ಬೀದರ : ರೈತರು ಕೂಡ ನೆಮ್ಮದಿಯಿಂದ ಜೀವನ ನಡೆಸುವಂತಾಗುವ ನಿಟ್ಟಿನಲ್ಲಿ ರಾಜ್ಯದ ರೈತರ ಅಹವಾಲುಗಳಿಗೂ ಪ್ರಾಮಾಣಿಕವಾಗಿ ಸ್ಪಂದಿಸಲಾಗುವುದು ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಹೇಳಿದರು.
ಶುಕ್ರವಾರ ಬೀದರ ತಾಲ್ಲೂಕಿನ ಆಣದೂರ್ ಗ್ರಾಮದಲ್ಲಿ ಕನಿಷ್ಠ ಬೆಂಬಲ ಬೆಲೆ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು.
ಬೀದರ ಜಿಲ್ಲೆಯ ರೈತರು ತಿಳಿಸಿದ ಸಮಸ್ಯೆಗಳು ಬಹುತೇಕ ಅವು ರಾಜ್ಯದಲ್ಲೇ ಇತ್ಯರ್ಥವಾಗಲಿವೆ. ಈ ನಿಟ್ಟಿನಲ್ಲಿ ರಾಜ್ಯದ ಕೃಷಿ, ಸಕ್ಕರೆ ಮತ್ತು ಇನ್ನೀತರ ಮಂತ್ರಿ ಗಳೊಂದಿಗೆ ಚರ್ಚಿಸಿ ಸ್ಪಂದಿಸಲಾಗುವುದು ಎಂದರು. ರೈತರ ಬೇಡಿಕೆಯಂತೆ ಬೆಳೆಹಾನಿಯ ಕುರಿತು ಸರಿಯಾಗಿ ಸಮೀಕ್ಷೆ ಕಾರ್ಯ ನಡೆಸಲು ತಿಳಿಸಲಾಗುವುದು ಎಂದರು.
ಖರೀದಿ ಕೇಂದ್ರ ಸದುಪಯೋಗವಾಗಲಿ: ರೈತರು ಕೂಡ ಶ್ರಮಜೀವಿಯಾಗಿದ್ದಾರೆ. ಅವರ ದುಡಿಮೆಗೆ ತಕ್ಕ ಫಲ ಸಿಗಲೇಬೇಕು. ಈ ನಿಟ್ಟಿನಲ್ಲಿ ಖರೀದಿ ಕೇಂದ್ರಗಳ ಸ್ಥಾಪನೆಗೆ ಕೇಂದ್ರ ಸರ್ಕಾರವು ಹೆಚ್ಚಿನ ಒತ್ತು ನೀಡಿದೆ. ಈ ಹಿನ್ನೆಲೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ಕೇಂದ್ರಗಳಿಗೆ ಬಂದು ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ತೊಗರಿ ಬೆಳೆಗಾರರಿಗೆ ಅನುಕೂಲ: ಕಲಬುರಗಿ ಸೇರಿದಂತೆ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ರೈತರು ತೊಗರಿ ಬೆಳೆಯುತ್ತಾರೆ. ಹೀಗಾಗಿ ತೊಗರೆ ಬೆಳೆಗಾರರಿಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುಕೂಲ ಕಲ್ಪಿಸಿಕೊಡುವುದಾಗಿ ಅವರು ಹೇಳಿದರು.
ರೈತರ ಮನವಿ: ಬೀದರ ಜಿಲ್ಲೆಯಲ್ಲಿ ಹಸಿ ಶುಂಠಿಯನ್ನು ಹೆಚ್ಚಿನ ರೈತರು ಬೆಳೆಯುತ್ತಾರೆ. ಕಬ್ಬು ಬಿಟ್ಟರೆ ಹಸಿ ಶುಂಠಿಯು ಎರಡನೇ ಮಹತ್ವದ ವಾಣಿಜ್ಯ ಬೆಳೆಯಾಗಿದೆ. ಹೀಗಾಗಿ ಬೀದರ ಜಿಲ್ಲೆಯಲ್ಲಿ ಕೂಡ ಕೇಂದ್ರ ಸರ್ಕಾರದಿಂದ ಹಸಿ ಶುಂಠಿಗೆ ಖರೀದಿ ಕೇಂದ್ರವನ್ನು ತೆರೆಯಬೇಕು ಎಂದು ಜಿಲ್ಲೆಯ ಕೆಲವು ರೈತರು ಇದೆ ವೇಳೆ ಮನವಿ ಮಾಡಿದರು.
ಗೋದಾಮು ವ್ಯವಸ್ತೆ ಮಾಡಿ: ಬೀದರ ಜಿಲ್ಲೆಯಲ್ಲಿ ಒಟ್ಟು 171 ಸೊಸೈಟಿಗಳಿವೆ. ತೊಗರಿ, ಉದ್ದು, ಹೆಸರು ಖರೀದಿಸಿದ ಬಳಿಕ ಅದನ್ನು ಸಂಗ್ರಹಿಸಿಡಲು ಅನುಕೂಲವಾಗುವಂತೆ ಬೀದರ ಜಿಲ್ಲೆಯ ಎಲ್ಲಾ 171 ಸೋಸೈಟಿಗಳಲ್ಲಿ ಗೋದಾಮು ವ್ಯವಸ್ಥೆಯನ್ನು ಮಾಡಿಸಿಕೊಡಬೇಕು ಎಂದು ರೈತರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಶಾಸಕರಾದ ಬಂಡೆಪ್ಪ ಖಾಶೆಂಪೂರ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ನಿಗಮ ಮಂಡಳಿಯ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಜಿಲ್ಲಾ ಪಂಚಾಯತ್ ಸಿಇಓ ಜಹೀರಾ ನಸೀಂ, ಬೀದರ ಸಹಾಯಕ ಆಯುಕ್ತ ಗರೀಮಾ ಪನ್ವಾರ, ಕೃಷಿ ಇಲಾಖೆಯ ಅಧಿಕಾರಿ ತಾರಾಮಣಿ ಜಿ.ಎಚ್. ಹಾಗೂ ಇತರರು ಇದ್ದರು.