ಕಾರವಾರ : ಇಡೀ ವಿಶ್ವವನ್ನ ತಲ್ಲಣಗೊಳಿಸಿದ ಕೊವೀಡ್-19 ವೈರಾಣುವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ, ವಿವಿಧ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮ, ಸೇರಿದಂತೆ ಆಕಾಶವಾಣಿಯಲ್ಲೂ ಕೂಡಾ ಮಾಹಿತಿಯನ್ನು ಹಂಚಿಕೊಳ್ಳಲಿದೆ. ಸಾರ್ವಜನಿಕರು ಮನೆಯಲ್ಲಿದ್ದು, ಜಾಗರೂಕರಾಗಿ ಸುಳ್ಳು ಸುದ್ದಿಗಳಿಗೆ ಗಮನ ಕೊಡಬೇಡಿ ಎಂದು ಜಿಲ್ಲಾಧಿಕಾರಿ ಡಾ.ಕೆ ಹರೀಶಕುಮಾರ್ ಅವರು ಜನತೆಯಲ್ಲಿ ಮನವಿ ಮಾಡಿಕೊಂಡರು.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿನ ಜನತೆ ಜಿವನಾವಶ್ಯಕ ಚಟುವಟಿಕೆ ಹೊರತು ಪಡಿಸಿ ಇನ್ನುಳಿದ ಅನಗತ್ಯ ಚಟುವಟಿಕೆಗಳಿಗೆ ಭಾಗಿಯಾಗದೇ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಕೋವಿಡ್-19 ವೈರಾಣು ಪತ್ತೆಯಾದ ಮನೆಯನ್ನು ಸಂಪೂರ್ಣ ಬಂದ್ ಮಾಡಿ ಆ ಮನೆಯ ಮುಂದೆ ಪೋಸ್ಟರ್ ಹಾಕಲಾಗುವುದು. ಅದರ ಜೊತೆಗೆ ಆ ಮನೆಯ ಎಲ್ಲಾ ಸದಸ್ಯರ ಕೈಗೆ ಮುದ್ರೆಯನ್ನು ಹಾಕಲಾಗುವುದು ಎಂದು ತಿಳಿಸಿಸದರು. ಈ ರೀತಿ ಮಾಡುವುದರಿಂದ ಅವರು ಇತರರ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಸಾಧ್ಯವಾದಷ್ಟರ ಮಟ್ಟಿಗೆ ಜನರು ಮನೆಯಲ್ಲಿಯೇ ಇರುವುದು ಉತ್ತಮ. ದಿನ ನಿತ್ಯದ ಸಾಮಾಗ್ರಿಗಳಿಗೆ ಅಂಗಡಿಗಳ ಮುಂದೆ ಗುಂಪುಗುಂಪಾಗಿ ಜನ ಸೇರಿಕೊಳ್ಳಬಾರದೆಂದು ಮನವಿ ಮಾಡಿದರು.
ಜಿಲ್ಲಾ ಪೂಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರು ಮಾತನಾಡಿ ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಕೂಡಾ ಸೆಕ್ಷನ್ 144 ಜಾರಿಯಲ್ಲಿರುತ್ತದೆ. ಇದು ಸಾರ್ವಜನಿಕರ ಆರೋಗ್ಯ ಮತ್ತು ಸಮಾಜದ ಹಿತದೃಷ್ಟಿಯಿಂದ ಜಾರಿ ಮಾಡಲಾಗಿದ್ದು, ಜನತೆ ಇದನ್ನು ಅರಿತುಕೊಂಡು ಸ್ವಯಂಪ್ರೇರಣೆಯಿಂದ ಅನುಸರಿಸತಕ್ಕದ್ದು, ಮತ್ತು ತಮ್ಮ ರಕ್ಷಣೆಯ ಜೊತೆಗೆ ಇತರರ ರಕ್ಷಣೆಯನ್ನು ಕೂಡಾ ಮಾಡಬೇಕಾಗುತ್ತದೆ ಎಂದರು.
ಅನಾವಶ್ಯಕವಾಗಿ ಹೊರಗಡೆ ಅಲೆದಾಡುವುದು, ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗುಂಪಾಗಿ ಕಾಣಿಸಿಕೊಂಡವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂಬ ಮುನ್ನೆಚ್ಚರಿಕೆ ನೀಡಿದರು.