ಪಡುಕೋಣೆ : ನದಿಯಲ್ಲಿ ಕಾಲು ಜಾರಿ ಬಿದ್ದ ಮಗನನ್ನು ರಕ್ಷಿಸಲು ಹೋದ ತಾಯಿ ಮತ್ತು ಮಗ ಸಾವನ್ನಪ್ಪಿದ ಧಾರುಣ ಘಟನೆ ಪಡುಕೋಣೆ ಬಳಿ ನಡೆದಿದೆ.
ಪತ್ರಕರ್ತ ನೋಯೆಲ್ ಚುಂಗಿಗುಡ್ಡೆ ಅವರ ಪತ್ನಿ ರೋಜಾರೂಯಿ(34) ಮಗು ಶಾನ್ ರೂಯಿ(11) ಮೃತ ದುರ್ದೈವಿಗಳಾಗಿದ್ದಾರೆ.
ಬೆಳಿಗ್ಗೆ ಮನೆಯಿಂದ ವಾಕ್ ಬರುವಂತೆ ಮಗ ಹಠ ಮಾಡಿದ್ದರಿಂದ ತಾಯಿ ಮಗನೊಂದಿಗೆ ಹೆಜ್ಜೆ ಹಾಕಿದ್ದರು. ನದಿ ದಂಡೆಯ ಮೇಲೆ ಪಾಚಿ ಬೆಳೆದಿದ್ದರಿಂದ ಆಕಸ್ಮಿಕವಾಗಿ ಮಗ ಶಾನ್ ನದಿಗೆ ಬಿದ್ದಿದ್ದಾನೆ. ಆಗ ತಾಯಿ ಮಗುವನ್ನು ರಕ್ಷಿಸಲು ನದಿಗೆ ಹಾರಿದ್ದಾರೆನ್ನಲಾಗಿದೆ. ಆದರೆ ನದಿಯ ಸೆಳೆತಕ್ಕೆ ಸಿಲುಕಿದ ಇಬ್ಬರೂ ಮೃತಪಟ್ಟಿದ್ದಾರೆ.
ಪತ್ನಿ ಮತ್ತು ಮಗ ಮರಳಿ ಬಾರದ ಹಿನ್ನಲೆಯಲ್ಲಿ ನೋಯೆಲ್ ಅವರು ಪತ್ನಿಯ ಮೊಬೈಲಿಗೆ ಸತತ ಕಾಲ್ ಮಾಡಿದರೂ ಪ್ರತಿಕ್ರಿಯೆ ಬಾರದಿದ್ದಾಗ ಆತಂಕಗೊಂಡು ಆಚೀಚೆ ಹುಡುಕಾಟ ಆರಂಭಿಸಿದ್ದಾರೆ. ಈ ಸಂದರ್ಭ ಮಗುವಿನ ಚಪ್ಪಲಿ ನದಿ ದಂಡೆಯಲ್ಲಿ ಕಂಡು ಬಂದಿದೆ. ಕೂಡಲೇ ಸ್ಥಳೀಯರು ನದಿಯಲ್ಲಿ ಹುಡುಕಾಟ ನಡೆಸಿದಾಗ ಮಗುವಿನ ಶವ ಪತ್ತೆಯಾಗಿದೆ.
ಸತತ ಹುಡುಕಾಟದ ನಂತರ ರೋಜಾ ಅವರ ಶವ ಮಾರಸ್ವಾಮಿಯ ಸೇತುವೆ ಬಳಿ ಕಂಡು ದೊರೆತಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ರೋಜಾ ಅವರು ಕಳೆದ ಲಾಕ್ ಡೌನ್ ಕಾರಣ ಊರಿಗೆ ಬಂದಿದ್ದರು. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.