ಸೈನಿಕರೇ ರೋಹಿಂಗ್ಯರನ್ನು ಕೊಂದರು; ರೊಹಿಂಗ್ಯಾ ನರಮೇಧದ ಬಗ್ಗೆ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ

Source: sonews | By Staff Correspondent | Published on 10th February 2018, 12:30 AM | National News | Global News | Don't Miss |

ಮ್ಯಾನ್ಮಾರ್: ಕಳೆದ ವರ್ಷ ಮ್ಯಾನ್ಮಾರ್ ನ ರಖೈನ್ ರಾಜ್ಯದಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಭುಗಿಲೆದ್ದ ಹಿಂಸಾಚಾರದ ವೇಳೆ ಇನ್ನ್ ದಿನ್ ಗ್ರಾಮದಲ್ಲಿ ಬೌದ್ಧರು ಮತ್ತು ಮ್ಯಾನ್ಮಾರ್ ಸೈನಿಕರು ನಡೆಸಿದ ರೊಹಿಂಗ್ಯಾ ನರಮೇಧದ ಬಗ್ಗೆ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸೆಪ್ಟಂಬರ್ 2ರ ಬೆಳಗ್ಗೆ 10 ರೊಹಿಂಗ್ಯಾ ಮುಸ್ಲಿಮರನ್ನು ಜೊತೆಯಾಗಿ ಬಂಧಿಸಿಡಲಾಗಿತ್ತು. ತಮ್ಮ ಬೌದ್ಧ ನೆರೆಕರೆಯವರು ಗುಂಡಿ ತೋಡುವುದನ್ನು ಅವರು ನೋಡುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಎಲ್ಲಾ 10 ರೊಹಿಂಗ್ಯಾ ಮುಸ್ಲಿಮರು ಶವವಾಗಿದ್ದರು. ಅವರಲ್ಲಿ ಕನಿಷ್ಠ ಇಬ್ಬರನ್ನು ಬೌದ್ಧ ಗ್ರಾಮಸ್ಥರು ಹೊಡೆದು ಕೊಂದಿದ್ದರು. ಉಳಿದವರನ್ನು ಮ್ಯಾನ್ಮಾರ್ ಸೈನಿಕರು ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಗುಂಡಿ ತೋಡಿದವರ ಪೈಕಿ ಇಬ್ಬರು ಹೇಳಿದ್ದಾರೆ.

‘‘10 ಜನರಿಗೆ ಒಂದು ಗುಂಡಿ’’ ಎಂದು ಇನ್ನ್ ದಿನ್ ಗ್ರಾಮದ ಬೌದ್ಧ ಸಮುದಾಯದ ನಿವೃತ್ತ ಸೈನಿಕ 55 ವರ್ಷದ ಸೋ ಚೇ ಹೇಳುತ್ತಾನೆ. ಗುಂಡಿ ತೋಡಲು ತಾನು ಸಹಾಯ ಮಾಡಿದೆ ಹಾಗೂ ಹತ್ಯೆಯ ಮೇಲುಸ್ತುವಾರಿ ವಹಿಸಿದೆ ಎಂದು ಅವನು ಹೇಳುತ್ತಾನೆ.

ಸೈನಿಕರು ಪ್ರತಿಯೊಬ್ಬ ರೊಹಿಂಗ್ಯಾ ಮುಸ್ಲಿಮ್ ಗೆ 2 ಅಥವಾ 3 ಗುಂಡುಗಳನ್ನು ಹಾರಿಸಿದರು ಎಂದು ಅವನು ಹೇಳಿದನು. ‘‘ಅವರನ್ನು ಹೂಳುವಾಗ ಕೆಲವರು ಇನ್ನೂ ಸದ್ದು ಮಾಡುತ್ತಿದ್ದರು. ಇತರರು ಅದಾಗಲೇ ಸತ್ತಿದ್ದರು’’ ಎಂದವನು ತಿಳಿಸಿದ್ದಾನೆ.

ರಖೈನ್ ರಾಜ್ಯದಲ್ಲಿ ಆಗಸ್ಟ್ 25ರಂದು ಆರಂಭಗೊಂಡ ಹಿಂಸಾಚಾರದ ಬಳಿಕ, ಸೇನಾ ದಮನ ಕಾರ್ಯಾಚರಣೆಗೆ ಬೆದರಿ ಸುಮಾರು 6 ಲಕ್ಷ ರೊಹಿಂಗ್ಯಾ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ಅಕ್ಟೋಬರ್ ವೇಳೆಗೆ, ಇನ್ನ್ ದಿನ್ ಗ್ರಾಮದಲ್ಲಿ ವಾಸಿಸುತ್ತಿದ್ದ ಸುಮಾರು 6,000 ರೊಹಿಂಗ್ಯಾ ಮುಸ್ಲಿಮರ ಪೈಕಿ ಯಾರೊಬ್ಬರೂ ಗ್ರಾಮದಲ್ಲಿ ಇರಲಿಲ್ಲ.>

ಬೌದ್ಧ ಗ್ರಾಮಸ್ಥರೇ ನೀಡಿದ ವಿವರಗಳು
ಈವರೆಗೆ ರಖೈನ್ ರಾಜ್ಯದಲ್ಲಿ ನಡೆದ ಹಿಂಸಾಚಾರ ಕುರಿತ ವಿವರಗಳನ್ನು ಸಂತ್ರಸ್ತರು ನೀಡುತ್ತಿದ್ದರು. ಈಗ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯು ಬೌದ್ಧ ಗ್ರಾಮಸ್ಥರೊಂದಿಗೆ ನಡೆಸಿದ ಮಾತುಕತೆಗಳ ಆಧಾರದಲ್ಲಿ ಅಲ್ಲಿ ನಡೆದ ಹತ್ಯಾಕಾಂಡದ ವಿವರಗಳನ್ನು ಸಂಗ್ರಹಿಸುತ್ತಿದೆ.

ರೊಹಿಂಗ್ಯಾ ಮುಸ್ಲಿಮರ ಮನೆಗಳಿಗೆ ಬೆಂಕಿ ಹಚ್ಚಿರುವುದು, ಅವರನ್ನು ಕೊಂದು ಹಾಕಿರುವುದು ಹಾಗೂ ಅವರ ದೇಹಗಳನ್ನು ಹೂತು ಹಾಕಿರುವುದನ್ನು ಬೌದ್ಧ ಗ್ರಾಮಸ್ಥರು ಒಪ್ಪಿಕೊಂಡಿದ್ದಾರೆ.

ರೊಹಿಂಗ್ಯಾ ಹತ್ಯಾಕಾಂಡದಲ್ಲಿ ಸೈನಿಕರು ಮತ್ತು ಅರೆ ಸೈನಿಕ ಪಡೆಗಳು ಶಾಮೀಲಾಗಿರುವುದನ್ನು ಭದ್ರತಾ ಸಿಬ್ಬಂದಿಯೇ ‘ರಾಯ್ಟರ್ಸ್’ ಜೊತೆ ಹೇಳಿಕೊಂಡಿದ್ದಾರೆ.
 

3 ಚಿತ್ರಗಳು ತೆರೆದಿಟ್ಟ ಹತ್ಯಾಕಾಂಡ
ಇನ್ನ್ ದಿನ್ ನಲ್ಲಿ ನಡೆದ 10 ರೊಹಿಂಗ್ಯಾ ಮುಸ್ಲಿಮರ ಹತ್ಯಾಕಾಂಡಕ್ಕೆ ಸಂಬಂಧಿಸಿದ ಚಿತ್ರಗಳನ್ನು ಗ್ರಾಮದ ಬೌದ್ಧ ಸಮುದಾಯದ ಹಿರಿಯರೊಬ್ಬರು ‘ರಾಯ್ಟರ್ಸ್’ಗೆ ನೀಡಿದ್ದಾರೆ.

ಸೆಪ್ಟಂಬರ್ 1ರ ಸಂಜೆ ಈ 10 ರೊಹಿಂಗ್ಯಾಗಳನ್ನು ಸೈನಿಕರು ಬಂಧಿಸಿರುವುದರಿಂದ ಹಿಡಿದು ಸೆಪ್ಟಂಬರ್ 2ರಂದು ಬೆಳಗ್ಗೆ 10 ಗಂಟೆಯ ವೇಳೆಗೆ ಅವರನ್ನು ಹತ್ಯೆ ಮಾಡುವವರೆಗಿನ ಹಲವು ಮಹತ್ವದ ಕ್ಷಣಗಳನ್ನು ಈ ಮೂರು ಚಿತ್ರಗಳು ಸೆರೆಹಿಡಿದಿವೆ.

ಈ ಚಿತ್ರಗಳನ್ನು ಈಗ ಬಾಂಗ್ಲಾದೇಶದ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿರುವ ಅವರ ಕುಟುಂಬ ಸದಸ್ಯರಿಗೆ ತೋರಿಸಿದಾಗ ಅವರು ತಮ್ಮವರನ್ನು ಗುರುತುಹಿಡಿದಿದ್ದಾರೆ.

ಮೃತ ವ್ಯಕ್ತಿಗಳಲ್ಲಿ ಮೀನುಗಾರರು ಮತ್ತು ವ್ಯಾಪಾರಿಗಳಿದ್ದರು. ಅವರ ಪೈಕಿ ಇಬ್ಬರು ಹದಿಹರೆಯದ ವಿದ್ಯಾರ್ಥಿಗಳಾಗಿದ್ದರು ಹಾಗೂ ಓರ್ವ ಇಸ್ಲಾಮಿಕ್ ಧರ್ಮ ಗುರುವಾಗಿದ್ದರು.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...