ಹೊಸದಿಲ್ಲಿ: ಕೊರೋನ ವೈರಸ್ ಸೋಂಕಿನ ಎರಡನೇ ಅಲೆ ದೇಶದಲ್ಲಿ ಚಂಡಮಾರುತದಂತೆ ಅಪ್ಪಳಿಸಿದೆ ಎಂದು ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.
ಆದರೆ ಲಾಕ್ಡೌನ್ ಹೇರಿಕೆಯನ್ನು ಕಟ್ಟಕಡೆಯ ಅಸ್ತ್ರವಾಗಿ ಮಾತ್ರ ಬಳಸಬೇಕೆಂದು ಅವರು ರಾಜ್ಯಗಳಿಗೆ ತಿಳಿಸಿದ್ದಾರೆ. ದೇಶದ ಜನತೆ ಕಟ್ಟುನಿಟ್ಟಾಗಿ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಬೇಕು ಹಾಗೂ ಅಗತ್ಯ ಕೆಲಸಗಳಿಗೆ ಮಾತ್ರ ಮನೆಯಿಂದ ಹೊರಹೋಗಬೇಕೆಂದು ಅವರು ಕರೆ ನೀಡಿದ್ದಾರೆ.
ದೇಶದ ಜನತೆಯನ್ನುದ್ದೇಶಿಸಿ ಮಂಗಳವಾರ ಮಾತನಾಡಿದ ಪ್ರಧಾನಿ, “ರಾಜ್ಯಗಳು ಲಾಕ್ಡೌನ್ ಹೇರಿಕೆಯನ್ನು ಕಟ್ಟಕಡೆಯ ಅಸ್ತವಾಗಿ ಮಾತ್ರ ಬಳಸಿಕೊಳ್ಳಬೇಕು. ಕೋವಿಡ್-19 ಹಾವಳಿ ಹೆಚ್ಚಿರುವ ಅತಿ ಸೂಕ್ಷ್ಮ ಕಂಟೈನೈಂಟ್ ವಲಯಗಳ ಬಗ್ಗೆ ಗಮನಹರಿಸಬೇಕು. ನಮ್ಮ ದೇಶದ ಜನತೆಯ ಆರೋಗ್ಯದ ಜೊತೆಗೆ ದೇಶದ ಆರ್ಥಿಕತೆಯ ಆರೋಗ್ಯದ ಬಗ್ಗೆಯೂ ನಾವು ಕಾಳಜಿ ವಹಿಸಬೇಕಾಗಿದೆ ಎಂದರು.
ಸದ್ಯಕ್ಕೆ ದೇಶದಲ್ಲಿ ಲಾಕ್ಡೌನ್ ಹೇರುವ ಚಿಂತನೆಯನ್ನು ಕೇಂದ್ರ ಸರಕಾರ ಹೊಂದಿಲ್ಲವೆಂದು ಪ್ರಧಾನಿ ಅವರು ತಮ್ಮ ಭಾಷಣದಲ್ಲಿ ಸಷ್ಟಪಡಿಸಿದರು.
“ಕೆಲವು ವಾರಗಳ ಕಾಲ ದೇಶದಲ್ಲಿ ಕೊರೋನ ಸೋಂಕಿನ ಪರಿಸ್ಥಿತಿ ನಿಯಂತ್ರಣದಲ್ಲಿತ್ತು. ನಾವು ಆಗಷ್ಟೇ ಕೋವಿಡ್-19 ಮೊದಲ ಅಲೆಯಿಂದ ಚೇತರಿಸಿಕೊಳ್ಳುತ್ತಿದ್ದೆವು. ಆದರೆ ಎರಡನೇ ಅಲೆಯು ಚಂಡಮಾರುತದಂತೆ ಅಪ್ಪಳಿಸಿದೆ'' . ಸೋಂಕಿನಿಂದಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಕೊರೋನ ಮಹಾಮಾರಿಯನ್ನು ನಿಯಂತ್ರಿಸುವ ಅತಿ ದೊಡ್ಡ ಸವಾಲು ಇಡೀ ದೇಶದ ಮುಂದಿದೆ. ಆದರೆ ದೃಢನಿರ್ಧಾರ ಹಾಗೂ ಸಂಕಲ್ಪದೊಂದಿಗೆ ನಾವು ಈ ಮಹಾಬಿಕ್ಕಟ್ಟನ್ನು ದಾಟಿಹೋಗಲಿದ್ದೇವೆ'' ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.