ಮಂಗಳೂರು: ಇಂದಿನಿಂದ ದ್ವಿತೀಯ ಪಿಯು ತರಗತಿ ಆರಂಭ
ಮಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮುಚ್ಚಲ್ಪಟ್ಟಿದ್ದ ದ.ಕ.ಜಿಲ್ಲೆಯ ದ್ವಿತೀಯ ಪಿಯು ಕಾಲೇಜುಗಳ ಭೌತಿಕ ತರಗತಿಗಳು ಸೆ.1ರಿಂದ ಆರಂಭಗೊಳ್ಳಲಿವೆ.
ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಬೆಳಗ್ಗೆ 9:30ಕ್ಕೆ ತರಗತಿ ಆರಂಭಗೊಳ್ಳಲಿದ್ದು, ಮಧ್ಯಾಹ್ನ 1:30ರವರೆಗೆ ತರಗತಿ ನಡೆಯಲಿದೆ. ತರಗತಿಯ ಶೇ.50ರಷ್ಟು ವಿದ್ಯಾರ್ಥಿಗಳು ಮಾತ್ರ ಹಾಜರಾಗಬಹುದಾಗಿದೆ. ಅದಕ್ಕಾಗಿ ಬ್ಯಾಚ್ ವೈಸ್ ತರಗತಿ ನಡೆಸಲು ನಿರ್ದೇಶಿಸಲಾಗಿದೆ. ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ)ವನ್ನು ಅನುಷ್ಠಾನಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ಆಯಾ ಕಾಲೇಜಿನ ಪ್ರಾಂಶುಪಾಲರು ವಹಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ದ್ವಿತೀಯ ಪಿಯು ತರಗತಿ ಆರಂಭಕ್ಕೆ ಸಂಬಂಧಿಸಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ. ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗಿದೆ. ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಪೂರಕ ಕ್ರಮಕ್ಕೆ ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ. ಸಿ.ಡಿ. ಜಯಣ್ಣ, ಉಪನಿರ್ದೇಶಕ, ಪ.ಪೂ. ಶಿಕ್ಷಣ ಇಲಾಖೆ, ದ.ಕ. |
18 ವರ್ಷದೊಳಗಿನ ಮಕ್ಕಳಿಗೆ ಇನ್ನೂ ಲಸಿಕೆ ಕೊಡಿಸುವ ಪ್ರಕ್ರಿಯೆ ಆರಂಭಗೊಂಡಿಲ್ಲ. ಹಾಗಾಗಿ ದ್ವಿತೀಯ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆಯ ಸಮಸ್ಯೆ ಸದ್ಯ ಇಲ್ಲ. ಆದರೆ, ಉಪನ್ಯಾಸಕರು ಮತ್ತಿ ಸಿಬ್ಬಂದಿ ವರ್ಗದ ಎಲ್ಲರೂ ಕಡ್ಡಾಯವಾಗಿ ಲಸಿಕೆ ಕೊಡಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಕೇರಳದಿಂದ ಬರುವ ವಿದ್ಯಾರ್ಥಿಗಳನ್ನು 7 ದಿನಗಳ ಕಾಲ ಕ್ವಾರಂಟೈನ್ ನಲ್ಲಿರಿಸಲು ಮತ್ತು ಕೋವಿಡ್ ಸೋಂಕು ತಗಲಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಆರೈಕೆ ಮಾಡಲು ಕಾಲೇಜುಗಳಲ್ಲೇ ವಸತಿ ಸಹಿತ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ಗಳನ್ನು ಕಡ್ಡಾಯವಾಗಿ ತೆರೆಯಲು ಡಿಸಿ ಸೂಚಿಸಿದ್ದಾರೆ.
7 ದಿನಗಳ ಕ್ವಾರಂಟೈನ್ ಮುಗಿಸಿದ ವಿದ್ಯಾರ್ಥಿ ಗಳು ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ತರಗತಿಗೆ ಹಾಜರಾಗಬಹುದಾಗಿದೆ. ಕ್ವಾರಂಟೈನ್ ನಲ್ಲಿರುವ ವಿದ್ಯಾರ್ಥಿಗಳು ಕೋವಿಡ್ ಕೇರ್ ಸೆಂಟರ್ನಲ್ಲೇ ಆನ್ಲೈನ್ ತರಗತಿಯಲ್ಲಿ ಭಾಗವಹಿ ಸುವಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗವು ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ಶಿಕ್ಷಣ ಸಂಸ್ಥೆಗೆ ಹಾಜರಾಗಲು ಮತ್ತು ವಸತಿ ನಿಲಯದ ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿಗಳನ್ನು ನಡೆಸುವಂತೆ ಡಿಸಿ ತಿಳಿಸಿದ್ದಾರೆ.
ಕೇರಳದಿಂದ ಪ್ರತೀ ದಿನ ಬರುವ ವಿದ್ಯಾರ್ಥಿಗಳು ಏಳು ದಿನಗಳಿಗೊಮ್ಮೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ತರಗತಿಗೆ ಹಾಜರಾಗಬೇಕಾಗಿದೆ. ಕೇರಳದಿಂದ ಪ್ರತೀ ದಿನ ಬರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗವು (ಎರಡು ಡೋಸ್ ಪಡೆದಿದ್ದರೂ) ಪ್ರತೀ ಏಳು ದಿನಗಳಿಗೊಮ್ಮೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪ್ರಮಾಣ ಪತ್ರದೊಂದಿಗೆ ಶಿಕ್ಷಣ ಸಂಸ್ಥೆಗೆ ಹಾಜರಾಗಲು ಡಿಸಿ ಸೂಚಿಸಿದ್ದಾರೆ.
ಎಸ್ಒಪಿ ಪಾಲನೆಯಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಲು ಡಿಡಿಪಿಯು, ತಾಲೂಕು ಆರೋಗ್ಯಧಿಕಾರಿಗಳು, ಆಯಾ ಕಾಲೇಜುಗಳ ಪ್ರಾಂಶುಪಾಲರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ. ವೈದ್ಯಕೀಯ ಪ್ಯಾರಾ ಮೆಡಿಕಲ್ ನರ್ಸಿಂಗ್ ಕಾಲೇಜಿಗೆ ಸಂಬಂಧಿಸಿ ಈಗಾಗಲೇ ನೀಡಿದ ನಿರ್ದೇಶನದಂತೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ತೆರೆದು ಒಂದು ವಾರದ ಕ್ವಾರಂಟೈನ್ ಹಾಗೂ ಸೋಂಕಿತ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲು ಕ್ರಮ ವಹಿಸಬೇಕು. 7 ದಿನದ ನಂತರ ಮತ್ತೊಮ್ಮೆ ಆರ್ಟಿ-ಪಿಸಿಆ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ಬಂದಲ್ಲಿ ಮಾತ್ರ ಭೌತಿಕ ತರಗತಿಗಳನ್ನು ನಡೆಸಲು ಕ್ರಮ ಜರುಗಿಸಬೇಕು ಎಂದು ಡಿಸಿ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರಥಮ ಪಿಯು ತರಗತಿಯನ್ನು ಪಿಯು ಉಪನಿರ್ದೇಶಕರು ಹಾಗೂ ಪದವಿ/ಸ್ನಾತಕೋತ್ತರ ಭೌತಿಕ ತರಗತಿಗಳನ್ನು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಪೂರ್ವಾನುಮತಿ ಪಡೆದು ಸೆ.15ರ ಬಳಿಕ ತರಗತಿ ಆರಂಭಿಸುವ ಬಗ್ಗೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೂಚಿಸಿದ್ದಾರೆ.