ಭಟ್ಕಳ: ವ್ಯಾಪಾರ ಪರವಾನಿಗೆ ನವೀಕರಣ ಮಾಡದೇ ಇದ್ದರೆ ಏಕಾಏಕಿ ಅಂಗಡಿ ಬಂದ್ ಮಾಡಲು ಅವಕಾಶ ಇಲ್ಲ; ಪುರಸಭಾ ಮುಖ್ಯಾಧಿಕಾರಿಗಳ ಮುಂದೆ ಸದಸ್ಯರ ವಾದ
ಭಟ್ಕಳ: ಅಂಗಡಿಕಾರರು ವ್ಯಾಪಾರ ಪರವಾನಿಗೆ (ಟ್ರೇಡ್ ಲೈಸೆನ್ಸ್) ನವೀಕರಣ ಮಾಡಿಕೊಳ್ಳದೇ ಇದ್ದರೆ ಏಕಾಏಕಿಯಾಗಿ ಅಂಗಡಿಗಳನ್ನು ಮುಚ್ಚಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಪುರಸಭಾ ಸದಸ್ಯರು ಶನಿವಾರ ಸಂಜೆ ಮುಖ್ಯಾಧಿಕಾರಿಗಳನ್ನು ಭೇಟಿ ಮಾಡಿ ವಾದ ಮಂಡಿಸಿದರು.
ಪುರಸಭಾ ಸದಸ್ಯರ ಪರವಾಗಿ ಮಾತನಾಡಿದ ಹಿರಿಯ ಸದಸ್ಯ ಫರ್ವೇಜ್ ಕಾಶೀಮ್ಜಿ, ಅಂಗಡಿಕಾರರು ವ್ಯಾಪಾರ ಪರವಾನಿಗೆ ನವೀಕರಣ ಮಾಡಿಕೊಳ್ಳದೇ ಇದ್ದರೆ ಅಂತವರಿಗೆ ನೋಟೀಸ್ ನೀಡಿ, ಅದಕ್ಕೆ ಸ್ಪಂದಿಸದೇ ಇದ್ದರೆ ಕಾನೂನಿನಲ್ಲಿ ಏನು ಅವಕಾಶ ಇದೆಯೋ ಅದನ್ನು ಮಾಡಿ, ಅದನ್ನು ಬಿಟ್ಟು ಅಂಗಡಿ ಮುಚ್ಚಲು ಹೋಗಬೇಡಿ, ಕಾನೂನಿನಲ್ಲಿ ಅಂಗಡಿ ಮುಚ್ಚಲು ಅವಕಾಶ ಇದ್ದರೆ ಅದನ್ನು ನಮ್ಮ ಗಮನಕ್ಕೆ ತನ್ನಿ, ನಾವು ಅದನ್ನು ಅಂಗಡಿಕಾರರಿಗೆ ತೋರಿಸುತ್ತೇವೆ ಎಂದರು.
ಹಲವು ಪುರಸಭಾ ಅಂಗಡಿ ಮಳಿಗೆಗಳಿಂದ ಇನ್ನೂ ಬಾಡಿಗೆ ಭರಣ ಆಗಿಲ್ಲ. ಬಹಳಷ್ಟು ಗೂಡಂಗಡಿಗಳು, ಬೀದಿ ವ್ಯಾಪಾರಿಗಳು ಕಾನೂನು ಮೀರಿ ವ್ಯಾಪಾರ ವಹಿವಾಟು ನಡೆಸುತ್ತಿವೆ. ಅದನ್ನು ತೆರವುಗೊಳಿಸಲು ಇನ್ನೂ ಆಗದೇ ಉಳಿದ ಅಂಗಡಿಗಳನ್ನು ಮುಚ್ಚಲು ಹೋಗಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಕೆಲವು ಪುರಸಭಾ ಅಂಗಡಿ ಮಳಿಗೆಗಳಲ್ಲಿ ಅಕ್ರಮ ಸಾರಾಯಿ ಮಾರಾಟ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಕೆಲ ಸದಸ್ಯರು ಅಧಿಕಾರಿಗಳ ಗಮನಕ್ಕೆ ತಂದರು.
ಸದಸ್ಯರ ಒಟ್ಟಾಭಿಪ್ರಾಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಪುರಸಭಾ ಮುಖ್ಯಾಧಿಕಾರಿ ದೇವರಾಜು ಭರವಸೆ ನೀಡಿದರು.
ಅಲ್ತಾಫ್ ಖರೂರಿ, ಫಯ್ಯಾಜ್ ಮುಲ್ಲಾ, ಇಂಶಾದ್, ಅಬ್ದುಲ್ ರವೂಫ್ ನಾಯಿತೆ, ಪಾಸ್ಕಲ್ ಗೋಮ್ಸ್, ಕ್ರಿಷ್ಣಾನಂದ್ ಪೈ, ಮೊದಲಾದವರು ಉಪಸ್ಥಿತರಿದ್ದರು.