ಮಂಗಳೂರು: ರಾಷ್ಟ್ರೀಯ ಹೆದ್ದಾರಿ75ರ ಪಂಪ್ವೆಲ್ ಸಮೀಪದ ನಾಗುರಿ ಎಂಬಲ್ಲಿ ಶನಿವಾರ ಸಂಜೆ ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ವೇಳೆ ರಿಕ್ಷಾದಲ್ಲಿದ್ದ ಆರೋಪಿ ಪ್ರಯಾಣಿಕನ ಗುರುತನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿ ಮುಹಮದ್ ಶಾರಿಕ್ (24) ಆರೋಪಿಯಾಗಿದ್ದಾನೆ. ಈತ 2020ರಲ್ಲಿ ಮಂಗಳೂರು ನಗರದಲ್ಲಿ ಎರಡು ಕಡೆ ಕಂಡುಬಂದ ಪ್ರಚೋದನಾಕಾರಿ ಗೋಡೆ ಬರಹ ಪ್ರಕರಣದ ಆರೋಪಿಗಳಲ್ಲಿ ಓರ್ವನಾಗಿದ್ದ. ಎರಡು ಪ್ರಕರಣಗಳಲ್ಲಿ ದಸ್ತಗಿರಿಯಾಗಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ ಎಂದು ಎಡಿಜಿಪಿ ಅಲೋಕ್ ಕುಮಾ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿ ಸಭಾಂಗಣದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಇದಲ್ಲದೆ ಶಾರಿಕ್ 2022ರ ಸೆಪ್ಟೆಂಬರ್ 19ರಂದು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಕಾನೂನುಬಾಹಿರ ಚಟುವಟಿಕೆ ಪ್ರಕರಣದ 1ನೇ ಆರೋಪಿ. ಪ್ರಕರಣ ದಾಖಲಾದ ನಂತರ ಈತ ತಲೆಮರೆಸಿಕೊಂಡು ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ನ.19ರಂದು ಮೈಸೂರಿನಿಂದ ಹೊರಟು ಹುಣಸೂರು, ಮಡಿಕೇರಿ, ಪತ್ತೂರು, ಬಿ.ಸಿ.ರೋಡ್ ಮೂಲಕ ಬಸ್ಸಿನಲ್ಲಿ ಆಗಮಿಸಿ ಮಂಗಳೂರು ಹೊರ ವಲಯದಲ್ಲಿ ಬಸ್ಸಿನಿಂದ ಇಳಿದು ಆಟೊದಲ್ಲಿ ಪಂಪ್ವೆಲ್ ಕಡೆಗೆ ಹೋಗುತ್ತಿದ್ದಾಗ ನಾಗುರಿ ಬಳಿ ಆಟೋದಲ್ಲಿ ಸ್ಫೋಟ ನಡೆದಿದೆ.
ಆರೋಪಿ ಸದ್ಯ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳೊಂದಿಗೆ ಚಿಕಿತ್ಸೆ ಸಂಬಂಧಿಸಿ ಪಡೆಯುತ್ತಿದ್ದಾನೆ. ಪ್ರಕರಣಕ್ಕೆ ಈಗಾಗಲೇ ಮೈಸೂರಿನಲ್ಲಿ ಇಬ್ಬರು, ಮಂಗಳೂರಿನಲ್ಲಿ ಓರ್ವ ಹಾಗೂ ಊಟಿಯಿಂದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಎಡಿಜಿಪಿ ಮಾಹಿತಿ ನೀಡಿದ್ದಾರೆ. ಆರೋಪಿಯ ಕುಟುಂಬದವರು ಇಂದು ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿ ಆತ ಶಾರಿಕ್ ಎಂಬುದಾಗಿ ಗುರುತಿಸಿದ್ದಾರೆ ಎಂದು ಅವರು ಹೇಳಿದರು.
ಸ್ಫೋಟ ಸಂಭವಿಸಿದ ಜಾಗದಲ್ಲಿ ಆಧಾರ್ ಕಾರ್ಡ್ ವುಂದು ಸಿಕ್ಕಿತ್ತು. ಆದು ನಕಲಿ ಆಧಾರ್ ಕಾರ್ಡ್ ಆಗಿದ್ದು, ಅದರಲ್ಲಿದ್ದ ಹೆಸರಿನ ವೆಕ್ತಿಯ ಗುರುತು ಪತ್ತೆಯಾಗಿತ್ತು. ಆಧಾರ್ ಕಾರ್ಡ್ನಲ್ಲಿದ್ದ ಫೋಟೊ ಆ ವಿಳಾಸದ ವ್ಯಕ್ತಿಯದ್ದಾಗಿರಲಿಲ್ಲ. ಆತನ ಆಧಾರ್ ಕಾರ್ಡ್ ಆರು ತಿಂಗಳ ಹಿಂದೆ ಕಳೆದು ಹೋಗಿರುವ ವಿಚಾರವೂ ತಿಳಿದು ಬಂತು. ಇದೇವೇಳೆ ಆಟೊದಲ್ಲಿದ್ದ ಆರೋಪಿ ಪ್ರಯಾಣಿಕ ಎಲ್ಲಿಂದ ಬಂದಿದ್ದ ಎಂಬ ಮಾಹಿತಿ ಕಲೆ ಹಾಕಲಾಗಿತ್ತು. ಮೈಸೂರು ಪೊಲೀಸ್ ಆಯುಕ್ತ ರಮೇಶ್ರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ಅವರು ಕೇಂದ್ರ ತನಿಖಾ ಸಂಸ್ಥೆಯ ಸಹಾಯ ಪಡೆದು ಆರೋಪಿ ವಾಸವಿದ್ದ ಸ್ಥಳವನ್ನು ಪತ್ತೆಹುಟ್ಟಿದ್ದರು. ಶಿವಮೊಗ್ಗದಲ್ಲಿ ನಡೆದ ಗಲಾಟೆ ಪ್ರಕರಣವೊಂದಕ್ಕೆ ಸಂಬಂಧಿಸಿ ಜಬೀವುಲ್ಲಾ ಎಂಬಾತನನ್ನು ದಸ್ತಗಿರಿ ಮಾಡಲಾಗಿತ್ತು.
ಆ ಸಂದರ್ಭ ಈ ಆರೋಪಿ ಎಚ್ಚೆತ್ತುಕೊಂಡು ಊರು ಬಿಟ್ಟು, ಶಿವಮೊಗ್ಗದಿಂದ ಪರಾರಿಯಾಗಿ, ಕೊಯಮತ್ತೂರು, ಕೇರಳ, ಮೈಸೂರು ಮೊದಲಾದ ಕಡೆ ಸುತ್ತಾಡಿ ಮೈಸೂರಿನಲ್ಲಿ ವಾಸವಾಗಿದ್ದುಕೊಂಡು ಮೊಬೈಲ್ ರಿಪೇರಿ ಸಂಸ್ಥೆಯಲ್ಲಿ ತರಬೇತಿ ಪಡೆದುಕೊಂಡಿದ್ದ. ಇದೆಲ್ಲಾ ಮಾಹಿತಿ ಅಂದು ರಾತ್ರಿ ನಮಗೆ ಸಿಕ್ಕಿತ್ತು. ಹಾಗಾಗಿ ಆಧಾರ್ ಕಾರ್ಡ್ ಕೂಡಾ ನಕಲಿ ಆಗಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಗಾಯಾಳು ಪ್ರಯಾಣಿಕ ಶಾರಿಕ್ ಎಂಬ ಅನುಮಾನ ಬಂದಿತ್ತು. ಆದರೆ, ಆತನ ಹಳೆ ಫೋಟೊ ಹಾಗೂ ಈಗಿನ ಮುಖದಲ್ಲಿ ಬದಲಾವಣೆ ಇದ್ದ ಕಾರಣ, ಅವರ ಕುಟುಂಬಿಕರನ್ನು ಕರೆಸಿ ಗುರುತಿಸುವ ಕೆಲಸ ಮಾಡಲಾಗಿದೆ. ಅವರು ಇದೀಗ ಆರೋಪಿಯನ್ನು ಶಾರಿಕ್ ಎಂದು ಗುರುತಿಸಿದ್ದಾರೆ ಎಂದು ಎಡಿಜಿಪಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿಗಳಾದ ಅಂಶು ಕುಮಾರ್, ದಿನೇಶ್ ಕುಮಾರ್ ಉಪಸ್ಥಿತರಿದ್ದರು.