ಕೋಲಾರ ಜು.24: ಆಕಸ್ಮಿಕವಾಗಿ ಸಂಭವಿಸುವ ಬೆಂಕಿ ಅನಾಹುತಗಳಿಂದ ರಕ್ಷಣೆ ಪಡೆಯಲು ನಾಗರೀಕರಿಗೆ, ವಿದ್ಯಾರ್ಥಿಗಳಿಗೆ ತಿಳುವಳಿಕೆ ಅಗತ್ಯ ಈ ದೆಸೆಯಲ್ಲಿ ಅಗ್ನಿ ದುರ್ಘಟನೆ ತಡೆಯೋಣ ರಾಷ್ಟ್ರದ ಪ್ರಗತಿ ಹೆಚ್ಚಿಸೋಣ ಎಂದು ಜಿಲ್ಲಾ ಅಗ್ನಿಶಾಮಕ ದಳದ ಠಾಣಾಧಿಕಾರಿ ಎಲ್. ಮಾದೇಶ್ ತಿಳಿಸಿದರು.
ತಾಲ್ಲೂಕಿನ ಹರಟಿಯಲ್ಲಿಂದು ಏರ್ಪಡಿಸಿದ್ದ ಅಗ್ನಿ ಅನಾಹುತ ಪ್ರಾತ್ಯಕ್ಷಿಕೆಯಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಬಿಸಿಲು ಮತ್ತು ಗಾಳಿ ಹೆಚ್ಚಾಗಿರುವುದರಿಂದ ಸಾಕಷ್ಟು ಬೆಂಕಿ ಅನಾಹುತಗಳು ನಡೆಯುತ್ತಿವೆ. ಇಂತಹ ಅವಗಡ ತಡೆಯಲು ಸಾಮಾನ್ಯ ತಿಳುವಳಿಕೆ ಅಗತ್ಯ. ಅಗ್ನಿ ದುರಂತದ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆಯನ್ನು ಸಂಪರ್ಕಿಸಬಹುದು ಎಂದರು.
ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಗ್ರಾಮೀಣ ಮಟ್ಟದಲ್ಲಿ ಅಣುಕು ಪ್ರದರ್ಶನ ನೀಡಲಾಗುತ್ತಿದೆ. ಅಗ್ನಿ ಅವಗಡ ಸಂಭವಿಸಿದಾಗ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಎದೆಗುಂದದೆ ಅಪಾಯದಲ್ಲಿ ಸಿಲುಕಿದವರನ್ನು ಮೊದಲು ಹೇಗೆ ರಕ್ಷಣೆ ಮಾಡಬೇಕು, ಹೇಗೆ ಬೆಂಕಿಯನ್ನು ನಂದಿಸಿ ಹತೋಟಿಗೆ ತರಬೇಕು ಎಂಬುದನ್ನು ಪ್ರಾತ್ಯಕ್ಷಿತೆ ಮೂಲಕ ವಿವರಣೆ ನೀಡಿದರು.
ಬಿಸಿಯೂಟ ಅಡುಗೆ ಮನೆಗಳಲ್ಲಿ ಅಡುಗೆ ಅನಿಲ ಸಿಲೆಂಟರ್ಗಳನ್ನು ಗಾಳಿಯಾಡುವ ಸ್ಥಳದಲ್ಲಿ ಇಟ್ಟರೆ ಯಾವುದೇ ಅವಗಡ ಸಂಭವಿಸುವುದಿಲ್ಲ ಮತ್ತು ಮಕ್ಕಳು ಮತ್ತು ಗ್ರಾಮಸ್ಥರಿಗೆ ಅಗ್ನಿ ದುರಂತದ ಬಗ್ಗೆ ಅರಿವು ಮೂಡಿಸಿದರೆ ಅನಾಹುತ ತಪ್ಪಿಸಬಹುದು ಎಂದು ಹೇಳಿದರು.
ಅಡುಗೆ ಅನಿಲ ಸಿಲೆಂಡರ್ಗಳ ನಿರ್ವಹಣೆ, ಅಗ್ನಿ ನಂದಕಗಳ ವಿಧಗಳು ಮತ್ತು ಉಪಯೋಗಿಸುವ ಕ್ರಮಗಳ ಬಗ್ಗೆ, ಅಣುಕು ಪ್ರದರ್ಶದ ಮೂಲಕ ಜಲ ವಾಹನಗಳಿಂದ ಪ್ರತ್ಯಕ್ಷಿತೆ ತಿಳುವಳಿಕೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ನಾಗರೀಕರು ಅಗ್ನಿ ಅನಾಹುತ ಸಂಭವಿಸಿದ ವೇಳೆ ಯಾವುದೇ ಆತಂಕಕ್ಕೆ ಒಳಗಾಗದೆ ಸಂಯಮದಿಂದ ಇಲಾಖೆ ನೀಡಿರುವ ಸಲಹೆ ಪಾಲಿಸಬೇಕು ಎಂದರು.
ವಿದ್ಯಾರ್ಥಿಗಳು ಅಗ್ನಿನಂದಕ, ಜಲವಾಹನಗಳ ವಿವಿಧ ಆಯಾಮಗಳ ಪ್ರಾತ್ಯಕ್ಷಿತೆ ಪರಿಚಯವನ್ನು ಮಾಡಿಕೊಂಡ ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾದ್ಯಾಯರಾದ ಶಶಿವಧನ, ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯ ಜಿ. ಶ್ರೀನಿವಾಸ್, ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನಾಗಪ್ಪನಂದಿ, ಮಣ ಕಂಠ, ಅನಿಲ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.
(ಜಿ. ಶ್ರೀನಿವಾಸ್)
ಕೋಲಾರ
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ