ಕೋಲಾರ:- ಶಾಲೆಯ ನಾಲ್ಕು ಗೋಡೆಗಳ ನಡುವೆಯೇ ದೇಶದ ಭವಿಷ್ಯ ಸೃಷ್ಟಿಯಾಗುತ್ತದೆ ಎಂಬ ಮಾತಿದೆ, ನಾವು ಬದ್ದತೆಯಿಂದ ಕೆಲಸ ಮಾಡಿ ಸರ್ಕಾರಿ ಶಾಲೆಗಳನ್ನು ಉಳಿಸೋಣ ಎಂದು ಶಿಕ್ಷಕರಿಗೆ ಶಿಕ್ಷಣಾಧಿಕಾರಿ ಮಾಧವರೆಡ್ಡಿ ಕರೆ ನೀಡಿದರು.
ನಗರದ ಡಿಡಿಪಿಐ ಕಚೇರಿಯಲ್ಲಿ ಮಾಲೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ವರ್ಗಾವಣೆಯಾಗಿರುವ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಆಶ್ರಯದಲ್ಲಿ ಶಿಕ್ಷಕ ಗೆಳೆಯರು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಣ ಇಲಾಖೆಯ ಸರ್ವಾಂಗೀಣ ಅಭಿವೃದ್ದಿಗೆ ಶಿಕ್ಷಕರ ಜವಾಬ್ದಾರಿ ಅಧಿಕವಾಗಿದೆ, ದೇಶದ ಭವಿಷ್ಯವೇ ನಮ್ಮ ಇಲಾಖೆಯ ಕೈಯಲ್ಲಿದೆ ಎಂಬ ಸತ್ಯ ಅರಿತು ನಾವು ಕೆಲಸ ಮಾಡಬೇಕಾಗಿದೆ ಎಂದರು.
ಗುಣಮಟ್ಟದ ಶಿಕ್ಷಣ ನಮ್ಮ ಗುರಿಯಾಗಬೇಕು, ಸರ್ಕಾರಿ ಶಾಲೆಗಳಿಂದ ದೂರವಾಗುತ್ತಿರುವ ಪೋಷಕರು ಇಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎಂದು ಮತ್ತೆ ಬರುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ಆಧುನಿಕತೆ ಬೆಳೆದಂತೆ ಶಿಕ್ಷಣದ ಕಲಿಕಾ ವಿಧಾನವೂ ವಿಕಾಸಗೊಳ್ಳುತ್ತಿದೆ, ಸ್ವರ್ಧಾ ಪೈಪೋಟಿಗೆ ತಕ್ಕಂತೆ ಶಿಕ್ಷಣ ನೀಡಬೇಕಾದಲ್ಲಿ ಶಿಕ್ಷಕರಲ್ಲಿನ ಸಾಮಥ್ರ್ಯವೂ ಹೆಚ್ಚುವುದು ಅನಿವಾರ್ಯ ಎಂದರು.
ನಾವಿಂದು ಮಕ್ಕಳಿಗೆ ಕೌಶಲ್ಯಭರಿತ ಶಿಕ್ಷಣ ನೀಡುವ ಅಗತ್ಯವಿದೆ, ಈ ಸಂದರ್ಭಗಳಲ್ಲಿ ಇಂದಿನ ಮಕ್ಕಳ ಪ್ರತಿಭೆಗೆ ತಕ್ಕಂತೆ ನಮ್ಮ ಕಲಿಕಾ ವಿಧಾನ ಬದಲಿಸಿಕೊಳ್ಳದಿದ್ದರೆ ನಾವು ಉತ್ತಮ ಶಿಕ್ಷಕರಾಗಲು ಸಾಧ್ಯವಿಲ್ಲ ಎಂದರು.
ಜಿಲ್ಲಾ ನೌಕರರ ಸಂಘದ ಖಜಾಂಚಿ ಎಸ್.ಚೌಡಪ್ಪ, ಸರಳ,ಸಜ್ಜನಿಕೆಗೆ ಹೆಸರಾದ ಮಾಧವರೆಡ್ಡಿಯವರು ಜಿಲ್ಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಜಿಲ್ಲಾ ಉಪಸಮನ್ವಯಾಧಿಕಾರಿಗಳಾಗಿ, ಶಿಕ್ಷಣಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದು, ಶಿಕ್ಷಕರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು ಎಂದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ, ಪಿಯು ಉಪನ್ಯಾಸಕರ ಸಂಘದ ರತ್ನಪ್ಪ, ಇಲಾಖೆ ವ್ಯವಸ್ಥಾಪಕ ಸುರೇಶ್, ಶಿಕ್ಷಕರಾದ ವಿ.ಗೋಪಾಲಕೃಷ್ಣ, ಜೆ.ವಿ.ಕೃಷ್ಣಮೂರ್ತಿ, ರಾಮೇಗೌಡ, ಬೈಯ್ಯಾರೆಡ್ಡಿ, ಶ್ರೀನಿವಾಸಲು,ಶಿವಕುಮಾರ್,ನಾರಾಯಣರೆಡ್ಡಿ, ಜಿ.ಎಂ.ಶ್ರೀನಿವಾಸ್, ನಾರಾಯಣಪ್ಪ, ವೃತ್ತಿ ಶಿಕ್ಷಕರ ಸಂಘದ ಕಾರ್ಯದರ್ಶಿ ವೆಂಕಟೇಶ್,ಮುನಿವೆಂಕಟಪ್ಪ, ಸಿರಾಜುದ್ದೀನ್, ಇಲಾಖೆಯ ಪುಷ್ಪ,ಚಂದ್ರಶೇಖರ್,ಸರಸ್ವತಿ, ಗೌರಮ್ಮ, ವೆಂಕಟಲಕ್ಷ್ಮಮ್ಮ, ಬೇಬಿ.ಬ ಯ್ಯಮ್ಮ ಮತ್ತಿತರರು ಉಪಸ್ಥಿತರಿದ್ದರು.