ಎರಡು ಸಾವಿರ ರೂಪಾಯಿಗೆ ಲೋಡ್ ಮರಳು ಒದಗಿಸಲಿ. ನಳೀನಕುಮಾರಗೆ ರಮಾನಾಥ ರೈ ಸವಾಲು.
ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ನೀಡಿರೋ ಹೇಳಿಕೆಗೆ ಅನುಗುಣವಾಗಿ 2 ಸಾವಿರ ರೂಪಾಯಿಗೆ ಲೋಡ್ ಮರಳು ಕೊಡಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿರೋ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕಾಲದಲ್ಲಿ ಮರಳಿನ ಸಮಸ್ಯೆ ಉಂಟಾಗಿತ್ತು. ಆಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 105 ಪರವಾನಗಿದಾರರು ಮರಳುಗಾರಿಕೆ ನಡೆಸುತ್ತಿದ್ದರು. ಆದರೆ ಕಳೆದ ಒಂದು ವರ್ಷದಿಂದ ಯಾರಿಗೂ ಪರವಾನಗಿ ನೀಡದಿದ್ದರೂ ಡ್ರೆಜ್ಜಿಂಗ್, ಜೆಸಿಬಿ ಬಳಸಿ ಮರಳುಗಾರಿಕೆ ನಡೆಸಲಾಗುತ್ತಿದೆ. ಅಕ್ರಮವಾಗಿ ಅವ್ಯಾಹತವಾಗಿ ಕೇರಳಕ್ಕೆ ಸಾಗಾಟ ಮಾಡಲಾಗುತ್ತಿದೆ. ನಳಿನ್ ಕುಮಾರ್ ಬೆಂಬಲಿಗರೇ ನೇರವಾಗಿ ಇದರಲ್ಲಿ ಪಾಲ್ಗೊಂಡಿದ್ದಾರೆಂದು ಆರೋಪಿಸಿದರು.
ಪರವಾನಗಿ ಪಡೆದು ಮರಳುಗಾರಿಕೆ ನಡೆಸುವುದು ದಂಧೆಯೋ, ಇಲ್ಲ ಪರವಾನಗಿ ಇಲ್ಲದೇ ನಡೆಸುವುದು ದಂಧೆಯೋ ಎಂದು ಸಂಸದರೇ ಜನತೆಗೆ ತಿಳಿಸಲಿ ಎಂದು ರೈ ಸವಾಲೆಸೆದಿದ್ದಾರೆ.