ಮಂಗಳೂರು: ಪೆಟ್ರೋಲ್ ಕೇಳುವ ನೆಪದಲ್ಲಿ ಯುವಕರಿಬ್ಬರ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ ಘಟನೆ ಅಡ್ಯಾರ್ ಪದವಿನಲ್ಲಿ ನಡೆದಿದೆ.
ಕೇರಳದ ಮಲಪ್ಪುರಂ ನಿವಾಸಿ, ಮಂಗಳೂರಿನ ಖಾಸಗಿ ಕಾಲೇಜೊಂದರ 3ನೆ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಸಾಜಿದ್ (23) ಹಾಗೂ ಆತನ ಸ್ನೇಹಿತನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಸಾಜಿದ್ ಮತ್ತು ಆತನ ಸ್ನೇಹಿತ ನೌಫಲ್ ಅಡ್ಯಾರ್ ಪದವಿನಿಂದ ಬಿತ್ತುಪಾದೆಗೆ ತೆರಳುತ್ತಿದ್ದರು. ಈ ಸಂದರ್ಭ ಅಡ್ಯಾರ್ ಪದವಿನಲ್ಲಿ ಬೈಕ್ ನಲ್ಲಿ ನಿಲ್ಲಿಸಿದ ಮೂವರ ತಂಡ "ಪೆಟ್ರೋಲ್ ಖಾಲಿಯಾಗಿದೆ. ಪೆಟ್ರೋಲ್ ಇದ್ದರೆ ನೀಡಿ" ಎಂದಿದೆ. ಸಾಜಿದ್ ಹಾಗೂ ನೌಫಲ್ ಪೆಟ್ರೋಲ್ ನೀಡಲು ಮುಂದಾಗುತ್ತಿದ್ದಂತೆ ಇವರ ಮೇಲೆ ದಾಳಿ ನಡೆದಿದೆ. ಘಟನೆಯಿಂದ ಸಾಜಿದ್ ನ ಕೈ ಹಾಗೂ ಹೊಟ್ಟೆಯ ಬಲಭಾಗಕ್ಕೆ ತೀವ್ರ ಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ.