ಕಾರವಾರ: ಕುಡಿಯುವ ನೀರು; 10 ತಹಸೀಲ್ದಾರ್‍ಗಳಿಗೆ ಡಿಸಿ ನೋಟಿಸ್

Source: S O News Service | By I.G. Bhatkali | Published on 31st May 2019, 3:31 PM | Coastal News |

ಕಾರವಾರ: ಕುಡಿಯುವ ನೀರಿನ ಅಭಾವವಿರುವ ಗ್ರಾಮಗಳಲ್ಲಿ ಖಾಸಗಿ ಬೋರ್‍ವೆಲ್‍ಗಳನ್ನು ಗುರುತಿಸಿ ಅದರ ಮಾಲಿಕರೊಂದಿಗೆ ಒಪ್ಪಂದ ಮಾಡಿಕೊಂಡು ನೀರು ಸರಬರಾಜು ಮಾಡುವ ಕ್ರಮ ವಹಿಸಿದ ಬಗ್ಗೆ ಮೂರು ದಿನಗಳೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಜಿಲ್ಲೆಯ 10 ತಹಸೀಲ್ದಾರ್‍ಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ಐದು ತಿಂಗಳ ಹಿಂದೆಯೇ ಕುಡಿಯುವ ನೀರಿನ ಅಭಾವ ಬರಬಹುದಾದ ಗ್ರಾಮಗಳಲ್ಲಿ ಹೆಚ್ಚುವರಿ ನೀರು ಇರುವ ಖಾಸಗಿ ಬೋರ್‍ವೆಲ್‍ಗಳನ್ನು ಗುರುತಿಸಿ ಆ ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸೂಚಿಸಿದ್ದರೂ ಈವರೆಗೆ ತಹಸೀಲ್ದಾರ್‍ರವರು ಒಪ್ಪಂದ ಮಾಡಿಕೊಳ್ಳದ ಬಗ್ಗೆ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆ ಅವರು ಪ್ರಗತಿ ಪರಿಶೀಲನೆ ಸಭೆಯಲ್ಲಿ ಆಕ್ಷೇಪಿಸಿ ನೋಟಿಸ್ ಜಾರಿಗೊಳಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿಗಳು ಹಳಿಯಾಳ ತಹಸೀಲ್ದಾರ್ ಹೊರತುಪಡಿಸಿ 10 ಮಂದಿ ತಹಸೀಲ್ದಾರ್‍ರವರಿಗೆ ನೋಟಿಸ್ ಜಾರಿಗೊಳಿಸಿದ್ದಾರೆ.

ಈ ಹಿಂದೆಯೇ ಹೆಚ್ಚುವರಿ ನೀರು ಇರುವ ಬೋರ್‍ವೆಲ್‍ಗಳನ್ನು ಗುರುತಿಸಿದ್ದರು ಕುಡಿಯುವ ನೀರಿನ ಅಭಾವ ಇರುವ ಗ್ರಾಮಗಳಿಗೆ ಒಪ್ಪಂದ ಮಾಡಿಕೊಂಡು ನೀರು ಕೊಟ್ಟಿರುವುದಿಲ್ಲ. ಇನ್ನು ಮೂರು ದಿನದೊಳಗೆ ಒಪ್ಪಂದ ಮಾಡಿಕೊಂಡು ನೀರು ಸರಬರಾಜು ಮಾಡಿದ ಬಗ್ಗೆ ಈ ಕಚೇರಿಗೆ ವರದಿ ಸಲ್ಲಿಸುವಂತೆ ನೋಟಿಸ್‍ನಲ್ಲಿ ತಿಳಿಸಲಾಗಿದೆ.

ಡ್ರಿಲ್ಲಿಂಗ್-ಬ್ಲಾಸ್ಟಿಗ್ ಸ್ಥಗಿತ:
ಸದ್ಯದಲ್ಲೇ ಮುಂಗಾರು ಆರಂಭವಾಗುತ್ತಿದ್ದು ಅಪಾಯವಾಗಬಹುದಾದ ಡ್ರಿಲ್ಲಿಂಗ್ ಮತ್ತು ಬ್ಲಾಸ್ಟಿಂಗ್ ಅನ್ನು ಜಿಲ್ಲಾದ್ಯಂತ ಸ್ಥಗಿತಗೊಳಿಸುವಂತೆ ಎಲ್ಲ ನಾಲ್ಕು ವಿಭಾಗಗಳ ಸಹಾಯಕ ಕಮಿಷನರ್‍ಗಳಿಗೆ ಜಿಲ್ಲಾಧಿಕಾರಿಯವರು ಪತ್ರ ಬರೆದಿದ್ದಾರೆ.

ಡ್ರಿಲ್ಲಿಂಗ್ ಮತ್ತು ಬ್ಲಾಸ್ಟಿಂಗ್‍ನಿಂದ ಮಳೆಗಾಲದಲ್ಲಿ ರಸ್ತೆ ಬದಿಯ ಗುಡ್ಡ ಕುಸಿದು ಪ್ರಾಣಹಾನಿ, ಆಸ್ತಿ ಪಾಸ್ತಿಗಳು ಹಾನಿಯಾದ ಬಗ್ಗೆ ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಡ್ರಿಲ್ಲಿಂಗ್ ಮತ್ತು ಬ್ಲಾಸ್ಟಿಂಗ್ ಅನ್ನು ಸ್ಥಗಿತಗೊಳಿಸುವಂತೆ ಎಲ್ಲಾ ಸಹಾಯಕ ಕಮಿಷನರ್‍ಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅಲ್ಲದೆ, ಮುಂಗಾರಿನಲ್ಲಿ ತೀವ್ರ ಮಳೆಯಿಂದ ನಗರ ಪ್ರದೇಶಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತವೆ. ಈ ಸಂದರ್ಭದಲ್ಲಿ ಪ್ರವಾಹ ಎದುರಿಸುವ ಸಂಬಂಧ ದೋಣಿಗಳ ವ್ಯವಸ್ಥೆ, ಈಜುಗಾರರ ಮಾಹಿತಿ ಹಾಗೂ ಗಂಜಿಕೇಂದ್ರಗಳನ್ನು ತೆರೆಯಬೇಕಾಗಬಹುದಾದ ಪ್ರದೇಶಗಳನ್ನು ಮೊದಲೇ ಗುರ್ತಿಸಿಕೊಳ್ಳುವಂತೆ ಹಾಗೂ ಈ ಸಂಬಂಧ ಎಲ್ಲ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಅವರು ಮತ್ತೊಂದು ಪತ್ರದಲ್ಲಿ ಸೂಚಿಸಿದ್ದಾರೆ.

ಕಡಲ್ಕೊರೆತ ಕಾಮಗಾರಿ ಪ್ರಸ್ತಾವಣೆಗೆ ಸೂಚನೆ:

ಮುಂಗಾರು ಆರಂಭವಾಗುವ ಮುನ್ನ ಜಿಲ್ಲೆಯ ಕರಾವಳಿ ಭಾಗದಲ್ಲಿ ಕಡಲಕೊರೆತ ಸಾಧ್ಯತೆಗಳ ಪ್ರದೇಶಗಳನ್ನು ಗುರುತಿಸಿ ಕೈಗೊಳ್ಳಬಹುದಾದ ಕಾಮಗಾರಿಗಳ ಪ್ರಸ್ತಾವನೆಯಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಬಂದರು ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
    ಬುಧವಾರ ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ಸಭೆಯಲ್ಲಿ ಪ್ರಸ್ತಾಪವಾದಂತೆ ಮುಂಜಾಗ್ರತಾ ಕ್ರಮವಾಗಿ ಕಡಲಕೊರೆತವನ್ನು ತಪ್ಪಿಸಲು ಶೀಘ್ರವೇ ಪ್ರಸ್ತಾವನೆ ಸಲ್ಲಿಸುವಂತೆ ಅವರು ಪತ್ರಬರೆದು ಸೂಚಿಸಿದ್ದಾರೆ.

ಅಡಿಕೆ ಬೆಳೆ ವರದಿ:
ಜಿಲ್ಲೆಯಲ್ಲಿ ಮಳೆ ಕೊರತೆ ಅಥವಾ ಬಿಸಿಲಿನ ತಾಪದಿಂದ ಅಡಿಕೆ ಬೆಳೆಗಳು ಒಣಗುತ್ತಿರುವ ಬಗ್ಗೆ ಬೆಳೆಗಾರರು ಆತಂಕದಲ್ಲಿರುವ ಬಗ್ಗೆ ವರದಿಯಾಗುತ್ತಿತ್ತು ಈ ಬಗ್ಗೆ ಸವಿವರವಾದ ವರದಿಯನ್ನು ಶೀಘ್ರವೇ ಸಲ್ಲಿಸುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿಯವರು ಸೂಚಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಇತ್ತೀಚಿನ ಸಭೆಯಲ್ಲಿ ಈ ಬಗ್ಗೆ ಸೂಚನೆ ನೀಡಿದ್ದು ಕೂಡಲೆ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆ ನೀರಿನ ಕೊರತೆ ಬನಿಲಿನ ತಾಪದಿಂದ ಹಾನಿಯಾಗಿರುವ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಅವರು ಸೂಚಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...