನಲ್ಲಿದ್ದ ಇತರರನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯಾಚರಣೆಯಲ್ಲಿ ಪ್ರಮುಖವಾಗಿ ಭಟ್ಕಳದ ಯುವಕರು ಪಾಲ್ಗೊಂಡಿರುವುದು ಬೆಳಕಿಗೆ ಬಂದಿದೆ.
ಬಳಕೆಯಾದ ಕಾರು ಖರೀದಿಗೆ ಸಂಬಂಧಿಸಿದಂತೆ ಯಲ್ಲಾಪುರಕ್ಕೆ ತೆರಳಿದ್ದ ತಾಲೂಕಿನ ಜಾಲಿ ಪಟ್ಟಣ ಪಂಚಾಯತ ನಿವಾಸಿಗಳಾದ ರಂಜಿತ್ ಗಣಪತಿ ನಾಯ್ಕ, ನಾಗರಾಜ ವೆಂಕ್ಟಪ್ಪ ನಾಯ್ಕ, ಮಣಿಕಂಠ ವೆಂಕಟಪ್ಪ ನಾಯ್ಕ, ಗಣೇಶ ನಾಯ್ಕ ಬೆಂಡೇಕಾನ್ ಭಟ್ಕಳಕ್ಕೆ ಹಿಂದಿರುಗುವ ವೇಳೆಯಲ್ಲಿ ಸಚಿವರ ಕಾರು ಅಪಘಾತಕ್ಕೀಡಾಗಿರುವುದನ್ನು ಕಂಡಿದ್ದಾರೆ. ಆ ವೇಳೆಯಲ್ಲಿ ಸಚಿವರನ್ನು ಹಿಂಬಾಲಿಸುತ್ತಿದ್ದ ಎಸ್ಕೋರ್ಟ ವಾಹನ ಸಾಕಷ್ಟು ಹಿಂದೆಯೇ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ. ಕೂಡಲೇ ಭಟ್ಕಳದ ಯುವಕರು ಸರಿಸುಮಾರು 7-8 ಅಡಿ ಆಳದ ಹೊಂಡದಲ್ಲಿ ಬಿದ್ದಿದ್ದ ಕಾರಿನಲ್ಲಿ ಇದ್ದವರ ರಕ್ಷಣೆಗೆ ಧಾವಿಸಿದ್ದು, ಸಚಿವ ಶ್ರೀಪಾದ್ ನಾಯಕ್ ಹಾಗೂ ಅವರ ಅಂಗರಕ್ಷಕ ತುಕಾರಾಮ ಪಾಟೀಲ್ರನ್ನು ತಮ್ಮ ಕಾರಿನಲ್ಲಿಯೇ ಕುಳ್ಳಿರಿಸಿಕೊಂಡು ಅಂಕೋಲಾದತ್ತ ಹೊರಟಿದ್ದಾರೆ. ಮಾರ್ಗ ಮಧ್ಯೆ ಭಟ್ಕಳದ ಯುವಕರು ಬಿಜೆಪಿ ಹಿಂದುಳಿದ ವರ್ಗ ವಿಭಾಗದ ಜಿಲ್ಲಾಧ್ಯಕ್ಷ ರವಿ ನಾಯ್ಕರನ್ನು ಸಂಪರ್ಕಿಸಿದ್ದು, ದಾಖಲಿಸಬೇಕಾದ ಆಸ್ಪತ್ರೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ನಂತರ ರವಿ ನಾಯ್ಕ ಮೂಲಕವೇ ಕಾರವಾರ ಶಾಸಕಿ ರೂಪಾಲಿ ಸೇರಿದಂತೆ ಕಾರವಾರ, ಅಂಕೋಲಾ ಭಾಗದ ಬಿಜೆಪಿ ಧುರೀಣರಿಗೆ ಅಪಘಾತದ ಮಾಹಿತಿ ದೊರೆತಿದ್ದು, ಎಲ್ಲರೂ ಆಸ್ಪತ್ರೆಗೆ ದೌಡಾಯಿಸಿ ಬಂದಿದ್ದಾರೆ. ಸಮಯ ಪ್ರಜ್ಞೆಯಿಂದ ಅಪಘಾತಕ್ಕೀಡಾದವರ ನೆರವಿಗೆ ಧಾವಿಸಿದ ಭಟ್ಕಳದ ಯುವಕರ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ.