ಭಟ್ಕಳ: ನ್ಯಾಯವಾದಿಗಳು ಆಗಾಗ ಸಭೆ ಸೇರಿ ಸರ್ವೋಚ್ಚ ನ್ಯಾಯಾಲಯದ ಹಾಗೂ ಉಚ್ಚ ನ್ಯಾಯಾಲದ ತೀರ್ಪುಗಳ ಕುರಿತು ವಿಮರ್ಶೆ ಮಾಡಬೇಕು ಎಂದು ಹಿರಿಯ ನ್ಯಾಯವಾದಿ ಎ.ಎಸ್.ಎನ್. ಹೆಬ್ಬಾರ್ ಹೇಳಿದರು.
ಅವರು ಇಲ್ಲಿನ ಬಾರ್ ಅಸೋಶಿಯೇಶನ್ನಲ್ಲಿ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಹಾಗೂ ನ್ಯಾಯವಾದಿ ವಿ.ಎಂ. ನಾಯ್ಕ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.
ಇತ್ತೀಚೆಗೆ ರಾಮ ಮಂದಿರದ ಕುರಿತು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು ಸರ್ವರಿಗೂ ಸಮ್ಮತವಾಗಿದ್ದು ದೇಶದಲ್ಲಿ ಗಲಭೆಯಾಗುತ್ತದೆ, ಎನೋ ಸಂಭವಿಸುತ್ತದೆ ಎಂದು ಕೊಂಡವರಿಗೆ ನಿರಾಶೆಯಾಗಿದೆ. ಇದೊಂದು ಅತ್ಯಂತ ಮಹತ್ವದ ಐತಿಹಾಸಿಕ ತೀರ್ಪಾಗಿದ್ದು ದೇಶದ ಐಕ್ಯತೆ ಮತ್ತು ಸಮಗ್ರತೆಗೆ ನ್ಯಾಯಾಲಯ ನೀಡಿದ ಕೊಡುಗೆ ಎಂದರು. ಅಲ್ಲದೇ ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಪಡಿಸಿದ ಸಂಬಂಧ ಮಾತನಾಡಿದ ಅವರು ಈ ಪ್ರಕರಣದಲ್ಲಿಯೂ ಕೂಡಾ ಸರ್ವೋಚ್ಚ ನ್ಯಾಯಾಲಯ ಯಾವುದೇ ಆದೇಶ ನೀಡದೇ ಇರುವುದು ಸರ್ವತ್ರ ಶ್ಲಾಘನೀಯ ಎಂದ ಅವರು ಕಾಶ್ಮೀರದಲ್ಲಿ 1990ರ ದಶಕದಲ್ಲಿ ನಡೆದ ಕ್ರೌರ್ಯವನ್ನು ವಿವರಿಸಿದರು.
ವಕೀಲರ ಸಂಘಗಳಲ್ಲಿ ಒಕ್ಕಟ್ಟು ಇದ್ದಲ್ಲಿ ಮಾತ್ರ ನಾವು ನಮ್ಮ ಹಕ್ಕು ಪಡೆಯಲು ಸಾಧ್ಯವಾಗುವುದು ಎಂದ ಅವರು ವಕೀಲರುಗಳು ಸಂಘಟಿತರಾಗಿ ಆಗಾಗ ಕಾರ್ಯಗಾರಗಳನ್ನು ಹಮ್ಮಿಕೊಳ್ಳುವುದು ಇತ್ಯಾದಿಗಳನ್ನು ಮಾಡುವಂತೆಯೂ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಆರ್. ಆರ್. ಶ್ರೇಷ್ಟಿ ವಹಿಸಿದ್ದರು.
ವಕೀಲರ ದಿನಾಚರಣೆಯ ಅಂಗವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನ್ಯಾಯವಾಗಿ ವಿ.ಎಂ. ನಾಯ್ಕ ಮಾತನಾಡಿ ಓರ್ವ ಕಿರಿಯ ವಕೀಲನಾಗಿ ಭಟ್ಕಳ ಬಾರ್ ಎಸೋಶಿಯೇಶನ್ ಪ್ರವೇಶಿಸಿದಾಗಿನ ತಮ್ಮ ಅನುಭವವನ್ನು ಹಂಚಿಕೊಂಡ ಅವರು ಎಲ್ಲರ ಸಹಕಾರವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಎಂ. ಎಲ್. ನಾಯ್ಕ ಉಪಸ್ಥಿತರಿದ್ದರು. ಕಾರ್ಯದರ್ಶಿ ಎಂ.ಜೆ. ನಾಯ್ಕ ಸ್ವಾಗತಿಸಿದರು. ಜಿ.ಟಿ. ನಾಯ್ಕ ನಿರೂಪಿಸಿದರು. ದುರ್ಗಪ್ಪ ಮೊಗೇರ ವಂದಿಸಿದರು. ವಕೀಲರ ಸಂಘ ಎರ್ಪಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭ ನಡೆಯಿತು.