ಕೋಲಾರ, ಆಗಸ್ಟ್ 23 : ಜನರು ಶೌಚಾಲಯ ನಿರ್ಮಿಸಿಕೊಂಡರು ಅವುಗಳನ್ನು ಬಳಕೆ ಮಾಡಿಕೊಳ್ಳದೆ ಹಾಗೆ ಉಳಿದಿವೆ ಅದ್ದರಿಂದ ಅವರಲ್ಲಿ ಶೌಚಾಲಯ ಬಳಕೆಯಿಂದ ಆಗುವ ಅನುಕೂಲಗಳನ್ನು ಜನರಲ್ಲಿ ಅರಿವು ಮೂಡಿಸಿ ಬಳಸುವಂತೆ ಆಗಬೇಕು ಎಂದು ತಾಲ್ಲೂಕು ಪಂಚಾಯತಿಯ ಅಧ್ಯಕ್ಷ ಸೂಲೂರು ಅಂಜಿನಪ್ಪ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯ ಸಂಯುಕ್ತ ಆಶ್ರಯದಲ್ಲಿ ಇಂದು ತಾಲ್ಲೂಕು ಪಂಚಾಯತಿಯ ಸಭಾಂಗಣದಲ್ಲಿ ಹಮ್ಮಿಕೋಳ್ಳಲಾಗಿದ್ದ ಶೌಚಾಲಯಕ್ಕಾಗಿ ಸಮರ ಎಂಬ ಕಾರ್ಯಗಾರದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸರ್ಕಾರ ಶೌಚಾಲಯ ನಿರ್ಮಾಣ ಕಾಮಾಗಾರಿಯನ್ನು ಯಾವುದಾದರೂ ಕಂಪನಿಗೆ ವಹಿಸಿದ್ದರೆ 2 ತಿಂಗಳೊಳಗೆ ಸಂಪೂರ್ಣ ಶೌಚಾಲಯ ನಿರ್ಮಾಣವಾಗುತ್ತಿದ್ದವು ಆದರೆ ಜನರೆ ಶೌಚಾಲಯ ನಿರ್ಮಿಸಿಕೊಂಡರೆ ಅದರ ಬಳಕೆಯ ಮಹತ್ವ ಅರಿತು ಉಪಯೋಗಿಸುತ್ತಾರೆ ಎಂಬ ಸದುದ್ದೇಶದಿಂದ ಸ್ವತಃ ಅವರೆ ನಿರ್ಮಿಸಿಕೊಳ್ಳಲಿ ಪ್ರೋತ್ಸಾಹಧನ ನೀಡುತ್ತಿದೆ ಎಂದರು.
ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 15 ಸಾವಿರ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ 12 ಸಾವಿರ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಪ್ರತಿಯೊಬ್ಬರು ಶೌಚಾಲಯ ನಿರ್ಮಿಸಿಕೊಂಡು ಬಳಕೆ ಮಾಡಬೇಕು. ತಾಲ್ಲೂಕಿನಲ್ಲಿ ಒಟ್ಟು 36 ಗ್ರಾಮಪಂಚಾಯತಿಗಳಿದ್ದು ಇದರಲ್ಲಿ ಇಗಾಗಲೇ 8 ಪಂಚಾಯತಿಗಳು ಸಂಪೂರ್ಣ ಶೌಚಾಲಯ ನಿರ್ಮಾಣ ಆಗಿವೆ. ಇಗಾಗಲೇ 6 ಸಾವಿರ ಶೌಚಾಲಯ ಕಾಮಾಗಾರಿಗಳು ಪ್ರಗತಿಯಲ್ಲಿದ್ದು ಕೇವಲ 282 ಕುಟುಂಬಗಳ ಶೌಚಾಲಯ ನಿರ್ಮಾಣ ಪ್ರಾರಂಭವೇ ಆಗಿಲ್ಲ ಇವುಗಳನ್ನು ಪ್ರಾರಂಬಿಸಿ ಸೆಪ್ಟೆಂಬರ್ 15 ರೊಳಗೆ ಪೂರ್ಣಗೊಳಿಸಬೇಕು ಎಂದರು.
ಶೌಚಾಲಯ ನಿರ್ಮಿಸಿಕೊಳ್ಳದಿರುವುದು ಆ ಕುಟುಂಬ ಮಹಿಳೆಗೆ ಮಾಡುವ ಅವಮಾನ. ಶೌಚಾಲಯ ಇಲ್ಲದ ಮನೆಯ ಮಹಿಳೆಯರು ಬೆಳಿಗ್ಗೆ 5.30 ರೊಳಗೆ ಹಾಗೂ ಸಂಜೆ 7.00 ಗಂಟೆ ನಂತರ ಶೌಚಾಲಯಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ನಾಚಿಕೆಯ ವಿಷಯ ಎಂದು ವಷಾದ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯತಿಯ ಉಪಾಧ್ಯಕ್ಷೆ ಲಕ್ಷ್ಮಿ ಅವರು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಉದ್ದೇಶಿ ಮಾತಾನಾಡಿ ಶೌಚಾಲಯ ನಿರ್ಮಾಣದಲ್ಲಿ ಯುವಕ ಯುವತಿಯರ ಪಾತ್ರ ಪ್ರಮುಖವಾದುದು. ಇಬ್ಬರು ವಿದ್ಯಾರ್ಥಿಗಳಂತೆ ಒಂದೊಂದು ತಂಡ ಮಾಡಿ ಒಂದು ಪಂಚಾಯತಿಯನ್ನು ವಹಿಸಿ ಜನರಿಗೆ ಶೌಚಾಲಯ ಮಹತ್ವವನ್ನು ತಿಳಿಸಿ ನಿರ್ಮಾಣಕ್ಕೆ ಮನವೋಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಬಾಲಾಜಿ ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.