ಕೋಲಾರ: ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಬಿಸಿಯೂಟದ ಅಡುಗೆ ಕೋಣೆ ಬಾಗಿಲು ಮುರಿದಿರುವ ಘಟನೆ ವರದಿಯಾಗಿದ್ದು, ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಯುಗಾದಿಯ ಮುನ್ನಾದಿನ ರಾತ್ರಿ ಚೋರರು ಅಡುಗೆಕೋಣೆಯ ಬಾಗಿಲು ಮೀಟಿ ಒಳ ಪ್ರವೇಶಿಸಿದ್ದು, ಅಲ್ಲೇ ತಾವೇ ಸ್ವತಃ ಅನ್ನ,ಸಾಂಬಾರು ಮಾಡಿ ತಿಂದು ನಂತರ ಊಟವನ್ನು ಡಬ್ಬಿಯೊಂದರಲ್ಲಿ ಕೊಂಡೊಯ್ದಿದ್ದಾರೆ.
ಕೇವಲ ಊಟಕ್ಕೆ ಯಾರೋ ಮಾಡಿರುವ ಕೃತ್ಯ ಇದು ಎಂದೇ ಭಾವಿಸಲಾಗಿದ್ದು, ಅಡುಗೆ ಕೋಣೆಯಲ್ಲಿದ್ದ ಮತ್ತಿನ್ಯಾವುದೇ ವಸ್ತುಗಳನ್ನು ಚೋರರು ಮುಟ್ಟಿಲ್ಲ.
ಯುಗಾದಿಯಂದು ಬೆಳಗ್ಗೆ ಬಾಗಿಲು ಮುರಿದಿರುವುದು ಕಂಡು ಬಂದಿದ್ದು, ಸ್ಥಳಕ್ಕೆ ಎಸ್ಡಿಎಂಸಿ ಅಧ್ಯಕ್ಷ ಮುನಿಯಪ್ಪ, ಸದಸ್ಯ ಮುಳ್ಳಹಳ್ಳಿ ಮಂಜುನಾಥ್, ಮುಖಂಡ ಕಂಡಕ್ಟರ್ ಮುನಿಯಪ್ಪ, ಅಡುಗೆ ಸಿಬ್ಬಂದಿ ನೇತ್ರಾವತಿ,ದಾಕ್ಷಾಯಿಣಿ ಮತ್ತಿತರರು ಹಾಜರಿದ್ದರು.
ಕಳೆದೆರಡು ತಿಂಗಳ ಹಿಂದೆಯಷ್ಟೇ ಶಾಲೆಯ ಕೊಠಡಿಯೊಂದರ ಬಾಗಿಲು ಮುರಿದು ಮೂರು ಬ್ಯಾಟರಿಗಳನ್ನು ಚೋರರು ಕಳುವು ಮಾಡಿದ್ದರು. ಇದು ಆತಂಕಕಾರಿಯಾಗಿದ್ದು, ಪೊಲೀಸರು ಚೋರರನ್ನು ಪತ್ತೆಹಚ್ಚಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.