ಹೊಸದಿಲ್ಲಿ: ಲಾಕ್ಡೌನ್ ಸಡಿಲಿಕೆ, ನಿಯಮಗಳ ಉಲ್ಲಂಘನೆಯಿಂದ ಸೋಂಕು ಹೆಚ್ಚಳ, ಸಂಸತ್ನಲ್ಲಿ ಕೇಂದ್ರದ ವಿವರಣೆ
ಹೊಸದಿಲ್ಲಿ: ಲಾಕ್ಡೌನ್ ಸಡಿಲಿಕೆ, ಕೋವಿಡ್ ನಿಯಮಗಳ ಪಾಲನೆಯಲ್ಲಿ ಸಾಮುದಾಯಿಕ ನಿರ್ಲಕ್ಷ್ಯ ಮತ್ತು ಕೊರೋನ ವೈರಸ್ನ ಹೆಚ್ಚು ಸಾಂಕ್ರಾಮಿಕ ಪ್ರಭೇದಗಳ ಹರಡುವಿಕೆ ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ಪ್ರಕರಣ ಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸಹಾಯಕ ಆರೋಗ್ಯ ಸಚಿವೆ ಭಾರತಿ ಪ್ರವೀಣ ಪವಾರ್ ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ನಂತಹ ಪ್ರಭೇದ ಗಳಿಂದ ಸೋಂಕು ಉಂಟಾಗಿರುವ ಪ್ರಕರಣ ಗಳಲ್ಲಿ ಹೆಚ್ಚಿನ ಸಾಂಕ್ರಾಮಿಕತೆಯನ್ನು ಸೂಚಿಸುವ ಕೆಲವು ಸಾಕ್ಷ್ಯಾಧಾರಗಳು ಲಭ್ಯವಿವೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದಪವಾರ್, ಆರೋಗ್ಯ ಸಚಿವಾಲಯವು ತಜ್ಞರೊಂದಿಗೆ ಚರ್ಚಿಸಿದ ಬಳಿಕ ಕೊರೋನ ವೈರಸ್ನ ರೂಪಾಂತರಿ
ಗಳಿಂದ ಸೋಂಕಿನ ಪ್ರಕರಣಗಳಲ್ಲಿ ಹಾಲಿ ಕೋವಿಡ್ ಪ್ರಕರಣಗಳಲ್ಲಿ ನೀಡುತ್ತಿರುವ ಚಿಕಿತ್ಸೆಯೇ ಸಾಕು ಮತ್ತು ಚಿಕಿತ್ಸಾ ವಿಧಾನದಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲವೆಂದು ನಿರ್ಧರಿಸಿದೆ ಎಂದರು.
ಡೆಲ್ಟಾ ಪ್ಲಸ್ ಮತ್ತು ಲಂಬ್ಡಾಗಳಂತಹ ಹೊಸ ಪ್ರಭೇದಗಳು ಹೆಚ್ಚು ಸಾಂಕ್ರಾಮಿಕವೇ ಮತ್ತು ಕೇರಳ, ಅರುಣಾಚಲ ಪ್ರದೇಶ, ತ್ರಿಪುರಾ, ಒಡಿಶಾ, ಛತ್ತೀಸ್ಗಡ ಹಾಗೂ ಮಣಿಪುರ ಸೇರಿದಂತೆ ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಕರಣಗಳ ಹೆಚ್ಚಳಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಕಾಯಿಲೆಯ ತುರ್ತು ನಿಯಂತ್ರಣಕ್ಕೆ ಸರಕಾರವು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಪವಾರ್, ಆರೋಗ್ಯವು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದ್ದರೂ ಕೇಂದ್ರ ಸರಕಾರವು ಸಾಂಕ್ರಾಮಿಕವನ್ನು ಎದುರಿಸಲು ಹಾಲಿ ಆರೋಗ್ಯ ಮೂಲಸೌಕರ್ಯಗಳನ್ನು ಇನ್ನಷ್ಟು ಬಲಗೊಳಿಸಲು ಅಗತ್ಯ ತಾಂತ್ರಿಕ, ಹಣಕಾಸು ಮತ್ತು ಲಾಜಿಸ್ಟಿಕ್ ಬೆಂಬಲಗಳನ್ನು ರಾಜ್ಯಗಳಿಗೆ ಒದಗಿಸಿದೆ. ಐಸೋಲೇಷನ್ ಮತ್ತು ಐಸಿಯು ಹಾಸಿಗೆಗಳ ಸಂಖ್ಯೆಗಳನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದರು.