ಭಟ್ಕಳ: ಶಮ್ಸುದ್ದೀನ್ ವತ್ತದಲ್ಲಿ ಭೀಕರ ಅಪಘಾತ: ಬೈಕ್ ಸವಾರ ಸಾವು
ಭಟ್ಕಳ: ನಗರದ ಹೃದಯಭಾಗವಾಗಿರುವ ಶಮ್ಸದ್ದೀನ್ ವೃತ್ತದ ಬಳಿ ಗುರುವಾರ ಜರಗಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾಗಿರುವ ಘಟನೆ ಗುರುವಾರ ಮಧ್ಯಾಹ್ನ 1.40ರ ಸುಮಾರಿಗೆ ತಾಲೂಕಿನ ಸಂಶುದ್ಧೀನ್ ಸರ್ಕಲ್ ಬಳಿ ನಡೆದಿದೆ.
ಮೃತ ವ್ಯಕ್ತಿಯನ್ನು ತಾಲೂಕಿನ ನವಾಯತ್ ಕಾಲೋನಿ ಅಮೀನುದ್ಧೀನ್ ರಸ್ತೆ ನಿವಾಸಿ ಅಬ್ದುಲ್ ವದೂದ್ ಮಾಣಿ (50) ಎಂದು ಗುರುತಿಸಲಾಗಿದೆ.
ಇವರು ಸಾಗರ ರಸ್ತೆಯಿಂದ ನವಾಯತ್ ಕಾಲೋನಿಯಡೆಗೆ ತಮ್ಮ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಶಮ್ಸುದ್ದೀನ್ ವೃತ್ತದ ಬಳಿ ತಿರುವಿನಲ್ಲಿ ಮಂಗಳೂರಿನಿಂದ ಮುಂಬೈಗೆ ಹೋಗುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಅಪಘಾತದ ರಭಸಕ್ಕೆ ಮೋಟಾರ್ ಬೈಕ್ ನುಜ್ಜುಗುಜ್ಜಾಗಿದೆ. ಲಾರಿಯಡಿ ಸಿಲುಕಿದ ಬೈಕ್ನ್ನು ಹಗ್ಗ ಕಟ್ಟಿ ಹೊರಕ್ಕೆ ಎಳೆದು ತರಲಾಯಿತು. ಸುತ್ತಮುತ್ತಲಿನ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದರು. 15 ನಿಮಿಷ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ಮೃತರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು.
ಮೃತರು ಹೆಂಡತಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
ಪಘಾತಕ್ಕೀಡಾದ ಲಾರಿಯು ಮಂಗಳೂರಿನಿಂದ ಮಹಾರಾಷ್ಟ್ರದತ್ತ ಪ್ರಯಾಣ ಬೆಳೆಸಿತ್ತು ಎಂದು ತಿಳಿದು ಬಂದಿದೆ. ಲಾರಿ ಚಾಲಕ ಹಬಿಬುಲ್ಲಾ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.