ಕೋಲಾರ: ಚುನಾವಣಾ ವರ್ಷವಾಗಿದ್ದು, ಬ್ಯಾಂಕ್ ಸಿಬ್ಬಂದಿಗೆ ಅಗ್ನಿಪರೀಕ್ಷೆಯ ಕಾಲ, ರಾಜಕೀಯ ಪಕ್ಷಗಳ ಘೋಷಣೆಗಳಿಂದಾಗಿ ಸಾಲ ವಸೂಲಾತಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಎಚ್ಚರಿಕೆಯಿಂದ ಬ್ಯಾಂಕ್ ಉಳಿಸುವ ಕೆಲಸ ಮಾಡಿ ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಬ್ಯಾಂಕ್ ನೌಕರರು, ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಡಿಸಿಸಿ ಬ್ಯಾಂಕಿನ ಎಲ್ಲಾ ಶಾಖೆಗಳ ಅಧಿಕಾರಿ, ಸಿಬ್ಬಂದಿಗಳ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡುತ್ತಿದ್ದರು.
ಚುನಾವಣಾ ವರ್ಷವಾಗಿದ್ದು, ಸಾಲ ಮನ್ನಾ, ಬಡ್ಡಿ ಮನ್ನಾದಂತಹ ಘೋಷಣೆಗಳು ಈಗಾಗಲೇ ಮೊಳಗುತ್ತಿವೆ, ಇದು ಬ್ಯಾಂಕಿನ ಸಾಲ ವಸೂಲಾತಿಯ ಮೇಲೆ ಪರಿಣಾಮ ಬೀರಲಿದೆ, ಬ್ಯಾಂಕ್ ಸಿಬ್ಬಂದಿ ಸಾಲ ಪಡೆದವರ ಮನೆಗಳಿಗೆ ತೆರಳಿ ಮನವೊಲಿಸಿ ಸಾಲ ವಸೂಲಿ ಮಾಡಿ ಎಂದು ಸೂಚಿಸಿದರು.
ಮುಂದೆ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದು ಸರ್ಕಾರ ಜಾರಿಗೆ ತರುವ ಸಾಲ ಮನ್ನಾ,ಬಡ್ಡಿಮನ್ನಾದಂತಹ ಯೋಜನೆಗಳ ಜಾರಿಗೆ ಬ್ಯಾಂಕ್ ಸದಾ ಸಿದ್ದವಿದೆ ಆದರೆ ಚುನಾವಣಾ ಪೂರ್ವ ಭರವಸೆಗಳನ್ನು ನಂಬಿ ಸಾಲ ಪಡೆದ ಸ್ತ್ರೀಶಕ್ತಿಸಂಘಗಳು, ರೈತರು ಸಾಲ ಮರುಪಾವತಿಸದಿದ್ದರೆ ಬಡ್ಡಿಯ ಸುಳಿಗೆ ಸಿಲುಕುತ್ತಾರೆ ಎಂಬ ಅಂಶವನ್ನು ಗಮನಕ್ಕೆ ತನ್ನಿ ಎಂದು ಕಿವಿಮಾತು ಹೇಳಿದರು.
ಸಭೆಯಲ್ಲಿ ಬ್ಯಾಂಕಿನ ಎಜಿಎಂ ಶಿವಕುಮಾರ್, ಹುಸೇನ್ ದೊಡ್ಡಮುನಿ, ಬೈರೇಗೌಡ, ಬಾಲಾಜಿ, ಅರುಣ್ಕುಮಾರ್, ಹ್ಯಾರೀಸ್, ಪದ್ಮಮ್ಮ, ತಿಮ್ಮಯ್ಯ, ವಿ-ಸಾಫ್ಟ್ ಸಿಬ್ಬಂದಿ ವಿಶ್ವಪ್ರಸಾದ್, ಸಿರೀಶ್, ಫರ್ನಾಂಡೀಸ್ ಮತ್ತಿತರರಿದ್ದರು.