ಧಾರವಾಡ : ಸಾವಿರಾರು ಸಂಸ್ಕøತಿ, ಹಲವಾರು ಸಂಪ್ರದಾಯ, ನೂರಾರು ಭಾಷೆಗಳಿಂದ ಕೂಡಿದ ನಮ್ಮ ಭಾರತ ಉಪ ಖಂಡವು, ಅನೇಕತೆಯಲ್ಲಿ ಏಕತೆಯನ್ನು ಸಂವಿಧಾನದ ಮೂಲಕ ಸಾಧಿಸಿದೆ. ಒಕ್ಕೂಟ ಮಾದರಿಯ ಆಡಳಿತ ವ್ಯವಸ್ಥೆಯಡಿ ದೇಶವು ಸರ್ವಾಂಗೀಣವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಸಂವಿಧಾನ ಜಾರಿಗೆ ಬಂದ ಈ ದಿನದಂದು ನಾವೆಲ್ಲ ಅದರ ಮೌಲ್ಯಗಳನ್ನು ಪುನರ್ಮನನ ಮಾಡಿಕೊಳ್ಳುವ ಕಾರ್ಯ ಮಾಡಬೇಕು. ದೇಶದ ಪ್ರತಿಯೊಬ್ಬ ನಾಗರಿಕರು ಸಂವಿಧಾನವನ್ನು ಅರಿತುಕೊಂಡು ಆ ದಿಶೆಯಲ್ಲಿ ಮುಂದೆ ಸಾಗಿದಾಗ ಗಣರಾಜ್ಯೋತ್ಸವ ಅರ್ಥಪೂರ್ಣವಾಗುತ್ತದೆ. ನಾವೆಲ್ಲ ಈ ನಿಟ್ಟಿನಲ್ಲಿ ಒಟ್ಟಾಗಿ ಹೆಜ್ಜೆ ಹಾಕೋಣ ಎಂದು ಬೃಹತ್, ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.
ಆರ್ ಎನ್ ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಗಣರಾಜ್ಯೋತ್ಸವದ ಸಾಧನೆಯ ಮೆಲಕು ಹಾಕಿದರು.
1947ರ ಅಗಸ್ಟ್ 15 ರಂದು ಭಾರತ ದೇಶವು ಸ್ವಾತಂತ್ರ್ಯ ಪಡೆದ ಬಳಿಕ ಸಂಪೂರ್ಣ ಕಾರ್ಯೋನ್ಮುಖವಾದ ಈ ಸಮಿತಿಯು ಒಟ್ಟು 2 ವರ್ಷ 11 ತಿಂಗಳು 17 ದಿನಗಳ ಕಾಲ ನಿರಂತರ ಶ್ರಮವಹಿಸಿ, ಸಂವಿಧಾನದ ಪ್ರಾಥಮಿಕ ಕರಡು ಪ್ರತಿಯನ್ನು ಸಿದ್ಧಪಡಿಸಿತು. ಸುಮಾರು 114 ದಿನಗಳ ಕಾಲ ಸಂವಿಧಾನದ ಕರಡು ಪ್ರತಿಯ ಬಗ್ಗೆ ಸಂವಿಧಾನ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ಅಂತಿಮವಾಗಿ ನವೆಂಬರ್ 26, 1949 ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. ಜನೆವರಿ 26, 1950 ರಂದು ಸಂವಿಧಾನ ಜಾರಿಗೆ ಬಂದಿತು. ಇದೇ ದಿನವನ್ನು ಪ್ರತಿವರ್ಷ ಗಣರಾಜ್ಯ ದಿನವನ್ನಾಗಿ ಹೆಮ್ಮೆಯಿಂದ ಆಚರಿಸಲಾಗುತ್ತಿದೆ. ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾದ ಈ ದಿನವು ವರ್ಷದ ಮೊದಲ ರಾಷ್ಟ್ರೀಯ ಹಬ್ಬವೂ ಹೌದು.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹಿರಿಮೆ ನಮ್ಮ ಭಾರತ ದೇಶಕ್ಕಿದೆ. ಪ್ರಜಾಪ್ರಭುತ್ವದ ಮೂಲಾಧಾರ ಸಂವಿಧಾನವಾಗಿದೆ. ದೇಶ ಮುನ್ನಡೆಯಲು ಬೆಳಕಾಗಿ ಸಂವಿಧಾನ ನಮಗೆ ದಾರಿ ತೋರುತ್ತಿದೆ. ಈ ದೇಶದ ಎಲ್ಲ ಪ್ರಜೆಗಳು, ವಿದ್ಯಾರ್ಥಿಗಳು, ಯಾವುದೇ ವೃತ್ತಿಯಲ್ಲಿರುವವರು ಸಂವಿಧಾನ ಅರಿತುಕೊಳ್ಳಬೇಕು. ಗಣರಾಜ್ಯೋತ್ಸವದ ಈ ದಿನದ ಸಂದರ್ಭದಲ್ಲಿ ನಾವೆಲ್ಲ ಮತ್ತೊಮ್ಮೆ ನಮ್ಮ ಸಂವಿಧಾನವನ್ನು ಅಧ್ಯಯನ ಮಾಡುವ ಸಂಕಲ್ಪ ಮಾಡೋಣ.
ಭಾರತ ಸಂವಿಧಾನ ರಚನೆಗೆ ಶ್ರಮಿಸಿದ ಡಾ. ಬಿ.ಆರ್.ಅಂಬೇಡ್ಕರ ಹಾಗೂ ಎಲ್ಲ ಮಹನೀಯರ ಸೇವೆಯನ್ನು ಸ್ಮರಿಸೋಣ ಎಂದು ಸಚಿವರು ತಿಳಿಸಿದರು.