ಬೆಂಗಳೂರು : ನಗರದ ಅಂಡರ್ವರ್ಲ್ಡ್ನಲ್ಲಿ ಈಗ ಮಂಗಳೂರು ರೌಡಿಗಳ ಎಂಟ್ರಿ ಶುರುವಾಗಿದೆ. ಸ್ಲಂ ಭರತನ ಎನ್ಕೌಂಟರ್ ನಂತರ ಬೆಂಗಳೂರಿನ ರೌಡಿಗಳು ದಿಕ್ಕಾಪಾಲಾಗಿದ್ದು ಆ ಜಾಗಕ್ಕೆ ಮಂಗಳೂರು ರೌಡಿಗಳು ಸದ್ದಿಲ್ಲದೆ ಕಾಲಿಟ್ಟಿದ್ದಾರೆ.
ಬೆಂಗಳೂರು ಭೂಗತಲೋಕದಲ್ಲಿ ಸದ್ಯ ಗ್ಯಾಂಗ್ವಾರ್ ಏನೂ ಆಗುತ್ತಿಲ್ಲ. ಆದರೂ ಕಡಲತೀರದಿಂದ ಸಿಲಿಕಾನ್ ಸಿಟಿಗೆ ಲಗ್ಗೆಯಿಡುತ್ತಿರುವ ರೌಡಿ ಪಡೆಗಳ ಮೇಲೆ ಬೆಂಗಳೂರು ಖಾಕಿ ಪಡೆ ಕಣ್ಣಿಟ್ಟಿರುವುದು ಮಾತ್ರವಲ್ಲದೆ ಒಬ್ಬೊಬ್ಬರನ್ನೇ ಒಳಗೆ ಹಾಕುವ ಕೆಲಸ ಮಾಡಲಾರಂಭಿಸಿದ್ದು, ಕಳೆದ ಮೂರ್ನಾಲ್ಕು ತಿಂಗಳಲ್ಲಿ ಸಾಲು ಸಾಲು ಕಡಲ ತೀರದ ರೌಡಿಶೀಟರ್ ಗಳು ಅರೆಸ್ಟ್ ಆಗಿರುವುದೇ ಇದಕ್ಕೆ ಸಾಕ್ಷಿ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಮನೀಶ್ ಶೆಟ್ಟಿ ಮರ್ಡರ್ ಕೇಸ್ ಸಂಬಂಧ ಮಂಗಳೂರು ಉಡುಪಿಯ ಐದು ಜನರ ಬಂಧನವಾಗಿತ್ತು.ಇದರಲ್ಲಿ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಕೈವಾಡವಿತ್ತು. ಇದೇ ತಿಂಗಳ 11ರಂದು ರಶೀದ್ ಮಲಬಾರಿ ಆಪ್ತ ಅಸ್ಗರ್ ಅಲಿ ಹಾಗೂ ಸಹಚರರು ಚರಸ್ ಜೊತೆ ವಿದ್ಯಾರಣ್ಯಪುರದಲ್ಲಿ ಸಿಕ್ಕಿಬಿದ್ದಿದ್ದರು.
ಎರಡು ದಿನಗಳ ಹಿಂದೆ ಮಹದೇವಪುರದಲ್ಲಿ ಸಿಸಿಬಿ ಪೊಲೀಸರ ಬಲೆಗೆ ವಿಶ್ವನಾಥ್ ಭಂಡಾರಿ ಹಾಗೂ ಕಿರಣ್ ಎಂಬ ರೌಡಿಶೀಟರ್ ಗಳು ಗ್ಯಾಂಗ್ ವಾರ್ ನಡೆಸಲು 20 ದಿನಗಳ ಹಿಂದೆ ಬೆಂಗಳೂರಿಗೆ ಬಂದು ಸಿಕ್ಕಿ ಬಿದ್ದಿದ್ದಾರೆ. ಹೀಗೆ ಸಿಕ್ಕಿ ಬಿದ್ದಿರುವ ಎಲ್ಲ ರೌಡಿಗಳ ಮೇಲೆ 10ಕ್ಕೂ ಹೆಚ್ಚು ಪ್ರಕರಣಗಳಿವೆ.
ಏಕಾಏಕಿ ಕಡಲ ತೀರದ ರೌಡಿಗಳು ರಾಜಧಾನಿಗೆ ಬರುತ್ತಿರುವುದು ಏಕೆ? ಎಂಬುದು ಪೊಲೀಸರ ನಿದ್ದೆಗೆಡಿಸಿದೆ. ಸದ್ಯಕ್ಕೆ ಬೆಂಗಳೂರು ಸೇಫ್ ಎಂಬ ಕಾರಣಕ್ಕೆ ಇಲ್ಲಿಗೆ ಬರುತ್ತಿದ್ದಾರೋ ಅಥವಾ ಯಾವುದೇ ಗ್ಯಾಂಗ್ವಾರ್ ನಡೆಸಲು ಸ್ಕೆಚ್ ಹಾಕಿದ್ದಾರೋ ಎಂಬುದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಒಂದು ಕಡೆ ಸ್ಲಂ ಭರತನ ಎನ್ ಕೌಂಟರ್ ನಂತರ ಬೆಂಗಳೂರು ರೌಡಿಗಳು ಚದುರಿ ಹೋಗಿದ್ದಾರೆ, ಮತ್ತೊಂದೆಡೆ ಮಂಗಳೂರು ರೌಡಿಗಳು ಬೆಂಗಳೂರಿಗೆ ಲಗ್ಗೆ ಹಾಕುತ್ತಿರುವುದರ ಮೇಲೆ ಬೆಂಗಳೂರು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.