ಭಟ್ಕಳ : ನದಿಗೆ ಕೊಳಚೆ ನೀರು ಬಿಟ್ಟು ಮಲಿನಗೊಳಿಸುತ್ತಿರುವ ಕುರಿತು ಮಣ್ಕುಳಿ ಮತ್ತು ಮಾರುತಿ ನಗರ ಅಭಿವೃದ್ಧಿ ಸಮಿತಿ ಭಟ್ಕಳ ಮುಟ್ಟಳ್ಳಿ ಗ್ರಾಮ ಪಂಚಾಯತ ಪಿಡಿಓಗೆ ಮನವಿ ಸಲ್ಲಿಸಲಾಯಿತು.
ಮುಟ್ಟಳ್ಳಿ ಗ್ರಾಮ ಪಂಚಾಯಿತಿ ಎದುರು ಕಟ್ಟಿನ ಹೊಳೆಗೆ ಊರ ನಾಗರಿಕರೆಲ್ಲರೂ ಸೇರಿ ಕಟ್ಟು ಕಟ್ಟಿ ಜಲ ಸಂರಕ್ಷಣೆ ಕಾರ್ಯವನ್ನು ನೆರವೇರಿಸುತ್ತೇವೆ. ಹಾಗೂ ಹೊಳೆಯಲ್ಲಿನ ಕಸಕಡ್ಡಿ ಸ್ವಚ್ಛಗೊಳಿಸಿದ್ದು ನದಿಯಂಚಿನಲ್ಲಿ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸುತ್ತೇವೆ. ಈ ಸಂದರ್ಭದಲ್ಲಿ ತಮ್ಮ ಪಂಚಾಯತ ವ್ಯಾಪ್ತಿಯ ಕಟ್ಟಡದಿಂದ ಶೌಚಾಲಯದ ಮಲಿನ ನೀರು ಹಾಗೂ ಹೋಟೆಲನಲ್ಲಿ ಕೊಳಚೆ ನೀರು ನದಿಗೆ ಬಿಡಲಾಗುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿರುತ್ತದೆ. ಶೌಚಾಲಯ ನೀರಿಗೆ ಸೇಫ್ಟಿ ಟ್ಯಾಂಕಿನ ವ್ಯವಸ್ಥೆ ಇಲ್ಲದ ಕಟ್ಟಡಕ್ಕೆ ಪರವಾನಿಗೆಯನ್ನು ಕೊಟ್ಟಿರುವರು ಹೇಗೆ ಎಂಬುದನ್ನು ಪರಿಶೀಲಿಸಿ ಸಂಬಂಧಪಟ್ಟ ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕಾಗಿದೆ ಮತ್ತು ಶೌಚಾಲಯ ನೀರು ಮತ್ತು ಹೋಟೆಲ್ನಿಂದ ಬರುವ ಕೊಳಚೆ ನೀರು ನದಿಗೆ ಹರಿಸದಂತೆ ತಕ್ಷಣ ಕ್ರಮ ಕೈಗೊಳ್ಳಬೇಕಾಗಿ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಹೋರಾಟ ಅನಿವಾರ್ಯವಾಗಿರುತ್ತದೆ ಎಂದು ಈ ಮೂಲಕ ಪಂಚಾಯತ್ ಪಿಡಿಓಗೆ ಮನವಿಯನ್ನು ಸಲ್ಲಿಸಿದ್ದು, ಮನವಿಯನ್ನು ಪಂಚಾಯತ ಅಧ್ಯಕ್ಷೆ ಹಾಗೂ ಪಿಡಿಓ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸತೀಶ ಕುಮಾರ, ನಾಗರಾಜ ನಾಯ್ಕ, ಹನುಮಂತ ನಾಯ್ಕ, ಸಂತೋಷ ನಾಯ್ಕ, ಗಣಪತಿ ನಾಯ್ಕ, ಶಂಕರ ನಾಯ್ಕ, ವೆಂಕಟೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.