ಕೋಲ್ಕತಾ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ತೆರಳಿದ್ದ ತನ್ನ ಮೇಲೆ ದಾಳಿ ನಡೆಸಲಾಗಿದೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಬಳಿಕ ಕಾರಿನೊಳಗೆ ಹೋಗಲು ಮುಂದಾದ ಸಂದರ್ಭ #ನಾಲೈದು ವ್ಯಕ್ತಿಗಳು ತನ್ನನ್ನು ತಳ್ಳಿದ್ದಾರೆ. ಆಗ ತಾನು ಕೆಳಕ್ಕೆ ಬಿದ್ದಿದ್ದು ಕಾಲು ಬಾತುಕೊಂಡಿದೆ. ಇದೊಂದು ಪೂರ್ವಯೋಜಿತ ಷಡ್ಯಂತ್ರವಾಗಿದೆ. ಈ ಘಟನೆ ನಡೆದಾಗ ಅಲ್ಲಿ ಯಾವ ಪೊಲೀಸರೂ ಇರಲಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನಂದಿಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಹೂಡಬೇಕಿದ್ದ ಮಮತಾ ಬಳಿಕ ಕೋಲ್ಕತ್ತಾಕ್ಕೆ ಮರಳಿದ್ದಾರೆ ಎಂದು ವರದಿಯಾಗಿದೆ.
ಭದ್ರತಾ ಸಿಬ್ಬಂದಿ ಮಮತಾ ಬ್ಯಾನರ್ಜಿಯನ್ನು ಎತ್ತಿಕೊಂಡು ಬಂದು ಕಾರಿನ ಹಿಂಬದಿಯ ಸೀಟಿನಲ್ಲಿ ಕುಳ್ಳಿರಿಸಿದ ದೃಶ್ಯ ಕಂಡುಬಂದಿದೆ. ಮಮತಾ ಅವರ ಕಾಲು, ಮುಖಕ್ಕೆ ಗಾಯವಾಗಿದ್ದು ಅವರನ್ನು ಚಿಕಿತ್ಸೆಗಾಗಿ ಕೋಲ್ಕತ್ತಾಕ್ಕೆ ಕರೆದೊಯ್ಯಲಾಗಿದೆ ಎಂದು ಮೂಲಗಳು ಹೇಳಿವೆ. ಬಂಗಾಳ ಪೊಲೀಸ್ ಇಲಾಖೆಯ ಮಹಾನಿರ್ದೇಶಕರಾಗಿದ್ದ ವೀರೇಂದರ್ರನ್ನು ಮಂಗಳವಾರ ಚುನಾವಣಾ ಆಯೋಗ ವರ್ಗಾಯಿಸಿತ್ತು.