ಭಟ್ಕಳ:ಬಿಜೆಪಿ ಭಟ್ಕಳ ಮಂಡಲದ ಬೂತ್ ಅಧ್ಯಕ್ಷರ ಸಮಾವೇಶ ಕಾರ್ಯಕ್ರಮವನ್ನು ನಗರದ ಆಸರಕೇರಿಯ ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ಸಭಾಭವನದಲ್ಲಿ ಶಾಸಕ ಸುನಿಲ್ ನಾಯ್ಕ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಬೂತ್ ಅಧ್ಯಕ್ಷರು ಪಕ್ಷದ ಜೀವಾಳು ಎಂದರಲ್ಲದೇ, ಪಕ್ಷಕ್ಕಾಗಿ ದುಡಿಯುವ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೂತ್ ಮಟ್ಟದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಇದ್ದರೂ ಸಹ ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಿಕೊಂಡು ಮುನ್ನಡೆಯುವಂತೆ ಸಲಹೆ ನೀಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ ಮಾತನಾಡಿ, ಪಕ್ಷದ ಕಾರ್ಯಚಟುವಟಿಕೆಗಳು ಮೊದಲು ಬೂತ್ ಅಧ್ಯಕ್ಷರ ಗಮನಕ್ಕೆ ಬರಬೇಕು ಎಂದು ಸಲಹೆ ನೀಡಿದರು.
ಇನ್ನೊರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ ಮಾತನಾಡಿ, ಬೂತ್ ಅಧ್ಯಕ್ಷರ ಕಾರ್ಯವೈಖರಿ ಹಾಗೂ ಪಕ್ಷದ ಜನಪರ ಯೋಜನೆಗಳು ಜನಸಾಮಾನ್ಯರಿಗೆ
ತಲುಪಿಸುವಲ್ಲಿ ಬೂತ್ ಅಧ್ಯಕ್ಷರ ಪಾತ್ರಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಪಕ್ಷ ಬೆಳೆದು ಬಂದ ದಾರಿ, ಬೂತ್ ಅಧ್ಯಕ್ಷರ ಪಾತ್ರ. ಮುಂದೆ ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಣೆ ನೀಡಿದರು.
ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ರೇಯಾ ಸಚಿನ್ ಮಹಾಲೆ ವಂದೇ ಮಾತರಂ ಗೀತೆ ಹಾಡಿದರು. ಮಂಡಲದ ಅಧ್ಯಕ್ಷ ಸುಬ್ರಾಯ ದೇವಾಡಿಗ ಸ್ವಾಗತಿಸಿ, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡಿದರು.
ನಂತರ ಉಪಸ್ಥಿತರಿದ್ದ ಎಲ್ಲ ಬೂತ್ ಸಮಿತಿಯ ಅಧ್ಯಕ್ಷರಿಗೆ ನಾಮಫಲಕವನ್ನು ವಿತರಣೆ ಮಾಡಲಾಯಿತು. ವೇದಿಕೆಯಲ್ಲಿ ಜಿಲ್ಲಾ ಹಿಂದುಳಿದ ಮೋರ್ಚಾದ ಅಧ್ಯಕ್ಷರಾದ ರವಿ ನಾಯ್ಕ ಜಾಲಿ, ಮಂಡಲದ ಪ್ರಭಾರಿಗಳಾದ ಪ್ರಶಾಂತ್ ನಾಯ್ಕ, ಜಿಲ್ಲಾ ಕಾರ್ಯದರ್ಶಿಯಾದ ಶಿವಾನಿ ಶಾಂತರಾಮ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕರಾದ ನವೀನ್ ಕುಮಾರ್, ನಿಕಟಪೂರ್ವ ಅಧ್ಯಕ್ಷರಾದ ರಾಜೇಶ್ ನಾಯ್ಕ, ಮಂಡಲದ ಪದಾಧಿಕಾರಿಗಳು, ಮಂಡಲದ ಜಿಲ್ಲಾ ಪದಾಧಿಕಾರಿಗಳು, ಮಂಡಲದ ಜಿಲ್ಲಾ ಮೋರ್ಚಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಪ್ರಭಾರಿಗಳು, ಜಿಲ್ಲಾ ಮತ್ತು ಮಂಡಲದ ಪ್ರಕೋಷ್ಠ ಸಂಚಾಲಕರು ಮತ್ತು ಸಹಸಂಚಾಲಕರು, ಮಂಡಲದ ಮೋರ್ಚಾ ಅಧ್ಯಕ್ಷರು ಮತ್ತು ಪ್ರಧಾನಕಾರ್ಯದರ್ಶಿಗಳು, ಮಂಡಲದ ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಶಕ್ತಿ ಕೇಂದ್ರದ ಪ್ರಮುಖರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು.ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಸದಸ್ಯರು, ಮಹಿಳಾ ಮೋರ್ಚಾ ಪ್ರಮುಖರು ಹಾಜರಿದ್ದರು.
ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ನಾಯ್ಕ ಅವರು ಸರ್ವರನ್ನೂ ವಂದಿಸಿದರು. ಭಾಸ್ಕರ್ ದೈಮನೆ ಅವರು ಕಾರ್ಯಕ್ರಮ ನಿರೂಪಿಸಿದರು.