ಕೋಲಾರ.ಆ14: ಸರ್ಕಾರಿ ಕಚೇರಿಯ ವಾಹನವನ್ನು ಹಾಗೂ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ರಾತ್ರಿ ವೇಳೆ ಹಣದ ದಂಧೆಗೆ ಇಳಿದಿರುವ ಆರ್.ಟಿ.ಒ ಇಲಾಖೆಯ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಕೆಲಸದಿಂದ ವಜಾ ಮಾಡಿ ಕಚೇರಿಯಲ್ಲಿ ನಡೆಯುತ್ತಿರುವ ದಲ್ಲಾಳಿಗಳ ಆರ್ಭಟಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಸೋಮವಾರ ನಗರದ ಪ್ರಾದೇಶಿಕ ಸಾರಿಗೆ ನಿಯಂತ್ರಣಾಧಿಕಾರಿ ಕಚೇರಿ ಮುಂದೆ ರೈತ ಸಂಘದಿಂದ ಪ್ರತಿಭಟನೆ ಮಾಡಲಾಯಿತು.
ಆರ್ಟಿ.ಒ ಕಚೇರಿಯು ಭ್ರಷ್ಠಾಚಾರದ ಕೂಪ ಮಾಡಿ ಹಣ ವಸೂಲಿ ಮಡಲು ನಾನೇ ಅಧಿಕಾರಿಗಳನ್ನು ನೇಮಕ ಮಾಡಿದ್ದೇನೆ, ನನಗೂ ಹಣ ಬೇಕು ನೀವು ಯಾರಿಗೆ ಬೇಕಾದರು ದೂರು ನೀಡಿ ಎಂದು ಮನವಿ ನೀಡಲು ಹೋದ ರೈತ ಸಂಘದ ಕಾರ್ಯಕರ್ತರ ಮೇಲೆ ಪ್ರಾದೇಶಿಕ ಸಾರಿಗೆ ನಿಯಂತ್ರಣಾಧಿಕಾರಿ ಅಶೋಕ್ರವರು ಮನವಿಯನ್ನೂ ಸ್ವೀಕರಿಸದೆ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ.
ರೈತ ಸಂಘದ ಮುಖಂಡರು ಅಧಿಕಾರಿ ವಿರುದ್ದ ತಿರುಗಿ ಬಿದ್ದು ಕಚೇರಿಯ ಗೇಟ್ ಮುಂದೆ ಧರಣ ಮಾಡಿ ಅಧಿಕಾರಿ ಅಶೋಕ್ರವರಿಗೆ ತರಾಟೆಗೆ ತೆಗೆದುಕೊಂಡರು. ಪರಿಸ್ಥಿತಿ ವಿಕೋಪಕ್ಕೆರಿ ಸರ್ಕಲ್ ಇನ್ಸ್ಪೆಕ್ಟರ್ ಲೋಕೇಶ್ ಮತ್ತು ಅಲ್ಲಿನ ಆರ್ಟಿಒ ಅಧಿಕಾರಿ ಕಿರಣ್ರವರು ಮದ್ಯ ಪ್ರವೇಶಿಸಿ ಪರಿಸ್ತಿತಿ ತಿಳಿಗೊಳಿಸಿದರು. ನಂತರ ಪ್ರಾಧೇಶಿಕ ಸಾರಿಗೆ ನಿಯಂತ್ರಣಾಧಿಕಾರಿಯನ್ನು ಕಚೇರಿ ಗೇಟ್ಬಳಿ ಕರೆಸಿಕೊಂಡು ಮನವಿ ನೀಡಲಾಯಿತು.
ರೈತ ಸಂಘ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಮಾತನಾಡಿ ಇಂತಹ ದರುಂಕಾರಿ ಅಧಿಕಾರಿಗಳಿಂದ ಸರ್ಕಾರಿ ಕಚೇರಿಗಳಲ್ಲಿ ಕೋಟಿ ಕೋಟಿ ಭ್ರಷ್ಟಾಚಾರ ತಾಂಡವಾಡುತ್ತಿದೆ, ಅಶೋಕ್ರವರು ಕೂಡಲೆ ಹಣದ ದಂಧೆಯಲ್ಲಿ ತೊಡಗಿರುವ ಸಿಬ್ಬಂದಿಯನ್ನು ಈ ಕೂಡಲೆ ಕೆಲಸದಿಂದ ವಜಾಮಾಡಿ ಇಂತವರ ಮೇಲೆ ಆದಾಯ ತೆರಿಗೆ ಇಲಾಖೆಯವರು ನಿಗಾ ವಹಿಸಬೇಕೆಂದರು. ಸರ್ಕಾರ ನಿಯಮಗಳನ್ನು ಪಾಲಿಸಿದ ವಾಹನಗಳನ್ನು ಹಾಗೂ ಸರ್ಕಾರಕ್ಕೆ ತೆರಿಗೆಯನ್ನು ವಂಚಿಸುವ ಲಾರಿ ಮತ್ತು ಮತ್ತಿತರ ವಾಹನಗಳನ್ನು ಮತ್ತು ಪ್ರತಿಯೊಬ್ಬ ನಾಗರೀಕನು ನಿಯಮದ ಪ್ರಕಾರ ವಾಹನ ಪರವಾನಿಗೆ ಪಡೆಯಲು ನೇಮಕ ಮಾಡಿರುವ ಕಚೇರಿ ಇಂದು, ಹಣದ ದಂಧೆಯಾಗಿ ಮಾರ್ಪಡಿಸಿ ಹಣ ಕೊಟ್ಟರೆ, ಆರ್ಟಿಓ ಕಚೇರಿಯನ್ನೇ ಮಾರಾಟ ಮಾಡಲು ಹೊರಟಿರುವ ಹಾಗೂ ಅಧಿಕಾರಿಗಳ ಅಪ್ಪಣೆ ಇಲ್ಲದೇ, ವಾಹನವನ್ನು ರಾತ್ರಿ ವೇಳೆ ಉಪಯೋಗಿಸಿಕೊಂಡು ಹೈವೆ ರಸ್ತೆಯಲ್ಲಿ ದರೋಡೆಗೆ ನಿಂತಿರುವ ಸಿಬ್ಬಂದಿಯ ಹಣದ ಕರ್ಮಕಾಂಡವನ್ನು ಬಿಟಿವಿ ವಿಡೀಯೋ ಮುಖಾಂತರ ಕಾರ್ಯಾಚರಣೆ ಮಾಡಿ ನೇರ ಪ್ರಸಾರ ಮಾಡಿ ಹಗಲು ದರೋಡೆ ಮಾಡಿದ ಹಣವನ್ನು ಸೂಟ್ಕೇಸ್ನಲ್ಲಿ ಇಟ್ಟುಕೊಂಡು ವಾಹನವನ್ನು ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಾರ್ವಜನಿಕರು ಸಾರ್ವಜನಿಕವಾಗಿ ಆಡುತ್ತಿದ್ದ ಮಾತುಗಳಿಗೆ ಪುಷ್ಠಿ ನೀಡಿರುವ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು ಏಕೆಂದರೆ, ತಾವೇ ಖುದ್ದಾಗಿ ಬಿಟಿವಿ ವಾಹಿನಿಗೆ ಸಂದರ್ಶನ ನೀಡಿ ರಾತ್ರಿ ವೇಳೆ ನಾವು ಕಾರ್ಯಾಚರಣೆ ಮಾಡುವಂತಿಲ್ಲ ಎಂದು ಹೇಳಿಕೆ ನೀಡಿರುತ್ತೀರ. ಮತ್ತೊಂದೆಡೆ ನಿಮ್ಮ ಕಚೇರಿಯಲ್ಲಿ ಒಬ್ಬ ದಿನಗೂಲಿ ನೌಕರನಾಗಿ ಕೆಲಸ ಮಾಡುವ ಹೋಂ ಗಾರ್ಡ್ ಮಂಜುನಾಥ್ ಎಂಬುವನು ಇಡೀ ಕಚೇರಿಯನ್ನು ತನ್ನ ಅಂಗೈಲಿ ಇಟ್ಟುಕೊಂಡು ಈ ರೀತಿ ರಾಜಾರೋಷವಾಗಿ ಇಲಾಖೆಯ ಮಾನ ಮರ್ಯಾದೆ ತೆಗೆಯುತ್ತಿದ್ದರೆ ನೀವು ಮೌನವಾಗಿರುವುದಕ್ಕೆ ಕಾರಣವಾದರೂ ಏನು ಎಂದು ಕಿಡಿಕಾರಿದರು.
ಅಧಿಕಾರಿವರ್ಗದವರಿಗೂ ಸಂಪಾದನೆಯಲ್ಲಿ ಪಾಲುದಾರಿಕೆ ಇದೆಯೇ? ನೀವು ನಿಷ್ಠಾವಂತ ಅಧಿಕಾರಿಯೇ ಆಗಿದ್ದರೆ, ಸರ್ಕಾರದ ನಿಯಮಗಳನ್ನು ಪಾಲಿಸದ ವಾಹನಗಳ ಮೇಲೆ ಕೇಸು ದಾಖಲು ಮಾಡಲು ಏಕೆ ಹಿಂಜರಿಯುತ್ತಿದ್ದೀರಾ? ಮತ್ತೊಂದೆಡೆ ತರಬೇತಿ ಇಲ್ಲದೇ, ದಲ್ಲಾಳಿಗಳ ಮುಖಾಂತರ ಹಣ ನೀಡಿದರೆ, ಚಾಲಕ ಪರವಾನಿಗೆ ನೀಡುತ್ತಿದ್ದೀರಿ, ಲಕ್ಷಾಂತರ ತೆರಿಗೆಯನ್ನು ವಂಚಿಸಿ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಬಿಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲೇ ಸಂಚರಿಸುವ ಖಾಸಗಿ ಬಸ್ಗಳ ಮೇಲೆನಿ ಮ್ಮ ಕರ್ತವ್ಯ ನಿಷ್ಠೆ ಎಲ್ಲಿ ಹೋಗಿದೆ ಎಂದು ರೈತ ಸಂಘದ ಕಾರ್ಯಕರ್ತರು ಪ್ರಾದೇಶಿಕ ಸಾರಿಗೆ ಅಧಿಕಾರಿ ಆಶೋಕ್ರವರನ್ನು ತರಾಟೆಗೆ ತೆಗೆದುಕೊಂಡರು.
ನೀವು ನಿಷ್ಠಾವಂತ ಅಧಿಕಾರಿ ಆಗಿದ್ದರೆ, ನಿಮ್ಮ ಇಲಾಖೆ ಮುಂದೆ ಟನ್ಗಟ್ಟಲೇ ತುಂಬಿದ ಜೆಲ್ಲಿ, ಮರಳು , ಕಲ್ಲಿನ ಲಾರಿಗಳು ಹಾದು ಹೋಗುತ್ತಿದ್ದರೂ ನಿಮ್ಮ ಮೌನಕ್ಕೆ ಕಾರಣವೇನು? ಅಲ್ಲಿಗೆ ಅಧಿಕಾರ ಇರುವುದೇ ಲಂಚ ಪಡೆದುಕೊಳ್ಳಲು ಎಂಬ ಉದ್ದೇಶ ನಿಮ್ಮದು. ಆದ್ದರಿಂದ ಮಾನ್ಯರು ಬಿಟಿವಿಯಲ್ಲಿ ಪ್ರಸಾರವಾದ ಆರ್ಟಿಓ ಅಧಿಕಾರಿಗರಳ ಲಂಚಾವತಾರ ವರದಿಯನ್ನು ಆದರಿಸಿ ಆ ವಿಡೀಯೋದಲ್ಲಿರುವ ವಾಹನ ಚಾಲಕ ಹಾಗೂ ಮತ್ತಿತರ ಮೂರು ಜನರನ್ನು ಹಿರಿಯ ಅಧಿಕಾರಿಯಂತೆ ದರ್ಪ ತೋರಿಸುತ್ತಿರುವ ದಿನಗೂಲಿ ನೌಕರ ಮಂಜುನಾಥ್ನನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು. ಇಲ್ಲವಾದರೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಚೇರಿಗೆ ಶಾಶ್ವತವಾಗಿ ಬೀಗ ಹಾಕುವುದರೊಂದಿಗೆ ನಿಮ್ಮ ಕಚೇರಿ ಮುಂದಿನ ರಸ್ತೆಯನ್ನು ಬಂದ್ ಮಾಡುವ ಮುಖಾಂತರ ನ್ಯಾಯ ಪಡೆದುಕೊಳ್ಳಬೇಕಾಗುತ್ತದೆ. ಎಂದು ಎಚ್ಚರಿಸಿದರು.
ಈ ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ. ನಳಿನಿ, ತಾ.ಈಕಾಂಬಳ್ಳಿ ಮಂಜು, ಜಿಲ್ಲಾ ಕಾರ್ಯಧ್ಯಕ್ಷ ವಕ್ಕಲೇರಿ ಹನುಮಯ್ಯ, ಜಿಲ್ಲಾ ಉಪಾಧ್ಯಕ್ಷ ಕೋರಗಂಡಹಳ್ಳಿ ಮಂಜುನಾಥ್, ವಿದ್ಯಾರ್ಥಿ ಮುಖಂಡ ನರಸಾಪುರ ಪುರುಷೋತ್ತಮ್, ತಲಗುಂದ ಖದೀರ್, ಕೆಂಬೋಡಿ ಕೃಷ್ಣೇಗೌಡ, ಶಿವು, ಆಟೋ ರಾಜು ಮುಂತಾದವರು ಹಾಜರಿದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.