ಕೋಲಾರ, ಆ.24:ಮೊಬೈಲ್ ರಿಪೇರಿ ಮತ್ತು ಸರ್ವೀಸ್ ಕ್ಷೇತ್ರವು ಇಂದು ಬೃಹದಕಾರವಾಗಿ ಬೆಳೆದಿದ್ದು, ಲಕ್ಷಾಂತರ ಜನರಿಗೆ ಉದ್ಯೋಗ ಒದಗಿಸಿಕೊಡುವ ವಲಯವಾಗಿದೆ ಎಂದು ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕೆಂಪಣ್ಣ ಹೇಳಿದರು.
ನಗರದ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಕೈಗಾರಿಕಾ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಮೊಬೈಲ್ ರಿಪೇರಿ ಮತ್ತು ಸರ್ವೀಸ್ ತರಬೇತಿ ಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಇಂದು ಬಹುತೇಕ ಎಲ್ಲರು ಮೊಬೈಲ್ ಪೋನ್ ಬಳಸುತ್ತಾರೆ. ಹಲವರ ಜೀವನದ ಭಾಗವಾಗಿ ಮೊಬೈಲ್ ಬಳಕೆಯಾಗುತ್ತಿದೆ. ವ್ಯವಹಾರಿಕ ದೃಷ್ಟಿಯಿಂದಲೂ ಮೊಬೈಲ್ ಅವಶ್ಯಕವಾಗಿದೆ ಎಂದರು.
ಮೊಬೈಲ್ ರಿಪೇರಿ ಮತ್ತು ಸರ್ವೀಸ್ ತರಬೇತಿ ಪಡೆದವರು ಸ್ವ ಉದ್ಯೋಗದ ಮೂಲಕ ಜೀವನ ರೂಪಿಸಿಕೊಂಡು, ಆರ್ಥಿಕವಾಗಿ ಸಧೃಡವಾಗಲು ಅವಕಾಶವಿದೆ ಎಂದು ತಿಳಿಸಿದರು.
ಹೊಸ ಮೊಬೈಲ್ ರಿಪೇರಿ ಮಳಿಗೆ ಪ್ರಾರಂಭಿಸಲು ಬ್ಯಾಂಕ್ಗಳು ಹಲವು ರೀತಿಯಲ್ಲಿ ಸಾಲ ಸೌಲಭ್ಯ ನೀಡಲು ಸಿದ್ದವಿದೆ. ಸರಕಾರದ ಹಲವು ನಿಗಮ, ಮಂಡಳಿಗಳು ಕೂಡ ಸ್ವ ಉದ್ಯೋಗ ರೂಪಿಸಿ ಕೊಳ್ಳುವವರಿಗೆ ಸಾಲ, ಸಬ್ಸಿಡಿ ನೀಡುತ್ತದೆ, ಅದರ ಸೌಲಭ್ಯ ಬಳಸಿಕೊಳ್ಳುವಂತೆ ಕಿವಿಮಾತು ಹೇಳಿದರು.
ತರಬೇತಿ ಸಂಸ್ಥೆಯ ನಿರ್ದೇಶಕ ವೆಂಕಟೇಶ ಶಾಸ್ತ್ರಿ ಮಾತನಾಡಿ, ಮೊಬೈಲ್ ರಿಪೇರಿ ಕ್ಷೇತ್ರವು ಅತ್ಯಂತ ಹೆಚ್ಚು ಸ್ವ ಉದ್ಯೋಗಗಳನ್ನು ಸೃಷ್ಟಿಸುವ ಶಕ್ತಿ ಹೊಂದಿದೆ ಎಂದರು.
ತರಬೇತಿ ಪಡೆದವರು ಮೊಬೈಲ್ ರಿಪೇರಿ ಕ್ಷೇತ್ರದ ಬಗ್ಗೆ ನಿರಂತರವಾಗಿ ವಿಚಾರಗಳನ್ನು ತಿಳಿಯುತ್ತಲೇ ಇರಬೇಕು. ಗ್ರಾಹಕರ ಜೊತೆ ಒಳ್ಳೆಯ ಬಾಂಧವ್ಯ ವೃದ್ದಿಸಿಕೊಂಡರೆ ವ್ಯವಹಾರದಲ್ಲಿ ಪ್ರಗತಿ ಕಾಣಲು ಸಾಧ್ಯ ಎಂದು ತಿಳಿಸಿದರು.
ಶಿಬಿರಾರ್ಥಿಗಳು ಎಲ್ಲಾ ಮೂಲಗಳಿಂದ ಸಿಗುವ ಸಂಪನ್ಮೂಲ, ಅವಕಾಶ ಬಳಸಿಕೊಂಡು ಸ್ವ ಉದ್ಯೋಗದತ್ತ ಹೆಜ್ಜೆ ಹಾಕುವ ಮೂಲಕ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸಬೇಕು ಎಂದು ಹೇಳಿದರು.
ಇದೇ ವೇಳೆ ತರಬೇತಿ ಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ ಅತಿಥಿಗಳು ಪ್ರಮಾಣ ಪತ್ರ ವಿತರಿಸಿ, ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ತರಬೇತುದಾರರಾದ ಕೆ.ವಿ ವಿಜಯ್ ಕುಮಾರ್, ದೇವಲಪಲ್ಲಿ ಎನ್.ಗಿರೀಶ್ ರೆಡ್ಡಿ, ನಾರಾಯಣಸ್ವಾಮಿ, ವೆಂಕಟಾಚಲಪತಿ ಹಾಜರಿದ್ದರು.
ಕೋಲಾರ ಹೊರವಲಯದ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಕೈಗಾರಿಕಾ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಮೊಬೈಲ್ ರಿಪೇರಿ ಮತ್ತು ಸರ್ವೀಸ್ ತರಬೇತಿ ಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಕೆಂಪಣ್ಣ ಪ್ರಮಾಣ ಪತ್ರ ವಿತರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ