ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಸ್ನಾನಕ್ಕೆಂದು ಇಳಿದ ಈರ್ವರು ಪದವಿ ವಿದ್ಯಾರ್ಥಿಗಳು ನೀರುಪಾಲಾಗಿದ್ದು, ಓರ್ವನ ಮೃತದೇಹ ಪತ್ತೆಯಾಗಿದೆ.ಕೋಟೇಶ್ವರ ಕಾಗೇರಿ ಸರ್ಕಾರಿ ಕಾಲೇಜಿನ ಪ್ರಥಮ ವರ್ಷದ ಬಿಎ ವಿದ್ಯಾರ್ಥಿ, ಸೇನಾಪುರ ನಿವಾಸಿ ರಾಜು ಮರಕಾಲ ಎಂಬವರ ಪುತ್ರ ಕೀರ್ತನ್(19) ಹಾಗೂ ಕಾಳಾವರ ನಿವಾಸಿ ಬಿಕಾಂ ವಿದ್ಯಾರ್ಥಿ ಸಚಿನ್(19)ಪರೀಕ್ಷೆ ತಯಾರಿಗಾಗಿ ಕಳೆದ ಕೆಲ ದಿನಗಳಿಂದ ಕಾಲೇಜಿಗೆ ರಜೆ ಸಾರಲಾಗಿತ್ತು. ಇಂದು ಅಂತಿಮ ಪರೀಕ್ಷೆಗಾಗಿ ಹಾಲ್ ಟಿಕೆಟ್ ತರಲು ಕಾಲೇಜಿಗೆ ಆಗಮಿಸಿದ್ದರು.
ಬೆಳಗ್ಗೆ ಹಾಲ್ ಟಿಕೆಟ್ ಪಡೆದು ವಾಪಾಸು ಮನೆಗೆ ತೆರಳಬೇಕಿದ್ದ ವಿದ್ಯಾರ್ಥಿಗಳು ಸಮೀಪದ ದೇವಸ್ಥಾನದಲ್ಲಿ ಕೆಲ ಹೊತ್ತು ಕಳೆಯಲು ಬಂದಿದ್ದರು. ನೀರುಪಾಲಾದ ವಿದ್ಯಾರ್ಥಿಗಳು.
ಸಚಿನ್, ಕೀರ್ತನ್ ಸೇರಿದಂತೆ ಮೂವರು ವಿದ್ಯಾರ್ಥಿಗಳು ದೇವಸ್ಥಾನದ ಕೆರೆಯ ಸಮೀಪ ಬಂದಿದ್ದು, ಈ ವೇಳೆಯಲ್ಲಿ ಸಚಿನ್ ಹಾಗೂ ಕೀರ್ತನ್ ಸ್ನಾನಕ್ಕೆಂದು ಕೆರೆಗೆ ಇಳಿದಿದ್ದರು.
ಓರ್ವ ವಿದ್ಯಾರ್ಥಿ ಕೆರೆಯ ದಡದಲ್ಲೇ ಕೂತಿದ್ದನು. ನೀರಿಗೆ ಇಳಿದ ಈರ್ವರು ವಿದ್ಯಾರ್ಥಿಗಳು ಮೇಲೆ ಬಾರದಿದ್ದನ್ನು ಗಮನಿಸಿದ ಇನ್ನೋರ್ವ ವಿದ್ಯಾರ್ಥಿ ಸ್ಥಳೀಯರಿಗೆ ಸುದ್ದಿ ಮುಟ್ಟಿಸಿದ್ದಾನೆ.ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ವಿದ್ಯಾರ್ಥಿಗಳ ಪತ್ತೆಗೆ ವ್ಯಾಪಕ ಶೋಧ ನಡೆಸಿದ್ದು, ಕೀರ್ತನ್ ಮೃತದೇಹ ಪತ್ತೆಯಾಗಿದೆ. ಸಚಿನ್ಗಾಗಿ ಶೋಧ ಕಾರ್ಯ ಮುಂದವರಿಸಲಾಗಿದೆ. ವಿದ್ಯಾರ್ಥಿ ಸಚಿನ್ ವಾಲಿಬಾಲ್ ಹಾಗೂ ಕಬಡ್ಡಿ ಕ್ರೀಡಾಪಟುವಾಗಿ ಕಾಲೇಜಿನಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ.