ಕಾರವಾರ ಮಾರ್ಚ 21 : ಮಹಾರಾಷ್ಟ್ರದ ಥಾಣೆಯಲ್ಲಿ ಮಾರ್ಚ್ 19ರಂದು ನಡೆದ ರಾಷ್ಟ್ರೀಯ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ ಕಾರವಾರದ ಕ್ರೀಡಾಶಾಲೆಯ ವಿದ್ಯಾರ್ಥಿಗಳನ್ನು ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಅವರು ಮಂಗಳವಾರ ಅಭಿನಂದಿಸಿದರು.
ಆರ್ಕಿಡ್ ನ್ಯಾಷನಲ್ ಸ್ಕೂಲ್ ಮತ್ತು ಇತಿಹಾ ಸಂಸ್ಥೆ ಆಯೋಜಿಸಿದ್ದ ಮುಕ್ತ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಪದಕ ಗಳಿಸಿದ್ದು, ಹುಡುಗಿಯರ ವಿಭಾಗದಲ್ಲಿ 10ಕಿಮಿ ಸ್ಪರ್ಧೆಯಲ್ಲಿ ಮೇಘಾ ಸಂಜು ಪರಗೋಜಿ 41.28 ನಿಮಿಷಗಳಲ್ಲಿ ಕ್ರಮಿಸಿ 3ನೇ ಸ್ಥಾನ ಗಳಿಸಿದ್ದಾಳೆ. ಇದೇ ವಿಭಾಗದಲ್ಲಿ ಗಾಯತ್ರಿ ಎಚ್.ಕೆಸುಲ್ಕರ್ 43.36ನಿಮಿಷಗಳಲ್ಲಿ ಕ್ರಮಿಸಿ 5ನೇ ಸ್ಥಾನ ಪಡೆದಿದ್ದಾಳೆ. 5ಕಿಮಿ ಸ್ಪರ್ಧೆಯಲ್ಲಿ ಫೈರೋಜಾ ಜಿ. ಅಂಗಡಿಕರ್ 20.16ನಿಮಿಷದಲ್ಲಿ ಕ್ರಮಿಸಿ 2ನೇ ಸ್ಥಾನ ಹಾಗೂ 3ಕಿಮಿ ಸ್ಪರ್ಧೆಯಲ್ಲಿ ರುಚಿತಾ ಜಿ. ನೇಸರ್ಗಿ 13.45ನಿಮಿಷದಲ್ಲಿ ಪೂರೈಸಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಹುಡುಗರ ವಿಭಾಗದಲ್ಲಿ 10ಕಿಮಿ ವಿಭಾಗದಲ್ಲಿ ಆದಂ ಎ. ನಾಯ್ಕ 38.18ನಿಮಿಷದಲ್ಲಿ ಕ್ರಮಿಸಿ 5ನೇ ಸ್ಥಾನ ಪಡೆದರೆ, 3ಕಿಮಿ ವಿಭಾಗದಲ್ಲಿ ಕಿರಣ್ ಎ ವಾಸನ್ 12.13ನಿಮಿಷದಲ್ಲಿ ಕ್ರಮಿಸಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.
ಮ್ಯಾರಥಾನ್ ಸ್ಪರ್ಧೆಯದಲ್ಲಿ ಭಾಗವಹಿಸಿ ಮಿಂಚಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಪರ ಜಿಲ್ಲಾಧಿಕಾರಿ ಅವರು ಶುಭ ಹಾರೈಸಿ, ಕ್ರೀಡಾ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗಳಿಗೆ ಎಲ್ಲಾ ರೀತಿಯ ನೆರವು ಜಿಲ್ಲಾಡಳಿತದಿಂದ ನೀಡಲಾಗುವುದು ಎಂದು ಹೇಳಿದರು.
ಕೋಚ್ ಪ್ರಕಾಶ ರೇವಣಕರ್, ರುಡ್ಸೆಟ್ ಹಳಿಯಾಳದ ಆಡಳಿತಾಧಿಕಾರಿ ಪ್ರಭು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.