ಬೈಂದೂರು ಬಳಿ ಬುಲೆಟ್ ಬೈಕ್ ಡಿಕ್ಕಿಯಾಗಿ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಮಂಜುನಾಥ ನಾಯ್ಕ ಜಾಲಿ ಸಾವು
ಭಟ್ಕಳ:ರಸ್ತೆ ದಾಟುತ್ತಿದ್ದ ಭಟ್ಕಳ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಜಾಲಿ ನಿವಾಸಿಯಾದ ಮಂಜುನಾಥ ದುರ್ಗಪ್ಪ ನಾಯ್ಕ (44) ಅವರ ಬೈಕ್ ಡಿಕ್ಕಿಯಾಗಿ ದಾರುಣವಾಗಿ ಮೃತಪಟ್ಟಿದ್ದಾರೆ.
ಘಟನೆ ತಾಲೂಕಿನ ಯಡ್ತರೆ ರಾಹುತನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬೈಕ್ ಸವಾರ ಉಪ್ಪುಂದ ಕರ್ಕಿಕಳಿ ನಿವಾಸಿ ಕಿರಣ್ (21) ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ
ಘಟನೆಯ ವಿವರ:
ಟೆಂಪೋ ಟ್ರ್ಯಾಕ್ಸ್ ಮೂಲಕ ಧರ್ಮಸ್ಥಳಕ್ಕೆ
ತೆರಳಿ ಊರಿಗೆ ಹಿಂತಿರುಗುತ್ತಿದ್ದ ಭಟ್ಕಳ ಜಾಲಿಯ ತಂಡವೊಂದು ರಾಹುತನಕಟ್ಟೆ ಬಳಿ ವಾಹನ ನಿಲ್ಲಿಸಿದ್ದು, ಮಂಜುನಾಥ್ ನಾಯ್ಕ್ ಅವರು ರಾಷ್ಟ್ರೀಯ ಹೆದ್ದಾರಿಯ ಎದುರು ಬದಿ ಇದ್ದ ಮೀನಿನ ಅಂಗಡಿಗೆ ತೆರಳುತ್ತಿದ್ದ ಸಂದರ್ಭ ಬೈಂದೂರು ಕಡೆಯಿಂದ ಬುಲೆಟ್ ಬೈಕಿನಲ್ಲಿ ಬಂದ ಯುವಕ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಅಫಘಾತದ ರಭಸಕ್ಕೆ ರಸ್ತೆ ದಾಟುತ್ತಿದ್ದ ವ್ಯಕ್ತಿಯು ಬದಿಗೆ ಎಸೆಯಲ್ಪಟ್ಟು ಅಲ್ಲಿಯೇ ಮೃತಟ್ಟಿದ್ದಾರೆ. ಬುಲೆಟ್ ಬೈಕ್ ಸವಾರ ಡಿವೈಡರ್ ಬದಿಗೆ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದ ಆತನನ್ನು ಚಿಕಿತ್ಸೆಗಾಗಿ ಕುಂದಾಪುರಕ್ಕೆ ಕೊಂಡೊಯ್ಯಲಾಗಿದೆ. ಬೈಂದೂರು ಪೊಲೀಸ್ ಪಿಎಸೈ ಪವನ್ ನಾಯಕ್ ಹಾಗೂ ಸಿಬ್ಬಂಧಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದು,ಈ ಬಗ್ಗೆ ಬೈಂದೂರು ಠಾಣೆ ಪ್ರಕರಣ ಆಗಿದೆ.
ಬಿಜೆಪಿ ಮುಖಂಡರಾಗಿದ್ದ ಇವರು ಹಲವು ಸಂಘಟನೆಗಳಲ್ಲಿ ಸಕ್ರೀಯರಾಗಿದ್ದರು. ಅಪಾರ ಜನಬೆಂಬಲ ಹೊಂದಿದ್ದ ಇವರು ಭಟ್ಕಳ ವಿನಾಯಕ ಸೌಹಾರ್ಧ ಬ್ಯಾಂಕಿನ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.. ನಿಧನದ ಸುದ್ದಿ ತಿಳಿಯುತ್ತಿದ್ದಂತಯೇ ಶಾಸಕ ಸುನೀಲ ನಾಯ್ಕ ಸೇರಿದಂತೆ ನೂರಾರು ಜನರು ಬೈಂದೂರು ಅಸ್ಪತ್ರೆಯ ಎದುರು ಜಮಾಯಿಸಿದ್ದರು.ಮೃತರಿಗೆ ಪತ್ನಿ ಹಾಗೂ ಎರಡು ಮಕ್ಕಳಿದ್ದಾರೆ