ಭಟ್ಕಳ: ಇಲ್ಲಿನ ಶಿರಾಲಿ ಪಂಚಾಯತ ವ್ಯಾಪ್ತಿಯಲ್ಲಿ ಹೆದ್ದಾರಿ ಅಗಲೀಕರಣ ವಿಚಾರವಾಗಿ ಸುಮಾರು 700 ಮೀಟರವರೆಗೆ ರಸ್ತೆ ಅಗಲೀಕರಣವನ್ನು 45 ಮೀ.ನಿಂದ 30 ಮೀ.ಗೆ ಸೀಮಿತಗೊಳಿಸಿರುವ ವಿರುದ್ಧ ಸಾಂಕೇತಿಕವಾಗಿ ಗುರುವಾರದಂದು ಇಲ್ಲಿನ ಗ್ರಾಮಸ್ಥರು, ಅಂಗಡಿಕಾರರು ಪ್ರತಿಭಟನಾ ಮೆರವಣಿಗೆ ಕೈಗೊಂಡು ಗ್ರಾಮ ಪಂಚಾಯತ ಆವರಣದಲ್ಲಿ ಸಹಾಯಕ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿ 45 ಮೀ.ಗೆ ರಸ್ತೆ ಅಗಲೀಕರಣ ಮಾಡುವಂತೆ ಆಗ್ರಹಿಸಿದರು.
ಗುರುವಾರದಂದು ಇಲ್ಲಿನ ಸಾರದಹೊಳೆ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದಿಂದ ಶ್ರೀ ಹಾದಿ ಮಾಸ್ತಿ ದೇವಸ್ಥಾನವರೆಗೆ ಸುಮಾರು 3 ಸಾವಿರಕ್ಕೂ ಅಧಿಕ ಸ್ಥಳಿಯರು, ವ್ಯಾಪಾರಸ್ಥರು, ಸಂಘ ಸಂಸ್ಥೆಗಳು, ಸ್ವ-ಸಹಾಯ ಸಂಘ, ಸ್ತ್ರೀ ಶಕ್ತಿ ಸಂಘ ಹಾಗೂ ಸಮಾಜದ ಎಲ್ಲಾ ಮುಖಂಡರು ಪ್ರತಿಭಟನೆಯನ್ನು ನಡೆಸಿದರು. ಸಾಗಿ ಬಂದ ಪ್ರತಿಭಟನಾ ಮೆರವಣಿಗೆಯೂದ್ದಕ್ಕೂ ಅಸಮರ್ಪಕ ರಸ್ತೆ ಅಗಲೀಕರಣದ ವಿರುದ್ಧ ಘೋಷಣೆಯನ್ನು ಕೂಗಲಾಯಿತು. ಇಲ್ಲಿನ ಶಿರಾಲಿ ಮುಖ್ಯ ಪೇಟೆಯಲ್ಲಿ ಅರ್ದಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿಯನ್ನು ಬಂದ ಮಾಡಿ ಸ್ಥಳಕ್ಕೆ ಸಹಾಯಕ ಆಯುಕ್ತರು ಬರಬೇಕೆಂದು ರಸ್ತೆ ತಡೆಯನ್ನು ನಡೆಸಲಾಯಿತು.
ಈ ವೇಳೆ ಸಿಪಿಐ ಕೆ.ಎಲ್.ಗಣೇಶ ಪ್ರತಿಭಟನಾಕಾರರಿಗೆ ರಸ್ತೆ ತಡೆ ನಿಲ್ಲಿಸುವಂತೆ ತಿಳಿಸಿದ್ದು ಅಂತ್ಯದಲ್ಲಿ ರಸ್ತೆ ತಡೆ ನಿಲ್ಲಿಸಿ ಶಿರಾಲಿ ಪಂಚಾಯತ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಸಹಾಯಕ ಆಯುಕ್ತರ ಬರಬೇಕೆಂದು ಪಟ್ಟು ಹಿಡಿದರು.
ಪ್ರತಿಭಟನೆ ಮುಂದಾಳತ್ವ ವಹಿಸಿದ್ದ ಶಿರಾಲಿ ಗ್ರಾಮ ಪಂಚಾಯತ ಅಧ್ಯಕ್ಷ ವೆಂಕಟೇಶ ನಾಯ್ಕ ಈ ಹಿಂದೆ ಶಿರಾಲಿಯಲ್ಲಿ 30 ಮೀ. ಅಗಲೀಕರಣದ ವೇಳೆ 45 ಮೀ. ಅಗಲೀಕರಣ ಮಾಡುವಂತೆ ಒತ್ತಾಯಿಸಿ ಪಂಚಾಯತನಿಂದ ಜಿಲ್ಲಾಧಿಕಾರಿಗಳ ಭೇಟಿ ನೀಡಿ ಮನವಿ ಸಲ್ಲಿಸಿದ ವೇಳೆ ಸಕಾರಾತ್ಮಕವಾಗಿ 45 ಮೀ. ಅಗಲೀಕರಣಕ್ಕೆ ಸ್ಪಂದನೆ ಸಿಕ್ಕಿತ್ತು. ಆದರೆ ಏಕಾಏಕಿ ಅಧಿಕಾರಿಗಳು ಜನರ ದಾರಿ ತಪ್ಪಿಸಿ ಜಾಗವನ್ನು ನೀಡಬೇಕಾದವರ ಒಪ್ಪಿಗೆ ಇನ್ನು ಇದೇ ಎಂದ ಅವರು ಪಂಚಾಯತನ್ನು ಅಧಿಕರಿಗಳು ಪೋಸ್ಟ ಮಾನ ರೀತಿಯಲ್ಲಿ ಕೆಲಸ ಮಾಡಿಸಿಕೊಳ್ಳುವ ಯತ್ನ ಮಾಡಿದ್ದು ಆದರೆ ಜನರು ಜನಪ್ರತಿನಿಧಿಗಳ ಮೇಲೆ ಭರವಸೆ ಇಟ್ಟುಮತ ನೀಡಿದ ಮೇಲೆ ಅವರ ಕೆಲಸ, ಬೇಡಿಕೆಯನ್ನೂ ಈಡೇರಿಸಬೇಕು. ಈ ವಿಚಾರದಲ್ಲಿ ರಾಜಕೀಯದವರ ಕೈವಾಡವು ಇದ್ದು ಶೀಘ್ರದಲ್ಲಿ ಅಧಿಕಾರಿಗಳು 45 ಮೀ. ಅಗಲೀಕರಣಕ್ಕೆ ಆದೇಶ ನೀಡದಿದ್ದರೆ ರಾಜೀನಾಮೆ ಸಲ್ಲಿಸಿ ಸಾರ್ವಜನಿಕರೊಂದಿಗೆ ಮುಂದಿನ ಚುನಾವಣೆಯನ್ನು ಬಹಿಷ್ಕಾರ ಮಾಡಬೇಕಾಗುತ್ತದೆಂದು ಪ್ರತಿಭಟಿಸಲಿದ್ದೇವೆ ಎಂದು ಎಚ್ಚರಿಸಿದರು.
ಈ ಸಂಧರ್ಭದಲ್ಲಿ ಸ್ಥಳಕ್ಕೆ ಸಹಾಯಕ ಆಯುಕ್ತರ ಸಾಜೀದ್ ಅಹ್ಮದ್ ಮುಲ್ಲಾ ಭೇಟಿ ನೀಡಿ ಶಿರಾಲಿ ಗ್ರಾಮಸ್ಥರ ಮನವಿಯನ್ನು ಸ್ವೀಕರಿಸಿದರು. ನಂತರ ಮಾತನಾಡಿದ ಅವರು ಜನರ ಬೇಡಿಕೆಯಂತೆ ರಸ್ತೆ ಕಾಮಗಾರಿ ಆರಂಭವಾಗಿದ್ದು ಇದಕ್ಕೆ ಗ್ರಾಮಸ್ಥರು, ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ಬಳಿಕ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಈಗ ನೀಡಲಾದ ಮನವಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಶಿರಾಲಿ ರಸ್ತೆ ಅಗಲೀಕರಣ ಕುರಿತಾಗಿ ಜನವರಿ 19ರಂದು ಕಾರವಾರದಲ್ಲಿ ಜಿಲ್ಲಾಧಿಕಾರಿಗಳು ತುರ್ತು ಸಭೆಯನ್ನು ಕರೆಯಲಾಗಿದ್ದು ಸಭೆಯಲ್ಲಿ ಸೂಕ್ತ ಚರ್ಚೆ ಹಾಗೂ ತೀರ್ಮಾನವನ್ನು ಕೈಗೊಳ್ಳಲಿದ್ದೇವೆ. ಎಂದು ಹೇಳಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರು, ತಾಲೂಕಾ ಪಂಚಾಯತ ಸದಸ್ಯರು, ಸಾಮಾಜಿಕ ಕಾರ್ಯಕರ್ತ ಉಲ್ಲಾಸ ಶ್ಯಾನಭಾಗ, ಶಿರಾಲಿ ಪಂಚಾಯತ ಉಪಾಧ್ಯಕ್ಷೆ, ಸದಸ್ಯರು, ಸ್ಥಳಿಯರಾದ ಭಾಸ್ಕರ ಮೋಗೇರ, ಸಿದ್ದಾರ್ಥ ನಾಯ್ಕ, ಮ್ಯಾಕ್ಸಿ ಕ್ಯಾಬ ಚಾಲಕರು, ಲಗೇಜ್ ರಿಕ್ಷಾ ಚಾಲಕರು, ಪ್ಯಾಸೆಂಜರ ರಿಕ್ಷಾ ಚಾಲಕರು, ಶಿರಾಲಿ ಗ್ರಾಮಸ್ಥರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಈ ಸಂಧರ್ಭದಲ್ಲಿ ಸಿಪಿಐ ಕೆ,ಎಲ್. ಗಣೇಶ, ನಗರ ಠಾಣೆ ಪಿಎಸೈ ಕೆ.ಕುಸುಮಾಧರ, ಗ್ರಾಮೀಣ ಠಾಣೆ ಪಿಎಸೈ ರವಿ ಜಿ.ಎ., ಎಎಸೈಗಳು ಕಾನಸ್ಟೇಬಲ್ಗಳು ಸ್ಥಳದಲ್ಲಿದ್ದು ಬಿಗಿ ಪೊಲೀಸ ಬಂದೋಬಸ್ತ ಹಾಕಲಾಗಿತ್ತು.