ಕೋಲಾರ, ಆಗಸ್ಟ್ 26 : ಮಾವು ಬೆಳೆಯುವ ರೈತರು ಹೆಚ್ಚಿನ ಫಸಲನ್ನು ಪಡೆದುಕೊಳ್ಳಲು ವೈಜ್ಞಾನಿಕ
ತಂತ್ರಜ್ಞಾನಗಳನ್ನು ಮಾವು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷರಾದ ಎಲ್. ಗೋಪಾಲಕೃಷ್ಣ ಅವರು ತಿಳಿಸಿದರು.
ತಾಲ್ಲೂಕಿನ ಸೋಮಾಂಬುದಿ ಅಗ್ರಹಾರ ಗ್ರಾಮದ ಗುಡೇಗೌಡರ ಮಾವಿನ ತೋಟದಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಹೊಗಳಗೆರೆ ಮಾವು ಉತ್ಕøಷ್ಟ ಕೇಂದ್ರ, ತೋಟಗಾರಿಕೆ ಇಲಾಖೆ ಇವರ ಸಹಯೋಗದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಮಾವಿನ ತೋಟಗಳಲ್ಲಿ ಸವರುವಿಕೆ ಹಾಗೂ ಪುನಃಶ್ಚೇತನ ಕುರಿತು ತಾಲ್ಲೂಕು ಮಟ್ಟದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾವಿನ ತೋಟಗಳಲ್ಲಿ ಸವರುವಿಕೆ ಹಾಗೂ ಪುನಶ್ಚೇತನ ಮಾಡುವ ಮೂಲಕ ಹೆಚ್ಚು ಇಳುವರಿಯನ್ನು ಪಡೆದುಕೊಳ್ಳಬಹುದು. ಮಾವು ಬೆಳೆಯಲ್ಲಿ ಯಾವುದೇ ರೀತಿಯ ನಷ್ಟ ಎದುರಾಗಲ್ಲ. ಪ್ರಕೃತಿ ವರದಾನವಾದರೆ ನಮಗೆ ಬಹಳ ಸುಲಭ ಬೇಸಾಯ ಹಾಗೂ ಆರ್ಥಿಕವಾಗಿ ಲಾಭ ಪಡೆಯಲು ಮಾವು ಒಳ್ಳೆಯ ಬೇಸಾಯವಾಗಿದೆ ಎಂದು ತಿಳಿಸಿದರು.
ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುವುದಲ್ಲಿ ಕೋಲಾರ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಿದೆ. ಆಧುನಿಕ ತಾಂತ್ರಿಕ ಬೇಸಾಯವನ್ನು ಮಾಡುವವರು ಬೆರಳೆಣ ಕೆಯಷ್ಟು ಮಂದಿ ಮಾತ್ರ ಇದ್ದಾರೆ. ಪ್ರತಿಯೊಬ್ಬರೂ ತಾಂತ್ರಿಕತೆಯನ್ನು ತಮ್ಮ ಮಾವು ಬೇಸಾಯದಲ್ಲಿ ಅಳವಡಿಸಿಕೊಳ್ಳಬೇಕು. ಈ ಕುರಿತು ಜಾಗೃತಿ ಮೂಡಿಸಲು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ವೃತ್ತಿ ಯಾವುದೇ ಇರಲಿ ನಿಷ್ಠೆ, ಶ್ರದ್ಧೆ, ಪ್ರಮಾಣ ಕತೆಯಿಂದ ಕೆಲಸ ಮಾಡಿದರೆ ಸಮಾಜದಲ್ಲಿ ಮುಂದೆ ಬರಲು ಸಾಧ್ಯ. ಹಾಗಾಗಿ ರೈತರು ಕಷ್ಟಪಟ್ಟು ದುಡಿಯುವುದರ ಜೊತೆಗೆ ಆಧುನಿಕ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡಿದ್ದೇ ಆದರೆ ನಷ್ಟದ ಮಾತೇ ಇರುವುದಿಲ್ಲ. ಅಷ್ಟೇ ಅಲ್ಲದೆ ಮಾವು ಹೆಚ್ಚು ಆದಾಯ ಬರುವಂತಹ ಬೆಳೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಗೀತಮ್ಮ ಆನಂದರೆಡ್ಡಿ ಅವರು ಮಾತನಾಡಿ, ಮಾವು ಬೆಳೆಯನ್ನು ಬೆಳೆಯುವ ರೈತರು ತಜ್ಞರ ಮಾತುಗಳನ್ನು ಕೇಳಿ, ಅದನ್ನು ಬೇಸಾಯದಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಹೆಚ್ಚು ಫಸಲನ್ನು ಪಡೆಯುವುದೇ ಅಲ್ಲದೆ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ತಜ್ಞರಾದ ನಿವೃತ್ತ ತೋಟಗಾರಿಕೆ ಅಪರ ನಿರ್ದೇಶಕ ಡಾ|| ಎಸ್.ವಿ. ಹಿತ್ತಲಮನಿ ಅವರು ``ವಯಸ್ಸಾದ ಹಾಗೂ ಅನುತ್ಪಾದಕ ಮಾವಿನ ತೋಟಗಳ ಪುನಃಶ್ಚೇತನ’ ವಿಷಯದ ಬಗ್ಗೆ, ನಿವೃತ್ತ ಪ್ರಧಾನ ವಿಜ್ಞಾನಿ ಡಾ|| ವೈ.ಟಿ.ಎನ್.ರೆಡ್ಡಿ ಅವರು ``ಮಾವಿನಲ್ಲಿ ಪೋಷಕಾಂಶಗಳು ಹಾಗೂ ಅನಿಯತಕಾಲಿಕ ಪಸಲಿನ ನಿರ್ವಹಣೆ’’ ಹಾಗೂ ನಿವೃತ್ತ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹಾಲಲಿಂಗಯ್ಯ ಅವರು `ಮಾವಿನ ಸವರುವಿಕೆ ಹಾಗೂ ಆಕಾರ ನಿರ್ವಹಣೆ’ ಎಂಬ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕದಿರೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಭೂಪತಿರೆಡ್ಡಿ, ಸೊಣ್ಣೇಗೌಡ, ಮಂಜುನಾಥ್, ಮಾಡಿಕೆರೆ ಮಾವು ಅಭಿವೃದ್ಧಿ ಕೇಂದ್ರದ ತೋಟಗಾರಿಕೆ ಉಪನಿರ್ದೇಶಕಿ ಶ್ರೀಮತಿ ಎಂ.ಗಾಯಿತ್ರಿ, ಹೊಗಳಗೆರೆ ಮಾವು ಉತ್ಕøಷ್ಟ ಕೇಂದ್ರದ ಹಾಗೂ ಕೋಲಾರದ ತೋಟಗಾರಿಕೆ ಉಪನಿರ್ದೇಶಕಿ ಶ್ರೀಮತಿ ಎಂ.ಲಾವಣ್ಯ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹೆಚ್.ವಿ. ರವೀಂದ್ರ, ಮತ್ತಿತರು ಭಾಗವಹಿಸಿದ್ದರು.