ಭಟ್ಕಳ ನವಾಯತ್ ಕಾಲೋನಿ ಕ್ಲಸ್ಟರ್ ನಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಂದಲೇ ಚಾಲನೆ
ಭಟ್ಕಳ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಭಟ್ಕಳ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ನವಾಯತ್ ಕಾಲೋನಿ ಜಂಟಿಯಾಗಿ ಹಮ್ಮಿಕೊಂಡಿರುವ ಎರಡು ದಿನಗಳ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಇಲ್ಲಿನ ನವಾಯತ್ ಕಾಲೋನಿಯ ಸರ್ಕಾರಿ ಉರ್ದು ಪ್ರೌಢಶಾಲಾ ಮೈದಾನದಲ್ಲಿ ಸೋಮವಾರ ಉದ್ಘಾಟನೆಗೊಂಡಿತು.
ಸಂಪೂರ್ಣವಾಗಿ ವಿದ್ಯಾರ್ಥಿಗಳೇ ಅತಿಥಿ, ಮುಖ್ಯ ಅತಿಥಿ, ಅಧ್ಯಕ್ಷರಾಗಿ ಭಾಗವಹಿದ್ದ ಈ ಕಾರ್ಯಕ್ರಮ ವಿಭಿನ್ನವಾಗಿತ್ತು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿನಿ ಸಫಾ ಶೇಖ್ ಮಾತನಾಡಿ ಕೋವಿಡ್ ನಿಂದಾಗಿ ವಿದ್ಯಾರ್ಥಿಗಳು ಕಲಿಕೆಯಿಂದ ವಂಚಿತಗೊಂಡಿದ್ದರು. ಈ ಕಲಿಕಾ ಹಬ್ಬದ ಮೂಲಕ ವಿದ್ಯಾರ್ಥಿಗಳಿಗೆ ಒಂದು ರೀತಿಯ ಚೈತನ್ಯ ಮೂಡಿದಂತಾಗಿದೆ. ವಿದ್ಯಾರ್ಥಿ ಮತ್ತು ಪಾಲಕರಲ್ಲಿ ಶಿಕ್ಷಣದ ಕುರಿತಂತೆ ಪ್ರಜ್ಞೆ ಮೂಡಿಸುವುದು, ವಿದ್ಯರ್ಥಿಗಳಲ್ಲಿರುವ ಹಿಂಜರಿಕೆಯನ್ನು ದೂರ ಮಾಡಿ ಅವರಲ್ಲಿ ಪ್ರಶ್ನೆಗಳನ್ನು ಕೇಳುವ ಸಾಮಾರ್ಥ್ಯ ಬೆಳೆಸುವುದು, ಕಲಿಕಾ ವಾತವರಣವನ್ನು ಉತ್ತಮಗೊಳಿಸುವುದು ಸೇರಿದಂತೆ ಹತ್ತಾರು ಮಹತ್ವದ ಉದ್ದೇಶಗಳನ್ನು ಈ ಕಲಿಕಾ ಹಬ್ಬ ಒಳಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕುಮಟಾ ಡಯಟ್ ಉಪನ್ಯಾಸಕ ಎಸ್.ವಿ.ಭಟ್, ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶಬ್ಬಿರ್ ಆಹಮದ್ ಧಪೆದಾರ್, ಆಲ್ ಇಂಡಿಯಾ ಐಡಿಯಲ್ ಟೀರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಮಾತನಾಡಿದರು.
ಆರಂಭದಲ್ಲಿ ನವಾಯತ್ ಕಾಲೋನಿ ಕ್ಲಸ್ಟರ್ ಸಿ.ಆರ್.ಪಿ ಮುನೀರಾ ಖತ್ತಾಲಿ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಅಫ್ಝಲ್ ಆಹಮದ್ ನೇಸರ್ಗಿ ಧನ್ಯವಾದ ಅರ್ಪಿಸಿದರು. ಶಿಕ್ಷಕ ಅಯ್ಯೂಬ್ ಖಾನ್ ಕಾರ್ಯಕ್ರಮ ನಿರೂಪಿಸಿದರು.
ನಿವೃತ್ತ ಶಿಕ್ಷಕ ಐ.ಡಿ.ಖಾನ್, ಸಂಪನ್ಮೂಲ ಶಿಕ್ಷಕರಾದ ಉಸ್ಮಾನ್ ಖಾನ್ ಲೋಹಾನಿ, ದೇವರಾಯ ದೇವಾಡಿಗ, ಅಬ್ದುಲ್ ಕಾದಿರ್ ಡಾಂಗಿ, ಗೌಲಿಬ್ ಔಟಿ, ವಿದ್ಯಾರ್ಥಿಗಳಾದ ಮುಹಮ್ಮದ್ ಅಕ್ಬರ್, ಫಝೀಲ್, ಸಬಸ್ಸುಮ್, ಮುಹಮ್ಮದ್ ಸವೂದ್ ಮತ್ತಿತರರು ಉಪಸ್ಥಿತರಿದ್ದರು.