ಮಂಗಳೂರು : ಕೋವಿಡ್ ನಿರ್ವಹಣಾ ಕಾರ್ಯದಲ್ಲಿ ಸರ್ಕಾರದೊಂದಿಗೆ ಸ್ಥಳೀಯ ಜನಪ್ರತಿನಿಧಿಗಳು ಕೈ ಜೋಡಿಸಬೇಕು ಎಂದು ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಸೋಮೇಶ್ವರ ಪುರಸಭೆಯ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಲಾಕ್ ಡೌನ್ ಇರುವುದರಿಂದ ಕೋವಿಡ್ ಪಾಸಿಟಿವ್ ಕೇಸ್ ಗಳು ನಿಯಂತ್ರಣಕ್ಕೆ ಬರುತ್ತಿದ್ದು ಲಾಕ್ ಡೌನ್ ತೆರವುಗೊಳಿಸುವ ಸಂದರ್ಭದಲ್ಲಿ ಬರುವಂತಹ ಸಮಸ್ಯೆಗಳಿಗೆ ಆಯಾ ಪ್ಯಾಪ್ತಿಯಲ್ಲಿ ರಚಿಸಿರುವ ಕಾರ್ಯಪಡೆಗಳು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿ ಕಾರ್ಯ ಪ್ರವೃತ್ತಯರಾಗುವುದರಿಂದ ಕೋವಿಡ್ ನಿಯಂತ್ರಣ ಸಾಧ್ಯ ಎಂದರು.
ಮುಂದಿನ ದಿನಗಳಲ್ಲಿ ಜನಸಂಖ್ಯೆ ಆಧಾರದಲ್ಲಿ ಯಾವ ಗೊಂದಲವೂ ಆಗದಂತೆ ಪಾರದರ್ಶಕತೆಯಿಂದ ವ್ಯಾಕ್ಸಿನ್ ಪೂರೈಕೆ ಮಾಡುವುದರೊಂದಿಗೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಆರೋಗ್ಯ ಕೇಂದ್ರಗಳಲ್ಲಿ ಅಲ್ಲಿನ ಸಿಬ್ಬಂದಿಗಳು ಎಷ್ಟು ಜನರಿಗೆ ವ್ಯಾಕ್ಸಿನ್ ನೀಡಲು ಸಾಧ್ಯವಿರುತ್ತದೆಯೋ ಅಷ್ಟೇ ಪಾಸ್ ಗಳನ್ನು ವಿತರಿಸುವಂತೆ ಸೂಚಿಸಿದರು.
ಸಭೆಯಲ್ಲಿ ಶಾಸಕ ಯು. ಟಿ. ಖಾದರ್ ಮಾತನಾಡಿ ಪ್ರತೀ 23 ವಾರ್ಡ್ಗಳಲ್ಲಿ ಪ್ರತೀವಾರ ಕಾರ್ಯಪಡೆಗಳು ಸಭೆ ನಡೆಸುತ್ತಿದ್ದು, ಹಲವು ಸಂಘ ಸಂಸ್ಥೆಗಳಿಂದ ಈಗಾಗಲೇ ಸಂಕಷ್ಟದಲ್ಲಿರುವವರಿಗೆ ಹಾಗೂ ಕೋವಿಡ್ ಪಾಸಿಟಿವ್ ಬಂದಿರುವಂತಹ ಮನೆಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುವಂತಹ ಕಾರ್ಯ ಆಗುತ್ತಿದೆ ಎಂದ ಅವರು ಈಗಾಗಲೇ ಕೋವಿಡ್ ಪಾಸಿಟಿವ್ ಬಂದಿರುವಂತಹಾ ಮನೆಗಳಿಗೆ ಸಾಮಾಗ್ರಿಗಳನ್ನು ತಲುಪಿಸಲು 2 ಅಂಗಡಿಗಳ ಮೊಬೈಲ್ ಸಂಖ್ಯೆಗಳನ್ನು ನೀಡಲಾಗಿದೆ ಎಂದರು.
ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಈಗಾಗಲೇ 53 ಸಕ್ರೀಯ ಪ್ರಕರಣಗಳಿದ್ದು, 44 ಹೋಮ್ ಐಸೋಲೇಶನ್, 9 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದಾಗಿ ತಿಳಿಸಿದರು.
ನಂತರ ವ್ಯಾಕ್ಸಿನೇಶನ್ ಹಂಚಿಕೆಯ ಸಂದರ್ಭದಲ್ಲಿ ಜನಸಂಖ್ಯೆ ಆಧಾರದ ಮೇಲೆ ವ್ಯಾಕ್ಸಿನೇಶನ್ ಒದಗಿಸುವಂತೆ ಸಚಿವರಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕೋವಿಡ್-19 ಈ ಮನೆ ನಿಗಾವಣೆಯಲ್ಲಿದೆ” ಎನ್ನುವ ಸ್ಟಿಕ್ಕರ್ಗಳನ್ನು ಬಿಡುಗಡೆಗೊಳಿಸಿದರು. ಹಾಗೂ ಪುರಸಭೆ ವತಿಯಿಂದ ಹಸಿ ತ್ಯಾಜ್ಯದಿಂದ ತಯಾರಿಸಿರುವ ಸಾವಯವ ಗೊಬ್ಬರದ ಪ್ಯಾಕೆಟ್ಗಳನ್ನು ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಅಲೇಮಾರಿ ಜನಾಂಗದ ಅಧ್ಯಕ್ಷ ರವೀಂದ್ರ ಶೇಟ್, ಅಪರ ಜಿಲ್ಲಾಧಿಕಾರಿ ಪ್ರಜ್ಞಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಸೋಮೇಶ್ವರ ಪಂಚಾಯತ್ ಅಧ್ಯಕ್ಷೆ ವಾಣಿ ವಿ. ಆಳ್ವ, ಪಂಚಾಯತ್ ಸದಸ್ಯರು, ತಹಶೀಲ್ದಾರು, ಆಶಾಕಾರ್ಯಕರ್ತೆಯರು ಇನ್ನಿತರ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.