ಐಹಿಕ ಜೀವನಕ್ಕೆ ವಿದಾಯ ಹೇಳಿದ ಹಿರಿಯ ಕವಿ,ಸಾಹಿತಿ ಬಿ.ಎ.ಸನದಿ

Source: sonews | By Staff Correspondent | Published on 31st March 2019, 10:55 PM | Coastal News | Don't Miss |

ಕುಮಟಾ: ಖ್ಯಾತ ಕವಿ, ಸಾಹಿತಿ ಡಾ. ಬಿ.ಎ.ಸನದಿ ಅವರು ಕುಮಟಾ ಹೆರವಟ್ಟಾದ ನಿವಾಸದಲ್ಲಿ ರವಿವಾರ ಬೆಳಗ್ಗೆ ಕೊನೆಯುಸಿರೆಳೆದರು. ಮೃತ ದೇಹವನ್ನು ಅವರ ಹುಟ್ಟೂರಾದ ಬೆಳಗಾವಿ ಸಿಂದೊಳ್ಳಿಗೆ ಕೊಂಡೊಯ್ಯಲು ಸಿದ್ಧತೆ ನಡೆದಿದೆ.

ಬಿ.ಎ.ಸನದಿ 1933ರ ಆ. 18 ರಂದು ಬೆಳಗಾವಿ ಜಿಲ್ಲೆಯ ಶಿಂದೊಳ್ಳಿ ಗ್ರಾಮದಲ್ಲಿ ಜನಿಸಿದ್ದರು.

ಕವಿ ಸನದಿ ಕುರಿತು

ಮನೆಯಲ್ಲಿ ‘ಬಾಬಾ ಸಾಹೇಬ ಅಹಮದ್ ಸಾಹೇಬ ಸನದಿ’ ಎಂಬ ಹೆಸರಿನ ಖ್ಯಾತ ಕವಿ, ಸಾಹಿತಿ ‘ಬಿ.ಎ ಸನದಿ’ ಒಳ್ಳೆಯ ವಾಗ್ಮಿ,, ಅನುವಾದಕಾರ, ಮಕ್ಕಳ ಸಾಹಿತ್ಯ, ನಾಟಕ ರಚನಾಕಾರ ಹಾಗೂ ನಿರ್ದೇಶಕರು.

ಅವರು ಮುಂಬೈ ಆಕಾಶವಾಣಿಯ ಹಿರಿಯ ಅಧಿಕಾರಿಯಾಗಿ ಪಾದಾರ್ಪಣೆ ಮಾಡಿದ ಕಾಲದಲ್ಲಿ ಕನ್ನಡ ರೇಡಿಯೋ ನಾಟಕಗಳು, ಉಪನ್ಯಾಸಗಳು ಸರಸ ಸಂಭಾಷಣೆಗಳು ಯಕ್ಷಗಾನ ಆಟಗಳು, ಕರ್ನಾಟಕದಿಂದ ಮುಂಬೈಗೆ ಆಗಮಿಸುತ್ತಿದ್ದ ಸುಪ್ರಸಿದ್ಧ ಕವಿಗಳ ಜೊತೆ ಸಂವಾದ ಸಂದರ್ಶನಗಳು ‘ಮುಂಬೈ ಆಕಾಶವಾಣಿ’ಯಲ್ಲಿ ತಪ್ಪದೆ ಆಯೋಜಿಸಲ್ಪಡುತ್ತಿದ್ದವು.

ಮಾಧ್ಯಮಿಕ ಶಿಕ್ಷಣ ವನ್ನು ಬೆಳಗಾವಿಯ ಜಿ.ಎ.ಹೈಸ್ಕೂಲ್ ಹಾಗು ಬಿ.ಎ. ವ್ಯಾಸಂಗವನ್ನು ಲಿಂಗರಾಜ ಕಾಲೇಜ್ ಕರ್ನಾಟಕ ವಿಶ್ವ ವಿದ್ಯಾಲಯ ಗಳಲ್ಲಿ ಪೂರೈಸಿದ ಸನದಿಯವರು ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪದವಿ ಪಡೆದು, ಬೆಡಕೀಹಾಳ್-ಶಮನೇವಾಡಿ ಹೊಸ ಹೈಸ್ಕೂಲಿನಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದ್ದರು.

ಇವರ ಸಾಹಿತ್ಯ

1949 ರಲ್ಲಿ, ಸನದಿಯವರ ಪ್ರಥಮ ಕವನ ಜಯ ಕರ್ನಾಟಕವು ನವಯುಗ ಪತ್ರಿಕೆಯಲ್ಲಿ ಪ್ರಕಟವಾಯಿತು. ಸನದಿಯವರು 16 ವರ್ಷದವರಿದ್ದಾಗ ಅವರು ರಚಿಸಿದ, ಪತಿವ್ರತಾ ಪ್ರಭಾವ ನಾಟಕ ವನ್ನು ಸಿಂದೊಳ್ಳಿ ಯಲ್ಲಿ ಪ್ರದರ್ಶನಗೊಂಡಿತು.

1955 ರಲ್ಲಿ ಶಮನೇವಾಡಿಯಲ್ಲಿ ಸ್ಥಳೀಯ ಐವರು ಕವಿಗಳನ್ನು ಸೇರಿಸಿಕೊಂಡು ಸ್ನೇಹ ಪ್ರಕಾಶನವನ್ನು ಪ್ರಾರಂಭಿಸಿ ಐದಳ ಮಲ್ಲಿಗೆ ಯನ್ನು ಪ್ರಕಟಿಸಿದರು. ಮುಂದೆ ಅದೇ ಪ್ರಕಾಶನದಿಂದ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಲ್ಲದೇ ಆ ಗಡಿಭಾಗದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಸಾರ ಕಾರ್ಯ ಮಾಡಿದರು.

1956 ರಲ್ಲಿ ದಿ.ಎಸ್.ಡಿ.ಇಂಚಲರ ಜೊತೆಗೂಡಿ ಚೇತನ ಪ್ರಕಾಶನವನ್ನು ಆರಂಭಿಸಿದರು. ಕರ್ನಾಟಕ ಏಕೀಕರಣ ದಿನೋತ್ಸವದ ಅಂಗವಾಗಿ ವಿಜಯ ದುಂದುಭಿ ಎಂಬ ಪ್ರಾತಿನಿಧಿನಿಕ ಕವನ ಸಂಕಲನವನ್ನು ಪ್ರಕಟಿಸಿದರು.

1962 ರಲ್ಲಿ ಬೆಳಗಾವಿಯ ವಿಕಾಸ ಪತ್ರಿಕೆಯ ಸಹಾಯಕ ಸಂಪಾದಕತ್ವ ನಿರ್ವಹಿಸಿದರು. 1965 ರಲ್ಲಿ ಕಲಬುರ್ಗಿ ಯಲ್ಲಿ ನೃಪತುಂಗ ಪ್ರಕಾಶನ ಆರಂಭಿಸಿದರು.

ಜಿಲ್ಲಾ ಮತ್ತು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಟಿಗಳ ಉದ್ಘಾಟಕರಾಗಿ, ಅಧ್ಯಕ್ಷರಾಗಿ ಭಾಗವಹಿಸಿದ್ದರು. ಕೆನಡಾದ ಟೊರಾಂಟೋ ನಗರದ ಕನ್ನಡ ಸಂಘದ ಕವಿ ಸಮ್ಮೆಳನದ ಅಧ್ಯಕ್ಷತೆಯನ್ನೂ ವಹಿಸಿದ್ದರು.

2011ರ ಎಪ್ರಿಲ್ ಒಂದೇ ತಿಂಗಳಿನಲ್ಲಿ ಉತ್ತರ ಕನ್ನಡ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರಾಗಿದ್ದರು. ಯು.ಎ.ಇ ; ಸಿಂಗಾಪುರ ; ಮಲೇಶಿಯಾ, ಅಮೆರಿಕಾ ಮತ್ತು ಕೆನಡಾ ದೇಶಗಳಲ್ಲಿ ಸಂಚರಿಸಿ ಬಂದಿದ್ದಾರೆ.

ಪುರಸ್ಕಾರಗಳು

1962ರಲ್ಲಿ, ತಾಜ್ ಮಹಲ್ (ಕವನಸಂಗ್ರಹ)ಕ್ಕೆ, ರಾಜ್ಯ ಸರಕಾರದ ಪ್ರಶಸ್ತಿ, 1967ರಲ್ಲಿ, ಪ್ರತಿಬಿಂಬ (ಕವನ ಸಂಗ್ರಹ)ಕ್ಕೆ, ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, 1969ರಲ್ಲಿ, ಧ್ರುವಬಿಂದು (ಕವನ ಸಂಗ್ರಹ)ಕ್ಕೆ, ಭಾರತ ಸರಕಾರದ ಪ್ರಶಸ್ತಿ. 1984ರಲ್ಲಿ, ಇಲ್ಲಿ ಸಲ್ಲುವರು (ವಚನ ವಿಮರ್ಶೆ)ಗೆ, ಕಾವ್ಯಾನಂದ ಪುರಸ್ಕಾರ ಹಾಗು ಇಳಕಲ್ಲದ ಚಿತ್ತರಗಿ ಸಂಸ್ಥಾನ ಮಠದ ವೀರಶೈವ ಸಾಹಿತ್ಯ ಪ್ರಶಸ್ತಿ.

ಸಮಗ್ರ ಸಾಹಿತ್ಯಕ್ಕೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಸನ್ಮಾನ ಹಾಗು ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ. ದೆಹಲಿ ಕನ್ನಡಿಗ ಪರವಾಗಿ ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ, ಡಾ . ಗೌರೀಶ ಕಾಯ್ಕಿಣಿಯವರಿಂದ ‘ಮಾನವ್ಯ ಕವಿ’ ಎಂದು ಬಿರುದಾಂಕಿತರಾದರು.

ಕರ್ನಾಟಕ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್, ಸಿರಿಗನ್ನಡ ಗೌರವ ಪ್ರಶಸ್ತಿ, ಸಾಧನ ಶಿಖರ ಪ್ರಶಸ್ತಿ ಹಾಗು ‘ಪಂಪ ಪ್ರಶಸ್ತಿ’ ಪಡೆದಿದ್ದಾರೆ.

ಬಿ.ಎ.ಸನದಿ ನಿಧನಕ್ಕೆ ಜಿಲ್ಲಾಧಿಕಾರಿ ಕಂಬನಿ

ಕಾರವಾರ:  ಭಾನುವಾರ ಮುಂಜಾನೆ ನಿಧನರಾದ ಪಂಪ ಪ್ರಶಸ್ತಿ ಪುರಸ್ಕøತ ಸಾಹಿತಿ ಬಿ.ಎ.ಸನದಿ ಅವರ ನಿಧನಕ್ಕೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
    
ಹಿರಿಯ ಸಾಹಿತಿ ಹಾಗೂ ಪಂಪ ಪ್ರಶಸ್ತಿ ಪುರಸ್ಕøತ ಬಿ.ಎ.ಸನದಿ ಅವರ ಸನದಿ ಅವರ ನಿಧನದ ಸುದ್ದಿ ನಿಜಕ್ಕೂ ದುಃಖ ತಂದಿದೆ. ಉತ್ತರ ಕನ್ನಡ ಹಾಗೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅವರ ಸಾಧನೆ ಅಪಾರ. ಸನದಿ ಅವರ ನಿಧನದಿಂದ ಕನ್ನಡ ಸಾಹಿತ್ಯ ಕ್ಷೇತ್ರ ಬಡವಾದಂತಾಗಿದೆ ಎಂದು ಅವರು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.
    
ನಿಧನದ ಸುದ್ದಿ ತಿಳಿದ ಕೂಡಲೆ ಕುಮಟಾ ಸಹಾಯಕ ಕಮಿಷನರ್ ಅವರನ್ನು ಮೃತರಿಗೆ ಅಂತಿಮ ಗೌರವ ಸಲ್ಲಿಸಲು ನಿಯೋಜಿಸಲಾಗಿತ್ತು. ಆದರೆ ಅವರ ಕುಟುಂಬ ವರ್ಗದವರು ಮುಂಜಾನೆಯೇ ಅವರ ಬೆಳಗಾವಿ ಜಿಲ್ಲೆಯ ಹುಟ್ಟೂರಿಗೆ ಮೃತದೇಹವನ್ನು ಕೊಂಡೊಯ್ದಿದ್ದರಿಂದ ಅದು ಸಾಧ್ಯವಾಗಲಿಲ್ಲ. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಸನದಿ ಅವರ ಕುಟುಂಬ ವರ್ಗದವರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

ಕಸಪಾ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಸಂತಾಪ 

ಸನದಿ ಅವರ ಆಪ್ತರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷರಾಗಿರುವ ಅರವಿಂದ ಕರ್ಕಿಕೋಡಿ ಅವರು ಡಾ ಸನದಿ  ಅವರ ಮನೆಗೆ ಭೇಟಿ ನೀಡಿ ಮೃತರಿಗೆ ಸಂತಾಪಕೋರಿದ್ದಾರೆ. ಈ ವೇಳೆ ಯುಕೆ ನ್ಯೂಸ್ ಜೊತ ಮಾತನಾಡಿ. ಡಾ ಸನದಿ ಅವರನ್ನ ಕಳೆದುಕೊಂಡಿರುವುದು ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಸಾಹಿತ್ಯ ಲೋಕಕ್ಕೆ ಅವರ ಸೇವೆ ಇನ್ನೂ ಸಹ ಬೇಕಿತ್ತು. ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಅಂತಾ ಹೇಳಿದ್ರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...