ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಮಂಗಳವಾರ ನಡೆದ ಮತ ವಿಭಜನೆ ಪ್ರಕ್ರಿಯೆಯಲ್ಲಿ ಸಮ್ಮಿಶ್ರ ಸರ್ಕಾರದ ಪರ 99 ಶಾಸಕರು ಮತ ಹಾಕಿದರೆ, ಪ್ರತಿಪಕ್ಷದ ಪರ 105 ಶಾಸಕರು ಮತ ಹಾಕಿದರು. ತನ್ಮೂಲಕ ಸಂಖ್ಯಾಬಲ ಇಲ್ಲದೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಹುಮತ ಕಳೆದುಕೊಂಡು ಅಧಿಕಾರದಿಂದ ಕೆಳಗಿಳಿಯಿತು.
ಇದಕ್ಕೂ ಮುನ್ನ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಿದ ಬಳಿಕ ಸ್ಪೀಕರ್ ಕೆ.ಆರ್. ರಮೇಶ್ಕುಮಾರ್ ಧ್ವನಿಮತದ ಪ್ರಕ್ರಿಯೆಗೆ ಮುಂದಾದರು. ಆನಂತರದಲ್ಲಿ ಮತ ವಿಭಜನೆ ಪ್ರಕ್ರಿಯೆ ನಡೆಸುವಂತೆ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದರು. ಅದರಂತೆ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ಕುಮಾರ್ ಮತ ವಿಭಜನೆಗೆ ಹಾಕಿದರು.
ಇದಾದ ಬಳಿಕ 2 ನಿಮಿಷ ಕಾಲ ಬೆಲ್ ಹಾಕಿ ಎಲ್ಲ ಸದಸ್ಯರನ್ನು ಒಳಬರುವಂತೆ ಸೂಚಿಸಲಾಯಿತು. ಬಳಿಕ, ಸದನದ ಎಲ್ಲ ಬಾಗಿಲನ್ನೂ ಮುಚ್ಚಲಾಯಿತು. ಆನಂತರ ಸರ್ಕಾರ ಪರ ಮತ್ತು ಸರ್ಕಾರದ ವಿರುದ್ಧ ಇರುವ ಶಾಸಕರನ್ನು ಸಾಲುವಾರು ಎಣಿಕೆ ಮಾಡಿ ಸರ್ಕಾರದ ಪರ ಹಾಗೂ ವಿರುದ್ಧ ಇರುವ ಶಾಸಕರನ್ನು ಎಣಿಕೆ ಮಾಡಿದರು. 15 ಮಂದಿ ಅತೃಪ್ತ ಶಾಸಕರು ಹಾಗೂ ಇತರೆ 5 ಶಾಸಕರು ವಿಶ್ವಾಸಮತ ಯಾಚನೆ ಪ್ರಕ್ರಿಯೆಯಿಂದ ದೂರವುಳಿದರು.