ಕುವೈಟ್, ಆ ೨೧: ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್, ಭಾರತದ 71ನೇಯ ಸ್ವಾತಂತ್ರೋತ್ಸವವನ್ನು ಇಲ್ಲಿನ ಜಾಬ್ರಿಯಾ ಬಿ.ಬಿ.ಎಸ್. ಅಲುಮ್ನಿ ಕ್ಲಬ್ ನಲ್ಲಿ ಅದ್ದೂರಿಯಾಗಿ ಆಚರಿಸಿತು. ಆಗಸ್ಟ್ 15 ರ ಮಂಗಳವಾರ ಸಂಜೆ 7.30 ಕ್ಕೆ ಐಕ್ಯತಾ ಗಾನ 'ಸಾರೆ ಜಹಾಂಸೆ ಅಚ್ಚಾ...' ಹಾಡಿನ ತಾಳಕ್ಕೆ ಪುಟಾಣಿ ಮಕ್ಕಳು ತ್ರಿವರ್ಣ ಧ್ವಜಗಳನ್ನು ಸುಂದರವಾಗಿ ಬೀಸುವುದರೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು.
ಇಸ್ಲಾಂ ಪ್ರಸೆಂಟೇಶನ್ ಕಮಿಟಿ ಪ್ರಕಟಿಸಿತ್ತಿರುವ ಅಲ್ ಮಿಸ್ಬಾಹ್ ಉರ್ದು ಮ್ಯಾಗಜೀನ್ ಸಂಪಾದಕರಾದ ಸಫಾತ್ ಆಲಂ ತೈಮಿಯವರು ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಮರ ಪಾತ್ರದ ಬಗ್ಗೆ ವಿವರಿಸಿದರು. ತಾಯ್ನಾಡಿನಿಂದ ದೂರವಿದ್ದರೂ ಸ್ವಾತಂತ್ರೋತ್ಸವದ ಕಂಪನ್ನು ಮೆರೆಯಲು ದೊಡ್ಡ ಸಂಖ್ಯೆಯಲ್ಲಿ ಅನಿವಾಸಿಗಳನ್ನು ಒಟ್ಟುಗೂಡಿಸಿದ್ದಕ್ಕಾಗಿ ಸಂಘಟಕರನ್ನು ಅವರು ಅಭಿನಂದಿಸಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಇಂಡಿಯನ್ ಸೋಶಿಯಲ್ ಫೋರಮ್ ಕೇಂದ್ರ ಸಮಿತಿ ಉಪಾಧ್ಯಕ್ಷರಾದ ಜನಾಬ್ ಅಲ್ಲಾವುದ್ದಿನ್ ಹಕ್ ಬಿಹಾರ್'ರವರು ಭಾರತೀಯರ ಆಂತರಿಕ ಕಚ್ಚಾಟವು ಯಾವ ರೀತಿ ಭಾರತೀಯರನ್ನು ಯೂರೋಪಿಯನ್ನರ ಗುಲಾಮತ್ವದ ಕಡೆಗೆ ನೂಕಿತು ಎನ್ನುವುದನ್ನು ಸವಿಸ್ತಾರವಾಗಿ ವಿವರಿಸಿದರು. ಪ್ರಸಕ್ತ ನಮ್ಮನ್ನಾಳುತ್ತಿರುವ ಸರ್ವಾಧಿಕಾರಿ ಧೋರಣೆಯುಳ್ಳ ಸರ್ಕಾರಗಳು ಮತ್ತು ಬಂಡವಾಳಶಾಹಿ ಯೂರೋಪಿಯನ್ ಕೊಲೋನಿಯಲ್ ಶಕ್ತಿಗಳ ನಡುವಿನ ಸಾಮ್ಯತೆಗಳ ಬಗ್ಗೆ ಅವರು ಬೆಳಕು ಚೆಲ್ಲಿದರು. ಸ್ವಾತಂತ್ರ್ಯ ಹೋರಾಟದ ಧೀರ್ಘ ಪಯಣದಲ್ಲಿ ಲಕ್ಷಾಂತರ ಹುತಾತ್ಮತೆಯನ್ನು ಪಡೆದ ಸಮುದಾಯವು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡು ಸ್ವಾತಂತ್ರ್ಯ ಹೋರಾಟದಿಂದ ದೂರ ನಿಂತ ದೇಶದ್ರೋಹಿಗಳ ಮುಂದೆ ತನ್ನ ದೇಶಪ್ರೇಮವನ್ನು ಸಾಬೀತುಪಡಿಸಬೇಕಾಗಿರುವುದು ಐತಿಹಾಸಿಕ ದುರಂತ ಎಂದು ಅವರು ಕಳವಳ ವ್ಯಕ್ತಪಡಿಸಿದರು. \
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಮಾಜ ಸೇವಕ ಜನಾಬ್ ಖಲೀಲ್ ಅಡೂರ್, ಸ್ವಾತಂತ್ರ್ಯವೆಂಬುದು ಪ್ರತಿಯೊಂದು ಜೀವಿಯ ಜನ್ಮ ಸಿದ್ದ ಹಕ್ಕು. ಭಾರತದ ಅಥವಾ ಜಗತ್ತಿನ ಯಾವುದೇ ಸ್ವಾತಂತ್ರ್ಯ ಹೋರಾಟದ ಉದ್ದೇಶವು ಕೇವಲ ಆಡಳಿತ ಗಾರರನ್ನು ಬದಲಾವಣೆಗೊಳಿಸುವುದಕ್ಕಲ್ಲ ಬದಲಾಗಿ ತಾನಿಚ್ಚಿಸಿದ್ದನ್ನು ಮಾತನಾಡುವ, ತಾನಿಚ್ಚಿಸಿದಂತೆ ಬದುಕುವ, ತಾನಿಚ್ಚಿಸಿದ್ದನ್ನು ತಿನ್ನುವ ಮೂಲಭೂತ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವುದಕ್ಕಾಗಿಯೇ ಆಗಿದೆ. ಆದರೆ ಇಂದಿನ ದಮನಕಾರಿ ಸರಕಾರಗಳು ಜನರ ಮೂಲಭೂತ ಹಕ್ಕುಗಳನ್ನು ಕಸಿಯುತ್ತಿರುವುದು ಆತಂಕಕಾರಿ ಎಂದರು.
ಇಂಡಿಯನ್ ಸೋಶಿಯಲ್ ಫೋರಮ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಮಂಚಿ ಸಭೆಯನ್ನು ಸ್ವಾಗತಿಸಿದರು. ಶಮೀರ್ ಅಮಾನ್ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಸಿಕಂದರ್ ಭಾಷಾ ಕೊನೆಯಲ್ಲಿ ಧನ್ಯವಾದಗೈದರು. ಐಎಸ್ಎಫ್ ಕರ್ನಾಟಕ ಅಧ್ಯಕ್ಷರಾದ ಇಮ್ತಿಯಾಝ್ ಅಹ್ಮದ್ ಅರ್ಕುಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ಸಿಹಿತಿಂಡಿಗಳನ್ನು ವಿತರಿಸಲಾಯಿತು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.