ಭಟ್ಕಳ: ವಕೀಲರ ದಿನಾಚರಣೆಯ ಪ್ರಯುಕ್ತ ಇಲ್ಲಿನ ವಕೀಲರ ಸಂಘದಲ್ಲಿ ವಕೀಲರಿಗಾಗಿ ಕ್ರಿಕೆಟ್ ಸೇರಿದಂತೆ ಹಲವು ಆಟೋಟ ಸ್ಪರ್ಧೆಗಳನ್ನು ಎರ್ಪಡಿಸಿದ್ದು ವಿಜೇತ ವಕೀಲರಿಗೆ ಸಂಜೆ ಎರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ವಕೀಲ ಹಾಗೂ ಮಾಜಿ ಶಾಸಕ ಜೆ.ಡಿ. ನಾಯ್ಕ, ವಕೀಲರ ದಿನಾಚರಣೆಯನ್ನು ಅತ್ಯಂತ ಸಂತಸದಿಂದ ಆಚರಿಸುತ್ತಿದ್ದೇವೆ. ನಾವು ಯಾವತ್ತೂ ಒಗ್ಗಟ್ಟಿನಲ್ಲಿದ್ದರೆ ಮಾತ್ರ ಯಶಸ್ಸು ಸಾಧ್ಯವಾಗುವುದು ಎಂದರಲ್ಲದೇ ಭಟ್ಕಳ ವಕೀಲರ ಸಂಘದಲ್ಲಿನ ಒಗ್ಗಟ್ಟು ಉತ್ತಮವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲ ನಾಗರಾಜ ಈ.ಎಚ್. ರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಕೀಲರಿಗೆ ಸದಾ ಸಮಾಜದ ಕುರಿತು ಕಳಕಳಿ ಅಗತ್ಯವಾಗಿದೆ. ವಕೀಲಿ ವೃತ್ತಿಯಲ್ಲಿ ನಾವು ಸಮಾಜದ ಶೊಷಿತರು, ಬಡವರ ಕುರಿತು ಕಾಳಜಿ ವಹಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಹಿರಿಯ ವಕೀಲ ಹಾಗೂ ನಿಕಟಪೂರ್ವ ಅಧ್ಯಕ್ಷ ಆರ್.ಆರ್. ಶ್ರೇಷ್ಟಿ ಮಾತನಾಡಿ ವಕೀಲರು ಸದಾ ವೃತ್ತಿ ಗೌರವವನ್ನು ಎತ್ತಿ ಹಿಡಿಯಬೇಕು. ಸನ್ಮಾನಗೊಂಡ ನಾಗರಾಜ ಈ.ಎಚ್. ಅವರು ಮಧ್ಯಸ್ಥಗಾರರಾಗಿ ಅನೇಕ ಕ್ಲಿಷ್ಟಕರ ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದಲ್ಲದೇ ಎರಡು ಗ್ರಾಮಗಳ ನಡುವಿನ ವೈಮನಸ್ಸನ್ನು ಅತ್ಯಂತ ಚಾಣಾಕ್ಷತನದಿಂದ ಬಗೆಹರಿಸುವಲ್ಲಿ ಇವರ ಪಾತ್ರ ಹಿರಿಯದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎಂ.ಎಲ್. ನಾಯ್ಕ, ವಕೀಲರುಗಳ ಕಾರ್ಯದ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ಶಂಕರ ಕೆ. ನಾಯ್ಕ ಉಪಸ್ಥಿತರಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಜೆ.ಡಿ.ಭಟ್ಟ ಸ್ವಾಗತಿಸಿದರು. ಎಂ.ಜೆ. ನಾಯ್ಕ ಸನ್ಮಾನಿತರನ್ನು ಪರಿಚಯಿಸಿದರು. ಆರ್.ಜಿ. ನಾಯ್ಕ ನಿರೂಪಿಸಿದರು. ಸಹ ಕಾರ್ಯದರ್ಶಿ ನಾಗರಾಜ ನಾಯ್ಕ ವಂದಿಸಿದರು.