ಉ.ಪ್ರ.: ದ.ಕೊರಿಯಾ ವಿದ್ಯಾರ್ಥಿನಿಯರಿಗೆ ಕಿರುಕುಳ; ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು
ಮೀರಟ: ಮತಾಂತರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ದಕ್ಷಿಣ ಕೊರಿಯಾ ಮೂಲದ ಇಬ್ಬರು ವಿದ್ಯಾರ್ಥಿನಿಯರಿಗೆ ಸಂಘ ಪರಿವಾರದ ಕಾರ್ಯ ಕರ್ತರು ಕಿರುಕುಳ ನೀಡಿದ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವುದು ಗಮನಕ್ಕೆ ಬಂದ ಬಳಿಕ ಉತ್ತರಪ್ರದೇಶ ಪೊಲೀಸರು ಸೋಮ ವಾರ ಆರೋಪಿಗಳನ್ನು ಅನಾಮಿಕ ವ್ಯಕ್ತಿಗಳೆಂದು ಪರಿಗಣಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮೀರಟ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾನಿಲ ಯದಲ್ಲಿ ಶನಿವಾರ ಈ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ವೀಡಿಯೊದಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಗುಂಪೊಂದು ಕೊರಿಯಾ ಮೂಲದ ವಿದ್ಯಾರ್ಥಿನಿಯರನ್ನು ಸುತ್ತುವರಿದು ಹಾಗೂ “ನೀವು ಯಾರು?, ಆಗಮಿಸಿದ ಉದ್ದೇಶ ಏನು ? ಎಂದು ಪ್ರಶ್ನಿಸುತ್ತಿರುವುದು ಕಂಡು ಬಂದಿದೆ. “ದೇವರು ಒಬ್ಬನೇ, ಅವರು ರಾಮ. ಬೇರೆ ದೇವರು ಇಲ್ಲ' ಎಂದು ವ್ಯಕ್ತಿಯೋರ್ವ ವಿದ್ಯಾರ್ಥಿನಿಯರಿಗೆ ಹೇಳುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. “ಇವರು ಕ್ರಿಶ್ಚಿಯನ್ ಮಿಷನರಿಗಳು. ಇವರು ಇಲ್ಲಿಗೆ ಆಗಮಿಸಲು ಬಯಸುತ್ತಾರೆ. ಇದು ತಪ್ಪು' ಎಂದು ಹೇಳುತ್ತಿರುವುದು ಕೂಡ ವೀಡಿಯೊದಲ್ಲಿ ಕೇಳಿ ಬಂದಿದೆ.
ಕೆಲವು ಕಾರ್ಯಕರ್ತರು “ಜೈಶ್ರೀರಾಮ್” ಎಂದು ಘೋಷಣೆ ಕೂಗುತ್ತಿರುವುದು ಕೂಡ ದಾಖಲಾಗಿದೆ.
ಅವರಲ್ಲಿ ಓರ್ವ ವಿದ್ಯಾರ್ಥಿನಿ ಹಿಂದಿಯಲ್ಲಿ ವಿವರ ನೀಡಲು ಪ್ರಯತ್ನಿಸಿದರೂ ಸಂಘ ಪರಿವಾರದ ಕಾರ್ಯಕರ್ತರು ಕಿರುಕುಳ ನೀಡುವುದನ್ನು ಮುಂದುವರಿಸಿದ್ದಾರೆ.