ಮಂಗಳೂರು: ಸುರತ್ಕಲ್ ಟೋಲ್ಗೇಟ್ ನ್ನು ಹೆಜಮಾಡಿ ಟೋಲ್ಗೇಟ್ ನೊಂದಿಗೆ ವಿಲೀನಗೊಳಿಸಿರುವ ಹಿನ್ನೆಲೆಯಲ್ಲಿ ಹೆಜಮಾಡಿ ಟೋಲ್ಗೇಟ್ನ ದರವನ್ನು ಪರಿಷ್ಕರಿಸಲಾಗಿದೆ. ಅಲ್ಲದೆ 2022ರ ಡಿಸೆಂಬರ್ 1ರಿಂದ ಅನ್ವಯಗೊಳಿಸಿ ಶುಲ್ಕ ಸಂಗ್ರಹಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಗುರುವಾರ ಆದೇಶ ಹೊರಡಿಸಿದೆ.
ಈ ಹಿಂದೆ ಸುರತ್ಕಲ್ ನಲ್ಲಿ ವಸೂಲಿ ಮಾಡುತ್ತಿದ್ದ ಸಂಪೂರ್ಣ ಟೋಲ್ಗೇಟ್ ಶುಲ್ಕವನ್ನು ಹೆಜಮಾಡಿಯಲ್ಲಿ ಸೇರಿಸಿ ವಸೂಲಿ ಮಾಡಲು ಆದೇಶಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ತುಳುನಾಡ ಜನತೆಗೆ ಬಿಜೆಪಿ ನೀಡಿರುವ ಬಹುಮಾನ: ಹೋರಾಟ ಸಮಿತಿ ವ್ಯಂಗ್ಯ ಇದು ತುಳುನಾಡಿನ ಜನತೆಗೆ ಬಿಜೆಪಿ ನೀಡಿರುವ ಬಹುಮಾನವಾಗಿದೆ ಎಂದು ಟೋಲ್ಗೇಟ್ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ವ್ಯಂಗ್ಯವಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸುರತ್ಕಲ್ ಟೋಲ್ಗೇಟ್ಗೆ ಸಂಬಂಧಿಸಿ ಹೊರಡಿ ಸಿದ ಸುತ್ತೋಲೆಯ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಅವರು 'ಜನ ವಿರೋಧಿ ಸರಕಾರ ಮಾತ್ರ ಹೀಗೆ ಮಾಡಲು ಸಾಧ್ಯ. ಸುರತ್ಕಲ್ ಟೋಲ್ ದರವನ್ನು ಪೂರ್ತಿಯಾಗಿ ಸೇರಿಸಿ ಹೆಜಮಾಡಿಯಲ್ಲಿ ಸಂಗ್ರಹಿಸಲು (ಸುಲಿಗೆ ನಡೆಸಲು) ಹೆದ್ದಾರಿ ಪ್ರಾಧಿಕಾರ ಮುಂದಾಗಿವೆ. ಸದ್ಯ ಹೆಜಮಾಡಿಯಲ್ಲಿ ಕಾರಿನ ಟೋಲ್ ದರ ಏಕಮುಖ ಸಂಚಾರಕ್ಕೆ 40 ರೂ. ಇದ್ದು, ಇನ್ನಿಗ 100 ರೂ.ಆಗಲಿದೆ. ಅತ್ಯಂತ ಕೆಟ್ಟ, ಜನ ವಿರೋಧಿ ನಿರ್ಧಾರ ಇದಾಗಿದೆ. ತುಳುನಾಡಿನ ಜನತೆಗೆ ಎಸಗಿದ ಮಹಾ ಮೋಸವಾಗಿದೆ. 7 ವರ್ಷಗಳ ಕಾಲ ಸುರತ್ಕಲ್ ಟೋಲ್ಗೇಟ್ ನಲ್ಲಿ ಸಂಗ್ರಹಿಸಿದ ನೂರಾರು ಕೋಟಿಗೆ ಬೆಲೆಯೇ ಇಲ್ಲವಾಗಿದೆ ಎಂದು ತಿಳಿಸಿದ್ದಾರೆ. ಜನರ ಭಾವನೆ, ಕಷ್ಟ ಸುಖಗಳ ಬಗ್ಗೆ ಅರಿವಿಲ್ಲದ ಸಂಸದ, ಶಾಸಕರು ಮಾತ್ರ ಹೀಗೆ ನಡೆದುಕೊಳ್ಳಲು ಸಾಧ್ಯ. ಮತ ಹಾಕುವ ಇಲ್ಲಿನ ಜನರಿಗಿಂತ ನವಯುಗ್ ಟೋಲ್ ಕಂಪೆನಿಯ ಹಿತ ಮಾತ್ರ ಜನಪ್ರತಿನಿಧಿಗಳಿಗೆ ಮುಖ್ಯವಾಯಿತು. ಜನತೆ ಇದನ್ನು ಒಪ್ಪಬಾರದು. ಅವಿಭಜಿತ ಜಿಲ್ಲೆಯ ಜನ ಏಕಧ್ವನಿಯಾಗಿ ಈ ಅತ್ಯಂತ ಕೆಟ್ಟ ನಿರ್ಧಾರವನ್ನು ದೃಢವಾಗಿ ವಿರೋಧಿಸಬೇಕು ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಡಿಜಿಎಂ ಮತ್ತು ಯೋಜನಾ ನಿರ್ದೇಶಕ ಎಚ್.ಎಸ್. ಲಿಂಗೇಗೌಡ ಉಡುಪಿ ಜಿಲ್ಲಾಡಳಿತಕ್ಕೆ ಬರೆದ ಪತ್ರದಲ್ಲಿ ಎನ್ ಎಂಪಿ ರೋಡ್ ಕನೆಕ್ಟಿವಿಟಿ ರಸ್ತೆಯ ಸುರತ್ಕಲ್ನ ಟೋಲ್ಗೇಟ್ ಜೊತೆಗೆ ನವಯುಗ್ ಹೆಜಮಾಡಿ ಟೋಲ್ಗೇಟ್ ವಿಲೀನಗೊಳಿಸಲಾಗಿದೆ. ಅದರಂತೆ ಸುರತ್ಕಲ್ನ ಟೋಲ್ ಶುಲ್ಕವನ್ನು ಹೆಜಮಾಡಿ ಜೊತೆ ಸೇರ್ಪಡೆ ಮಾಡಲಾಗಿದೆ. ಒಂದು ವೇಳೆ ಹೆಜಮಾಡಿಯಲ್ಲಿ ವಿಲೀನದ ಬಳಿಕ ಟೋಲ್ ಶುಲ್ಕ ಏರಿಕೆ ಸಮಸ್ಯೆಯಾಗಿ ಟೋಲ್ ಸಂಗ್ರಹದಲ್ಲಿ ವ್ಯತ್ಯಯ ಉಂಟಾದರೆ ಎನ್ಎಚ್ ಎಐ ಜೊತೆಗಿನ ಸಹಕಾರ ಒಪ್ಪಂದದಂತೆ ನಷ್ಟವನ್ನು ರಾಜ್ಯವೇ ಭರಿಸಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. |
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾ.ಹೆ.66ರ ಸುರತ್ಕಲ್ ಟೋಲ್ ಪ್ಲಾಝಾ (ಎನ್ಐಟಿಕೆ ಬಳಿ) ವಿಲೀನಕ್ಕೆ ಅನುಮೋದನೆ ನೀಡಿದೆ. ನವಯುಗ್ ಉಡುಪಿ ಟೋಲ್ ವೇ ಪೈ.ಲಿ.ನ (ಟೋಲ್) ಯೋಜನೆಯಡಿ ಬರುವ ರಾ.ಹೆ. 66ರ ಸುರತ್ಕಲ್ ಟೋಲ್ ಗೇಟ್ನ ಶುಲ್ಕವನ್ನು ಹೆಜಮಾಡಿ ಟೋಲ್ ಪ್ಲಾಝಾದಿಂದ ಸಂಗ್ರಹಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ.
ಈವರೆಗೆ ಸುರತ್ಕಲ್ ಟೋಲ್ಗೇಟ್ನಲ್ಲಿ 'ಕೆ.ಎ.19' ಸಂಖ್ಯೆಯ ಖಾಸಗಿ ವಾಹನಗಳಿಗೆ ಶುಲ್ಕವಿರಲಿಲ್ಲ. ಆದರೆ ಇತರ ನೋಂದಣಿ ಸಂಖ್ಯೆಯ ವಾಹನಿಗರಿಂದ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಇದೀಗ ಸುರತ್ಕಲ್ ಟೋಲ್ ಗೇಟ್ ಶುಲ್ಕವನ್ನು ಹೆಜಮಾಡಿ ಟೋಲ್ ಗೇಟ್ ಶುಲ್ಕದೊಂದಿಗೆ ಸೇರಿಸಿ ಸಂಗ್ರಹಿಸಲು ಸುತ್ತೋಲೆ ಹೊರಡಿಸಿದ ಕಾರಣ 'ಕೆ.ಎ.19' ಸಂಖ್ಯೆಯ ಖಾಸಗಿ ವಾಹನಿಗರಿಗೆ ಇದು ಹೊರೆಯಾಗಿ ಪರಿಣಮಿಸಿದೆ. ಸುರತ್ಕಲ್ ಟೋಲ್ಗೇಟ್ನಲ್ಲಿ ಹಿಂದೆ ಇತರ ವಾಹನಗಳು ಕಟ್ಟುತ್ತಿದ್ದ ಶುಲ್ಕವನ್ನು ಹೆಜಮಾಡಿಯಲ್ಲಿ ಸೇರಿಸಿ ಕಟ್ಟುವುದು ಅನಿವಾರ್ಯವಾಗಿದೆ.
ಸುರತ್ಕಲ್ ಟೋಲ್ಗೇಟ್ನ್ನು ತೆರವುಗೊಳಿಸಬೇಕು. ಹೆಜಮಾಡಿ ಟೋಲ್ಗೇಟ್ನೊಂದಿಗೆ ವಿಲೀನಗೊಳಿಸಿದರೂ ಹೆಚ್ಚುವರಿ ಶುಲ್ಕ ವಸೂಲಿ ಮಾಡಬಾರದು ಎಂಬ ಬೇಡಿಕೆಯನ್ನು ಮುಂದಿಟ್ಟು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಕಳೆದೊಂದು ತಿಂಗಳಿನಿಂದ ಆಹೋರಾತ್ರಿ ಧರಣಿ ನಡೆಸುತ್ತಿತ್ತು. ಇದೀಗ ಸುರತ್ಕಲ್ ಟೋಲ್ಗೇಟ್ನ್ನು ತೆರವುಗೊಳಿಸುವುದಕ್ಕೆ ಪೂರ್ವಭಾವಿಯಾಗಿ ಹೆಜಮಾಡಿ ಟೋಲ್ಗೇಟ್ನಲ್ಲಿ ವಸೂಲಿ ಮಾಡಲಾಗುತ್ತಿದ್ದ ಶುಲ್ಕವನ್ನು ಹೆಚ್ಚಿಸಿದೆ. ಇದು 'ಕೆ.ಎ.19' ನೋಂದಣಿಯ ಖಾಸಗಿ ವಾಹನಿಗರಿಗೆ ಕೇಂದ್ರ ಸರಕಾರ ಎಸಗಿದ ದ್ರೋಹ, ವಂಚನೆ ಎಂಬ ಆರೋಪ ವ್ಯಕ್ತವಾಗುತ್ತಿದೆ.
ಸುರತ್ಕಲ್ ಟೋಲ್ ಗೇಟ್ನಲ್ಲಿ ನಾಲ್ಕು ಚಕ್ರದ ವಾಹನಗಳ ಏಕಮುಖ ಪಾಸ್ಗೆ 60 ರೂ. ಶುಲ್ಕ ವಿಧಿಸಲಾಗುತ್ತಿತ್ತು. ಹೆಜಮಾಡಿ ಟೋಲ್ಗೇಟ್ನಲ್ಲಿ 40 ರೂ. ವಿಧಿಸಲಾಗುತ್ತಿತ್ತು. ಇದೀಗ ಹೆಜಮಾಡಿ ಟೋಲ್ಗೇಟ್ನಲ್ಲಿ ಏಕಮುಖ ಪಾಸ್ಗೆ 100 ರೂ. ಶುಲ್ಕ ವಿಧಿಸಲಾಗುತ್ತದೆ. ಅದೇ ರೀತಿ ಬಸ್ ಮತ್ತು ಟ್ರಕ್ಗಳಿಗೆ ಸುರತ್ಕಲ್ ಟೋಲ್ಗೇಟ್ನಲ್ಲಿ 210 ರೂ ಮತ್ತು ಹೆಜಮಾಡಿ ಟೋಲ್ಗೇಟ್ನಲ್ಲಿ 145 ರೂ. ವಿಧಿಸಲಾಗುತ್ತಿತ್ತು. ಪರಿಷ್ಕತ ದರವು 355 ರೂ.ಆಗಿದೆ.
ಲಘು ವಾಣಿಜ್ಯ ಮತ್ತು ಲಘು ಸರಕು ವಾಹನಗಳಿಗೆ ಸುರತ್ಕಲ್ ಟೋಲ್ಗೇಟ್ನಲ್ಲಿ 100 ರೂ., ಹೆಜಮಾಡಿ ಟೋಲ್ಗೇಟ್ನಲ್ಲಿ 70 ರೂ. ವಿಧಿಸಲಾಗುತ್ತಿತ್ತು. ಬದಲಾವಣೆ ಬಳಿಕ ಹೆಜಮಾಡಿ ಟೋಲ್ಗೇಟ್ನಲ್ಲಿ 170 ರೂ. ವಸೂಲಿ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ಹೆಜಮಾಡಿ ಟೋಲ್ಗೇಟ್ನಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಹದಗೆಡುವ ಸಾಧ್ಯತೆಗಳಿವೆ ಎಂದಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಿವೆ.